ದಾವಣಗೆರೆ : ವಿಜ್ಞಾನದ ಆವಿಷ್ಕಾರಗಳಿಗೆ ಪ್ರಶ್ನೆಗಳೇ ಮೂಲ ಎಂದು ಡಯಟ್ ಪ್ರಾಚಾರ್ಯೆ ಗೀತಾ ಹೇಳಿದರು.
ನಗರದ ಡಿಆರ್ಆರ್ ವಿದ್ಯಾಸಂಸ್ಥೆಯಲ್ಲಿ ಶುಕ್ರವಾರ ವಿಜ್ಞಾನ ವಸ್ತು ಪ್ರದರ್ಶನವನ್ನು ಪ್ರಯೋಗದ ಮೂಲಕ ಉದ್ಘಾಟಿಸಿ ಮಾತನಾಡಿದರು.
ಸ್ವಿಚ್ ಹಾಕಿದಾಗ ದೀಪ ಬೆಳಗುವುದು ಹೇಗೆ? ಮೊಬೈಲ್ ಮೂಲಕ ನಾವು ಹೇಗೆ ಮಾತನಾಡುತ್ತೇವೆ ಎಂದು ವಿದ್ಯಾರ್ಥಿಗಳಿಗೆ ಪ್ರಶ್ನೆಹಾಕಿದ ಅವರು, ನಮ್ಮ ಸುತ್ತಮುತ್ತ ಅನೇಕ ಘಟನೆಗಳು ನಡೆಯುತ್ತವೆ. ಕುತೂಹಲ ತೋರಿಸಿದರೆ ಅವುಗಳ ಬಗ್ಗೆ ಅರಿಯಲು ಸಾಧ್ಯವಾಗುತ್ತದೆ. ಇಂತಹ ಮನೋಭಾವವೇ ಆವಿಷ್ಕಾರಕ್ಕೆ ಮೂಲವಾಗುತ್ತದೆ ಎಂದು ಹೇಳಿದರು.
ವಿದ್ಯಾರ್ಥಿಗಳು ಮಾಲಿನ್ಯ ನಿಯಂತ್ರಣಕ್ಕೆ ಒತ್ತು ಕೊಡಬೇಕು. ಸೂಕ್ತ ತ್ಯಾಜ್ಯ ವಿಲೇವಾರಿಯತ್ತ ಗಮನ ಹರಿಸಬೇಕು ಎಂದು ಸಲಹೆ ನೀಡಿದರು.
ವಿಜ್ಞಾನ ಪರಿವೀಕ್ಷಕಿ ವಸಂತಕುಮಾರಿ ಮಾತನಾಡಿ, ನೀವು ಮಾಡಿದ ಪ್ರಯೋಗಗಳ ಬಗ್ಗೆ ನಿಮಗೆ ಮಾಹಿತಿ ಇರಬೇಕು. 21ನೇ ಶತಮಾನಕ್ಕೆ ಬೇಕಾದ ಕೌಶಲಗಳನ್ನು ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಆಡಳಿತಾಧಿಕಾರಿ ಎಂ.ಬಸವರಾಜ ಪ್ರಾಸ್ತಾವಿಕವಾಗಿ ಮಾತನಾಡಿದರು. ಮುಖ್ಯ ಶಿಕ್ಷಕ ಎಚ್.ಎಸ್.ಹಾಲೇಶ್ ಸ್ವಾಗತಿಸಿದರು. ಮುಖ್ಯ ಶಿಕ್ಷಕ ಎ.ಎಂ.ಬಸವನಗೌಡ ವಂದಿಸಿದರು. ಸಹ ಶಿಕ್ಷಕ ಕೆ.ಎಂ.ಶಿವಾನಂದಯ್ಯ ನಿರೂಪಿಸಿದರು. ಮುಖ್ಯ ಶಿಕ್ಷಕರಾದ ಭೋಜರಾಜ್ ಯಾದವ, ಕೆ.ಎಲ್.ರಾಧಾ ಉಪಸ್ಥಿತರಿದ್ದರು.
ಪ್ರಯೋಗ ಶಾಲೆ
ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ವಸ್ತು ಪ್ರದರ್ಶನದಲ್ಲಿ ವಿಜ್ಞಾನದ 200ಕ್ಕೂ ಹೆಚ್ಚು ಮಾದರಿಗಳು ಪ್ರದರ್ಶಿತವಾದವು. ರಾಕೆಟ್, ಹೊಲೊಗ್ರಾಮ್ ಮೂರು ಆಯಾಮದ ಚಿತ್ರ, ಮೊಬೈಲ್ ರೆಡಿಯೇಷನ್ನಿಂದಾಗುವ ದುಷ್ಪರಿಣಾಮಗಳು, ಜಲಚಕ್ರ, ಹಸಿರುಮನೆ ಪರಿಣಾಮ, ಮಳೆನೀರು ಕೊಯ್ಲು, ಎಟಿಎಂ ಅಲಾರ್ಮ್ ಮತ್ತಿತರ ಮಾದರಿಗಳು ಇದ್ದವು.
ವಿಜ್ಞಾನ ಪರಿವೀಕ್ಷಕಿ ವಸಂತಕುಮಾರಿ ಪ್ರತಿಯೊಂದು ಮಾದರಿಯನ್ನು ವೀಕ್ಷಿಸಿ ವಿದ್ಯಾರ್ಥಿಗಳಿಂದ ಮಾಹಿತಿ ಪಡೆದರು. ದಕ್ಷಿಣ ವಲಯದ ಸಿಆರ್ಪಿ ಕೆ.ನಾಗರಾಜ್ ಭೇಟಿ ನೀಡಿದ್ದರು.