ಶನಿವಾರಸಂತೆ: ಹೋಂ ಕ್ವಾರಂಟೈನ್ಗೆ ಒಳಗಾಗಿರುವ ವ್ಯಕ್ತಿಯ ಕೈಗೆ ಸೀಲ್ ಹಾಕಿರುವುದನ್ನು ಈಗಾಗಲೆ ನೋಡಿರುತ್ತೀರಿ. ಹಾಗೆ ಸೀಲ್ ಹಾಕಿಸಿಕೊಂಡವರು ರಸ್ತೆಯಲ್ಲಿ ಎಲ್ಲಾದರೂ ಎದುರಾದರೆ ಬೆಚ್ಚಿಬಿದ್ದಿರುತ್ತೀರಿ.
ಆದರೆ ಕ್ವಾರಂಟೈನ್ ಸೀಲ್ ಹಾಕಿಸಿಕೊಂಡವರೇ ಬೆಚ್ಚಿಬೀಳುವಂತಹ ಸುದ್ದಿಯೊಂದು ಇಲ್ಲಿದೆ. ಶನಿವಾರಸಂತೆ ನಿವಾಸಿ 10 ದಿನಗಳ ಹಿಂದೆ ಪೊಲೀಸರ ಅನುಮತಿ ಪಡೆದು ಮಂಗಳೂರಿಗೆ ಹೋಗಿ ಬಂದಿದ್ದರು. ಸುರಕ್ಷತೆ ದೃಷ್ಟಿಯಿಂದ ಅವರನ್ನು ಹೋಂ ಕ್ವಾರಂಟೈನ್ ಮಾಡಿ, ಅವರ ಕೈ ಮೇಲೆ ಸೀಲ್ ಹಾಕಲಾಗಿತ್ತು.
ಅದರ ಶಾಯಿ ಕ್ರಮೇಣ ಹೋಗುತ್ತದೆ ಎಂದುಕೊಂಡಿದ್ದ ಆ ವ್ಯಕ್ತಿಗೆ ಶಾಕ್ ಕಾದಿತ್ತು. ಸೀಲ್ ಹಾಕಲಾಗಿರುವ ಭಾಗಕ್ಕೆ ಒಂದೆರಡು ದಿನಗಳಲ್ಲೇ ನಂಜು ಆವರಿಸಿತು! ಈಗ ಕೈಯೇ ಊದಿಕೊಂಡಿದೆ. ಕ್ವಾರಂಟೈನ್ನಲ್ಲಿ ಇರುವುದರಿಂದ ಮನೆಯವರು ಇವರನ್ನು ವೈದ್ಯರ ಬಳಿಗೆ ಕರೆದುಕೊಂಡು ಹೋಗಲೂ ಸಾಧ್ಯವಾಗುತ್ತಿಲ್ಲ.
ಈ ಕುರಿತು ಪ್ರತಿಕ್ರಿಯಿಸಿರುವ ಶನಿವಾರಸಂತೆ ವೈದ್ಯ ಶಿವಪ್ರಕಾಶ್, ಸೀಲ್ಗೆ ಬಳಸಲಾಗಿರುವ ಶಾಯಿ ಲಘು ರಾಸಾಯನಿಕ ಮಿಶ್ರಣವನ್ನು ಒಳಗೊಂಡಿರುತ್ತದೆ. ಈ ರಾಸಾಯನಿಕದಿಂದ ಕೆಲವರಿಗೆ ಅಲರ್ಜಿ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಹೀಗಾಗಿ, ಕೈ ಸ್ವಲ್ಪ ಊದಿಕೊಳ್ಳುತ್ತದೆ. ಇದರಿಂದ ಯಾವುದೇ ಗಂಭೀರ ಸಮಸ್ಯೆ ಉಂಟಾಗುವುದಿಲ್ಲ. ಈ ಬಗ್ಗೆ ಸಂಬಂಧಪಟ್ಟ ವೈದ್ಯರು, ಆರೋಗ್ಯ ಕಾರ್ಯಕರ್ತೆಯರಿಗೆ ತಿಳಿಸಿದರೆ ಸೂಕ್ತ ಚಿಕಿತ್ಸೆ ನೀಡುತ್ತಾರೆ ಎಂದು ತಿಳಿಸಿದ್ದಾರೆ.