ಪುತ್ತೂರು ಗ್ರಾಮಾಂತರ: ಗ್ರಾಮ ಪಂಚಾಯಿತಿ ಉಪಚುನಾವಣೆಯಲ್ಲಿ ಆರ್ಯಾಪು ವಾರ್ಡ್ನಲ್ಲಿ ಪುತ್ತಿಲ ಪರಿವಾರ ಬೆಂಬಲಿತ ಅಭ್ಯರ್ಥಿಯ ಗೆಲುವಿನ ಬಳಿಕ ಪುತ್ತೂರು ನಗರದ ಮುಖ್ಯರಸ್ತೆಯಲ್ಲಿ ಅನುಮತಿ ಇಲ್ಲದೆ ಮೆರವಣಿಗೆ ಮತ್ತು ಡಿಜೆ ಸೌಂಡ್ ಬಳಕೆ ಮಾಡಿ ವಿಜಯೋತ್ಸವ ಆಚರಿಸಿದ ಪುತ್ತಿಲ ಪರಿವಾರದ ವಿರುದ್ಧ ಗುರುವಾರ ಪುತ್ತೂರು ನಗರ ಠಾಣೆಯಲ್ಲಿ ಸಾರ್ವಜನಿಕ ಶಾಂತಿಭಂಗ ಪ್ರಕರಣ ದಾಖಲಾಗಿದೆ.
ಉಪಚುನಾವಣೆಯ ಫಲಿತಾಂಶ ಪ್ರಕಟಗೊಂಡ ಬಳಿಕ ಪುತ್ತಿಲ ಪರಿವಾರದವರು ಗೆಲುವು ಸಾಧಿಸಿದ ಸುಬ್ರಹ್ಮಣ್ಯ ಬಲ್ಯಾಯ ಮತ್ತು ನಿಡ್ಪಳ್ಳಿಯ ಪರಾಜಿತ ಅಭ್ಯರ್ಥಿ ಜಗನ್ನಾಥ್ ರೈ ಅವರೊಂದಿಗೆ ಕಿಲ್ಲೆ ಮೈದಾನದಲ್ಲಿರುವ ಅಮರ್ ಜವಾನ್ ಜ್ಯೋತಿ ಸ್ಮಾರಕದ ಬಳಿ ತೆರಳಿ ಸ್ಮಾರಕಕ್ಕೆ ಪುಷ್ಪಾರ್ಚನೆಗೈದು, ಬಳಿಕ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಮೆರವಣಿಗೆಯ ಮೂಲಕ ಆಗಮಿಸಿ ದೇವರ ದರ್ಶನ ಪಡೆದು ಅಲ್ಲಿಂದ ಮುಕ್ರಂಪಾಡಿಯಲ್ಲಿರುವ ಪುತ್ತಿಲ ಪರಿವಾರದ ಕಚೇರಿ ತನಕ ವಿಜಯೋತ್ಸವ ಮೆರವಣಿಗೆ ನಡೆಸಿದ್ದರು.
ರಾಜಕೀಯ ಪ್ರೇರಿತ ಹತಾಶ ಪ್ರಯತ್ನ: ಈ ಹಿಂದೆ ನಡೆದಿದ್ದ ಚುನಾವಣೆಗಳ ಸಂದರ್ಭ ಸೆಕ್ಷನ್ 144 ಜಾರಿಯಲ್ಲಿದ್ದರೂ ವಿಜಯೋತ್ಸವ ಮೆರವಣಿಗೆ ನಡೆದಿದೆ. ಯಾರೂ ವಿಜಯೋತ್ಸವ ಮೆರವಣಿಗೆಗೆ ಅನುಮತಿ ಪಡೆದುಕೊಂಡಿರಲಿಲ್ಲ. ಹೀಗಿದ್ದರೂ ಈಗ ಪೊಲೀಸರು ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿರುವುದು ಪೊಲೀಸರು ರಾಜಕೀಯ ಪ್ರೇರಿತ ಕೈಗೊಂಬೆಗಳಾಗಿದ್ದಾರೆ ಎಂಬುದಕ್ಕೆ ಸ್ಪಷ್ಟ ನಿದರ್ಶನ ಎಂದು ಪುತ್ತಿಲ ಪರಿವಾರದ ಮುಖಂಡ ಅರುಣ್ ಕುಮಾರ್ ಪುತ್ತಿಲ ಪ್ರತಿಕ್ರಿಯಿಸಿದ್ದಾರೆ. ವಿಧಾನಸಭಾ ಚುನಾವಣೆಯ ಮತ ಎಣಿಕೆಯ ದಿನ ಶಾಸಕರ ವಿಜಯೋತ್ಸವ ಮೆರವಣಿಗೆ ಕಬಕದಿಂದ ದರ್ಬೆ ತನಕ ನಡೆದಿತ್ತು. ಸುಮಾರು ಮೂರು ಗಂಟೆ ಮುಖ್ಯ ರಸ್ತೆ ಬಂದ್ ಆಗಿತ್ತು. ಆಗ ಪೊಲೀಸರು ಯಾಕೆ ಸ್ವಇಚ್ಛೆಯಿಂದ ಪ್ರಕರಣ ದಾಖಲಿಸಿಲ್ಲ ಎಂದು ಪ್ರಶ್ನಿಸಿದ್ದಾರೆ.