ಇಸ್ಲಾಮಾಬಾದ್: ಪಾಕಿಸ್ತಾನ ಚುನಾವಣೆಯಲ್ಲಿ ವ್ಯಾಪಕ ಪ್ರಮಾಣದ ಅಕ್ರಮಗಳು ನಡೆದಿವೆ ಎಂದು ಆಪಾದಿಸಿ ಇಮ್ರಾನ್ ಖಾನ್ ನೇತೃತ್ವದ ಪಾಕಿಸ್ತಾನ ತೆಹ್ರೀಕ್ ಇ ಇನ್ಸಾಫ್ (ಪಿಟಿಐ) ಮತ್ತಿ ಇತರ ಪಕ್ಷಗಳು ಶನಿವಾರ(ಫೆ.16) ದೇಶವ್ಯಾಪಿ ಬಂದ್ಗೆ ಕರೆ ನೀಡಿದೆ.
ಅಧಿಕ ಸ್ಥಾನಗಳನ್ನು ಇಮ್ರಾನ್ ಖಾನ್ ನೇತೃತ್ವದ ಪಿಟಿಐ ಪಕ್ಷದ ಅಭ್ಯರ್ಥಿಗಳು ಗೆದ್ದುಕೊಂಡಿದ್ದರೂ, ನವಾಝ್ ಶರೀಫ್ ನೇತೃತ್ವದ ಪಿಎಂಎಲ್ಎನ್ ಹಾಗೂ ಬಿಲಾವಲ್ ಬುಟ್ಟೊರ ಪಿಪಿಪಿ ಪಕ್ಷಗಳು ಜೊತೆಗೂಡಿ ನೂತನ ಸಮಿಶ್ರ ಸರ್ಕಾರ ರಚಿಸಲು ಸಿದ್ಧತೆ ನಡೆಸುತ್ತಿದ್ದು, ದೇಶದ ರಾಜಕೀಯವನ್ನು ಕಡೆಗಣಿಸಲಾಗುತ್ತಿದೆ ಎಂದು ಆಪಾದಿಸಿ ಜೈಲಿನಲ್ಲಿರುವ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಪಿಟಿಐ ಮತ್ತಿತರ ಪಕ್ಷಗಳು ರಾಷ್ಟ್ರವ್ಯಾಪಿ ಬಂದ್ಗೆ ಕರೆ ನೀಡಿದೆ.
ಪ್ರತಿಸ್ಪರ್ಧಿ ಪಕ್ಷಗಳು ದೇಶದ ಜನತೆಯ ಆದೇಶವನ್ನು ಕದಿಯಲು ಅವಕಾಶ ನೀಡುವುದಿಲ್ಲ. ಚುನಾವಣೆಯಲ್ಲಿ ಜನಾದೇಶವನ್ನು ಬದಲಾಯಿಸಲಾಗಿದೆ. ಇದನ್ನು ವಿರೋಧಿಸಿ ಜಿಡಿಎ, ಜೆಐ, ಜೆಯುಐ-ಎಫ್, ಟಿಎಲ್ಪಿ, ಎಎನ್ಪಿ ಜತೆಗೂಡಿ ಪ್ರತಿಭಟನೆಗೆ ಕರೆ ನೀಡಿದ್ದೇವೆ ಎಂದು ಪಿಟಿಐ ನಾಯಕ ಗೊಹರ್ ಖಾನ್ ತಿಳಿಸಿದ್ದಾರೆ.
ಅದೂ ಅಲ್ಲದೆ ಪಿಪಿಪಿ ಜೊತೆಗೆ ಮಾತುಕತೆ ನಡೆಸಲಿದೆ ಎಂಬ ಮಾಧ್ಯಮ ಸುದ್ದಿಗಳನ್ನು ಕೂಡ ಪಿಟಿಐ ನಿರಾಕರಿಸಿದೆ. ಫೆಬ್ರವರಿ ೮ರಂದು ನಡೆದ ಚುನಾವಣೆಯಲ್ಲಿ ಯಾವುದೇ ಪಕ್ಷಕ್ಕೆ ಬಹುಮತ ಬಾರದ ಹಿನ್ನೆಲೆಯಲ್ಲಿ ಪಾಕಿಸ್ತಾನದ ಎರಡು ಪ್ರಮುಖ ಪಕ್ಷಗಳಾದ ಪಾಕಿಸ್ತಾನ ಮುಸ್ಲಿಂ ಲೀಗ್ ನವಾಝ್ (ಪಿಎಂಎಲ್-ಎನ್) ಹಾಗೂ ಪಾಕಿಸ್ತಾನ ಪೀಪಲ್ಸ್ ಪಾರ್ಟಿ ಮಂಗಳವಾರ ಸಮ್ಮಿಶ್ರ ಸರ್ಕಾರ ರಚಿಸುವುದಾಗಿ ಪ್ರಕಟಿಸಿವೆ.
ಅಷ್ಟೇ ಅಲ್ಲ, ಶೆಬಾಝ್ ಶರೀಫ್ ಅವರನ್ನು ಸಮಿಶ್ರ ಸರ್ಕಾರ ಪ್ರಧಾನಿ ಅಭ್ಯರ್ಥಿಯನ್ನಾಗಿ ಕೂಡ ಘೋಷಿಸಿವೆ. ಇದರಿಂದಾಗಿ ಇಮ್ರಾನ್ ಖಾನ್ ನೇತೃತ್ವದ ಪಿಟಿಐ ಗೆ ಅಧಿಕಾರದ ಅವಕಾಶ ಇಲ್ಲ. ರಾಷ್ಟ್ರೀಯ ಅಸೆಂಬ್ಲಿಯಲ್ಲಿ ಈ ಪಕ್ಷ ಬೆಂಬಲಿಸಿದ ಅಭ್ಯರ್ಥಿಗಳು ಹೆಚ್ಚಿನ ಸ್ಥಾನಗಳನ್ನು ಗೆದ್ದುಕೊಂಡಿದ್ದರು. ತನ್ನ ತಂತ್ರಗಾರಿಕೆಯನ್ನು ಬದಲಿಸಿರುವ ಪಿಟಿಐ, ಚುನಾವಣೆಯಲ್ಲಿ ವ್ಯಾಪಕ ಪ್ರಮಾಣದ ಅಕ್ರಮಗಳು ನಡೆದಿವೆ ಎಂದು ಆಪಾದಿಸಿ ದೇಶವ್ಯಾಪಿ ಬಂದ್ಗೆ ಕರೆ ನೀಡಿದೆ.