ಕೊಪ್ಪಳ: ಅಪ್ರಾಪ್ತ ಕುಸ್ತಿಪಟುಗಳ ಮೇಲೆ ಲೈಂಗಿಕ ದೌರ್ಜನ್ಯ ಎಸೆಗಿದ ಭಾರತದ ಒಲಂಪಿಕ್ ಹಾಗೂ ಕುಸ್ತಿ ಒಕ್ಕೂಟದ ಅಧ್ಯಕ್ಷ ಬ್ರಿಜ್ಭೂಷಣ ಚರಣಸಿಂಗ್ ಬಂಧನಕ್ಕೆ ಆಗ್ರಹಿಸಿ ಪ್ರಗತಿಪರ ಸಂಘಟನೆಗಳ ಒಕ್ಕೂಟದ ಸಂಯುಕ್ತ ಕಿಸಾನ್ ಮೋರ್ಚಾದ ಜಿಲ್ಲಾ ಪದಾಧಿಕಾರಿಗಳು ಎಡಿಸಿ ಸಾವಿತ್ರಿ ಕಡಿ ಮೂಲಕ ಮಂಗಳವಾರ ರಾಷ್ಟ್ರಪತಿಗೆ ಮನವಿ ಸಲ್ಲಿಸಿದರು.
ಇದನ್ನೂ ಓದಿ: ಮಹಿಳಾ ಕ್ರೀಡಾಪಟುಗಳ ಪ್ರತಿಭಟನೆಗೆ ರೈತ ಸಂಘಟನೆ ಬೆಂಬಲ
ಹೋರಾಟಕ್ಕೆ ಸರ್ಕಾರ ಯಾವುದೇ ಸ್ಪಂದನೆ ತೋರುತ್ತಿಲ್ಲ
ಬ್ರಿಜ್ ಭೂಷಣ ಚರಣ ಸಿಂಗ್ ಮತ್ತು ಉನ್ನತ ಅಧಿಕಾರಿಗಳು ಅಪ್ರಾಪ್ತ ಕುಸ್ತಿಪಟು ಹಾಗೂ ಮಹಿಳಾ ಒಲಂಪಿಕ್ ಚಾಂಪಿಯನ್ಶಿಪ್ಗಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ. ಇವರ ಕೃತ್ಯ ಖಂಡಿಸಿ ಏಪ್ರೀಲ್ ತಿಂಗಳಿಂದ ದೆಹಲಿಯ ಜಂತರ್ಮಂತರ್ನಲ್ಲಿ ಹೋರಾಟ ನಡೆಸುತ್ತಿದ್ದಾರೆ. ಆದರೂ ಸರ್ಕಾರ ಯಾವುದೇ ಸ್ಪಂದನೆ ತೋರುತ್ತಿಲ್ಲ.
ಪೊಲೀಸ್ ಅಧಿಕಾರಿಗಳು ಸತ್ಯಾಗ್ರಹಿಗಳೊಂದಿಗೆ ಅನುಚಿತ ವರ್ತನೆ
ಶಾಂತಿಯುತವಾಗಿ ಹೋರಾಟ ನಡೆಸಿದ ಮಹಿಳಾ ಕುಸ್ತಿಪಟುಗಳ ಮೇಲೆ ಮೋದಿ ಸರ್ಕಾರ ದೌರ್ಜನ್ಯ ಎಸಗಿದೆ. ದೆಹಲಿ ಪೊಲೀಸ್ ಅಧಿಕಾರಿಗಳು ಮಹಿಳಾ ಸತ್ಯಾಗ್ರಹಿಗಳೊಂದಿಗೆ ಅನುಚಿತವಾಗಿ ವರ್ತಿಸಿರುವುದು ದೇಶವೇ ತಲೆ ತಗ್ಗಿಸುವಂತಾಗಿದೆ ಎಂದು ಆರೋಪಿಸಿದರು.
ಕೂಡಲೇ ದೌರ್ಜನ್ಯ ಎಸಗಿದವರನ್ನು ಬಂಧಿಸಿ
ಕೂಡಲೇ ದೌರ್ಜನ್ಯ ಎಸಗಿದವರನ್ನು ಬಂಧಿಸಿ ಕ್ರೀಡಾಪಟುಗಳಿಗೆ ನ್ಯಾಯ ಕೊಡಿಸಬೇಕೆಂದು ಆಗ್ರಹಿಸಿದರು. ಸಂಘಟನೆ ಮುಖಂಡರಾದ ಅಲ್ಲಮಪ್ರಭು ಬೆಟ್ಟದೂರು, ಡಿ.ಎಚ್.ಪೂಜಾರ, ಬಸವರಾಜ ಶೀಲವಂತರ, ಮಹಾಂತೇಶ ಕೊತಬಾಳ, ಬಸವರಾಜ ನರೇಗಲ್, ಮುಕಬಲ್ ಸಾಬ್ ಇತರರಿದ್ದರು.