ಜಮಖಂಡಿ: ಪ್ರತಿದಿನ 1 ಗಂಟೆ ವಿದ್ಯುತ್ ಸಂಪರ್ಕ ನೀಡುವುದರಿಂದ ಜನ ಜಾನುವಾರುಗಳಿಗೆ ಮತ್ತು ರೈತರ ಬೆಳೆಗಳಿಗೆ ನೀರಿನ ಅಭಾವವಾಗಲಿದೆ. ಅಥಣಿ ತಾಲೂಕಿನ ಗ್ರಾಮಗಳಿಗೆ 7 ಗಂಟೆ ವಿದ್ಯುತ್ ಸಂಪರ್ಕ ನೀಡುತ್ತಿರುವ ಹಾಗೆ ನಮ್ಮ ಕ್ಷೇತ್ರದ ಕೃಷ್ಣಾ ನದಿ ತಟದ ಗ್ರಾಮ ಹಾಗೂ ವಸತಿಗಳಿಗೆ 7 ಗಂಟೆ ವಿದ್ಯುತ್ ನೀಡುವಂತೆ ಜಿಲ್ಲಾಧಿಕಾರಿಗಳೊಂದಿಗೆ ಮಾತನಾಡಿದ್ದೇನೆ ಎಂದು ಮಾಜಿ ಶಾಸಕ ಆನಂದ ನ್ಯಾಮಗೌಡ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಸೋಮವಾರ ಮಾತನಾಡಿದ ಅವರು, ವಾರದ 5 ದಿನಗಳವರೆಗೆ ವಿದ್ಯುತ್ ಸಂಪರ್ಕ ನೀಡಿ ಶನಿವಾರ, ಭಾನುವಾರ ಮಾತ್ರ ವಿದ್ಯುತ್ ಸಂಪರ್ಕ ಕಡಿತಗೊಳಿಸಿದರೆ ಈ ಸಮಸ್ಯೆ ನಿವಾರಣೆಯಾಗಲಿದೆ ಎಂದರು.
ಕುಡಿಯುವ ನೀರು ಹಾಗೂ ಜನಜಾನುವಾರುಗಳಿಗೆ ಮಾತ್ರ ನೀರು ಬಳಕೆ ಮಾಡಬೇಕು ಎಂದು ಜಿಲ್ಲಾಧಿಕಾರಿಗಳು ದಿನಕ್ಕೆ 1 ಗಂಟೆ ಮಾತ್ರ ತ್ರೀ-ಫೇಸ್ ವಿದ್ಯುತ್ ನೀಡಲು ಆದೇಶ ಮಾಡಿದ್ದು ಸರಿಯಾದ ಕ್ರಮವಲ್ಲ. ಇಂತಹ ಆದೇಶ ಎಂದೂ ಮಾಡಿಲ್ಲ. ಸದರಿ ಆದೇಶವನ್ನು ಪರಿಶೀಲಿಸಬೇಕು ಎಂದು ಡಿಸಿ ಜಾನಕಿ ಕೆ.ಎಂ. ಜತೆಗೆ ಮಾತನಾಡಿದ್ದೇನೆ. ಜಮಖಂಡಿ ಎಸಿ ಸಂತೋಷ ಕಾಮಗೌಡ ಜತೆಗೂ ಮಾತನಾಡಿ ಅಥಣಿ ತಾಲೂಕಿನ ಮತ್ತು ನದಿ ತೀರದ ಗ್ರಾಮಗಳಲ್ಲಿರುವ ವಿದ್ಯುತ್ ಸರಬರಾಜು ಬಗ್ಗೆ ತಿಳಿದುಕೊಂಡು ಸರಿಪಡಿಸಿ ರೈತರಿಗೆ ಅನುಕೂಲ ಮಾಡುವುದಾಗಿ ತಿಳಿಸಿದ್ದಾರೆ ಎಂದರು.