ಯಲ್ಲಾಪುರ: ತಾಲೂಕಿನ ಕಳಚೆ ಗ್ರಾಮಕ್ಕೆ ಬೆಳಗ್ಗೆ ಬಿಡುವ ಬಸ್ ಸಮಯವನ್ನು ಬದಲಾವಣೆ ಮಾಡಿರುವುದನ್ನು ವಿರೋಧಿಸಿ ಗ್ರಾಮಸ್ಥರು ಸೋಮವಾರ ಬೆಳಗ್ಗೆ ವಸತಿ ಬಸ್ ತಡೆದು ಆಕ್ರೋಶ ವ್ಯಕ್ತಪಡಿಸಿದರು.
ಕಳಚೆ ಗ್ರಾಮಕ್ಕೆ ಬರುವ ವಸತಿ ಬಸ್ ಕಳೆದ 35 ವರ್ಷಗಳಿಂದ ಬೆಳಗ್ಗೆ 7.30ಕ್ಕೆ ಯಲ್ಲಾಪುರಕ್ಕೆ ತೆರಳುತ್ತಿತ್ತು. ಇತ್ತೀಚಿನ ಕೆಲವು ದಿನದಿಂದ ವಸತಿ ಬಸ್ ಅನ್ನು 6.30ಕ್ಕೆ ಯಲ್ಲಾಪುರಕ್ಕೆ ಬಿಡಲು ಪ್ರಾರಂಭಿಸಿದ್ದು, ಶಾಲೆ-ಕಾಲೇಜು ವಿದ್ಯಾರ್ಥಿಗಳು, ಸ್ಥಳೀಯರಿಗೆ ಅನಾನುಕೂಲವಾಗಿದೆ. ಹಾಗೆಯೇ ಯಲ್ಲಾಪುರದಿಂದ ಕಳಚೆ ಗ್ರಾಮಕ್ಕೆ ಬರುತ್ತಿದ್ದ ಆರು ಬಸ್ಗಳ ಸಂಖ್ಯೆಯನ್ನು ಮೂರಕ್ಕೆ ಇಳಿಸಲಾಗಿದ್ದು, ಇಲ್ಲಿಯ ಗ್ರಾಮಸ್ಥರು ತಾಲೂಕು ಕೇಂದ್ರ ಹಾಗೂ ಇನ್ನಿತರ ಕಡೆಗಳಿಗೆ ತೆರಳಲು ಸಮಸ್ಯೆಯಾಗುತ್ತಿದೆ.
ಈ ಕುರಿತು ಸ್ಥಳೀಯರು ಸಾರಿಗೆ ಇಲಾಖೆ ಅಧಿಕಾರಿಗಳಿಗೆ ಮನವಿ ನೀಡಿದ್ದರು. ಆದರೂ ಅಧಿಕಾರಿಗಳು ಮನವಿ ತಿರಸ್ಕರಿಸಿ ಬೆಳಗ್ಗೆ 6.30ಕ್ಕೆ ಬಸ್ ಬಿಡುತ್ತಿದ್ದಾರೆ. ಈ ಬಸ್ನಿಂದ ಸಂಸ್ಥೆಗೆ ಆದಾಯವೂ ಆಗುತ್ತಿಲ್ಲ ಹಾಗೂ ಸಾರ್ವಜನಿಕರಿಗೂ ಅನಾನುಕೂಲವಾಗುತ್ತಿದೆ. ಹೀಗಾಗಿ ಸೋಮವಾರ ತಮ್ಮ ಅಸಮಾಧಾನ ವ್ಯಕ್ತಪಡಿಸಿ ಬಸ್ ತಡೆದು ಪ್ರತಿಭಟಿಸಿದ್ದಾರೆ.
ಬೆಳಗ್ಗೆ 6.30ಕ್ಕೆ ಯಲ್ಲಾಪುರಕ್ಕೆ ಬಿಡುವ ವಸತಿ ಬಸ್ಸಿನ ಸಮಯವನ್ನು 7.30ಕ್ಕೆ ಬದಲಾಯಿಸಬೇಕು, 6ರಿಂದ 3ಕ್ಕೆ ಇಳಿಕೆ ಆಗಿರುವ ಕಳಚೆ ಬಸ್ಗಳನ್ನು ಹಿಂದಿನಂತೆ 6ಕ್ಕೆ ಏರಿಸಬೇಕು ಎಂಬುದು ಸ್ಥಳೀಯ ನಿವಾಸಿಗಳ ಆಗ್ರಹವಾಗಿದೆ. ಸಂಬಂಧಿಸಿದ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಗಮನ ಹರಿಸಿ ಸಾರ್ವಜನಿಕರಿಗೆ ಬಸ್ ವ್ಯವಸ್ಥೆ ಕಲ್ಪಿಸಬೇಕು. ಇಲ್ಲದಿದ್ದರೆ ಅಹೋರಾತ್ರಿ ಪ್ರತಿಭಟನೆ ನಡೆಸಲಾಗುವುದು ಎಂದು ಗ್ರಾಮಸ್ಥರು ಎಚ್ಚರಿಸಿದ್ದಾರೆ.