ಕಂಪ್ಲಿ: ಪ್ರಸ್ತಾವಿತ ವಿಜಯನಗರ ಜಿಲ್ಲೆಗೆ ಕಂಪ್ಲಿ ತಾಲೂಕು ಸೇರ್ಪಡೆಗೆ ಒತ್ತಾಯಿಸಿ ಪ್ರಗತಿಪರ ಸಂಘಟನೆಗಳ ಒಕ್ಕೂಟ ಸೋಮವಾರ ಕರೆ ನೀಡಿದ್ದ ಕಂಪ್ಲಿ ಬಂದ್ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು.
ಉದ್ಭವ ಮಹಾಗಣಪತಿ ದೇವಸ್ಥಾನದಿಂದ ಆರಂಭಗೊಂಡ ಮೆರವಣಿಗೆ ಡಾ.ಅಂಬೇಡ್ಕರ್ ವೃತ್ತದಲ್ಲಿ ಸಮಾವೇಶಗೊಂಡಿತು. ಪ್ರತಿಭಟನಾ ಮೆರವಣಿಗೆ ಸಂದರ್ಭ ವರ್ತಕರು ಅಂಗಡಿಮುಗ್ಗಂಟುಗಳನ್ನು ಬಂದ್ ಮಾಡಿ ಸಹಕರಿಸಿದರು. ಬಸ್ಗಳು ಎಂದಿನಂತೆ ಸಂಚರಿಸಿದವು. ಶಾಲಾ, ಕಾಲೇಜುಗಳು, ಬ್ಯಾಂಕ್ ಸರ್ಕಾರಿ ಕಚೇರಿಗಳು ತೆರೆದಿದ್ದವು.
ಒಕ್ಕೂಟದ ಅಧ್ಯಕ್ಷ ಟಿ.ಕೋಟಿರೆಡ್ಡಿ ಮಾತನಾಡಿ, ಸಾರ್ವಜನಿಕರ ಹಿತದೃಷ್ಟಿಯಿಂದ ಕಂಪ್ಲಿಯನ್ನು ವಿಜಯನಗರ ಜಿಲ್ಲೆಗೆ ಸೇರ್ಪಡೆಗೊಳಿಸಬೇಕು. ಈ ನಿಟ್ಟಿನಲ್ಲಿ ಸರ್ಕಾರ ಬದ್ಧ್ಧತೆ ತೋರಬೇಕು. ಈ ಮೊದಲು ಪ್ರಸ್ತಾವಿತ ವಿಜಯನಗರ ಜಿಲ್ಲೆಯ ನಕ್ಷೆಯಲ್ಲಿ ಕಂಪ್ಲಿ ಸೇರಿಸಿ ಮುಖ್ಯಮಂತ್ರಿಗಳಿಗೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಬಳಿಕ ಕೈಬಿಟ್ಟಿದ್ದು ಸರಿಯಲ್ಲ. ಉದಾಸೀನ ತೋರದೆ ಬೇಡಿಕೆ ಈಡೇರಿಸಬೇಕು. ತಪ್ಪಿದಲ್ಲಿ ಹೋರಾಟ ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಿದರು.
ಒಕ್ಕೂಟದ ಕಾರ್ಯಾಧ್ಯಕ್ಷ ಜಿ.ರಾಮಣ್ಣ, ಗೌರವಾಧ್ಯಕ್ಷ ಎ.ಸಿ.ದಾನಪ್ಪ, ಮುಖಂಡರಾದ ವಲಿಅಹ್ಮದ್, ಶಾಂತಿಲಾಲ್ ಸಿಂಘ್ವಿ, ಕೆ.ಎಸ್.ಚಾಂದ್ಬಾಷಾ, ಕರೇಕಲ್ ಮನೋಹರ, ಹಬೀಬ್ ರೆಹಮಾನ್ ಮಾತನಾಡಿ, ಬಳ್ಳಾರಿ ರಾಜಕಾರಣಿಗಳ ಒತ್ತಡಕ್ಕೆ ಮಣಿದು, ಆನಂದಸಿಂಗ್ ಒಳ ಒಪ್ಪಂದ ಹಿನ್ನೆಲೆಯಲ್ಲಿ ವಿಜಯನಗರ ಜಿಲ್ಲೆಯಿಂದ ಕಂಪ್ಲಿ ಹೊರಗೆ ಇಡಲಾಗಿದೆ ಎಂದು ಆರೋಪಿಸಿದರು.
ಉಪ ತಹಸೀಲ್ದಾರ್ ಬಿ.ರವೀಂದ್ರನಾಥಗೆ ಮನವಿ ಸಲ್ಲಿಸಲಾಯಿತು. ತಾಪಂ ಸದಸ್ಯ ಕೆ.ಷಣ್ಮುಖಪ್ಪ, ಒಕ್ಕೂಟದ ಪ್ರಮುಖರಾದ ಸಿ.ವೆಂಕಟೇಶ್, ನಾಗೇಂದ್ರ, ಎಚ್.ಪಿ.ಶಿಕಾರಿರಾಮು, ವಿ.ಟಿ.ನಾಗರಾಜ, ದೇವೇಂದ್ರ, ಬಿ.ರಮೇಶ್, ಶಾಂತಿಲಾಲ್ ಬಾಲಾರ್, ಮುದ್ಗಲ್ ಶಬ್ಬೀರ್, ಇಟ್ಗಿ ವಿರೂಪಾಕ್ಷಿ, ಎಚ್.ನಾಗರಾಜ, ಬಿ.ಜಾಫರ್, ಅಶೋಕ ಕುಕನೂರು, ಇತರರಿದ್ದರು.