ಬೆಂಗಳೂರು: ನೂರಕ್ಕೂ ಹೆಚ್ಚು ದರೋಡೆ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಕುಖ್ಯಾತ ದರೋಡೆಕೋರ ಕ್ಯಾನ್ಸರ್ ರೋಗಕ್ಕೀಡಾಗಿ ಮೃತಪಟ್ಟಿದ್ದಾನೆ. ಮೃತಪಟ್ಟ ದರೋಡೆಕೋರನ ಹೆಸರು ಮುರುಗನ್.
ಒಂಟಿ ಮನೆಗಳು, ಚಿನ್ನದಂಗಡಿಗಳನ್ನು ದರೋಡೆ ಮಾಡುತ್ತಿದ್ದ ಮುರುಗನ್ ನೂರಕ್ಕೂ ಹೆಚ್ಚು ದರೋಡೆ ಪ್ರಕರಣಗಳಲ್ಲಿ ಭಾಗಿಯಾಗಿದ್ದ. ಬೆಂಗಳೂರು, ಚೆನ್ನೈ, ಹೈದರಾಬಾದ್ ಸೇರಿ ಹಲವೆಡೆ ದರೋಡೆ ನಡೆಸಿದ್ದ ಆರೋಪಿ, ಕಳೆದ ವರ್ಷ ಬೆಂಗಳೂರಿನಲ್ಲಿ ಶರಣಾಗತನಾಗಿದ್ದ.
ಶರಣಾಗಿದ್ದ ದರೋಡೆಕೋರ ಮುರುಗನ್ನಿಂದ ಪೊಲೀಸರು ಅಂದು 10 ಕೆ.ಜಿ. ಚಿನ್ನ ವಶಪಡಿಸಿಕೊಂಡಿದ್ದರು. ಪ್ರಕರಣ ದಾಖಲಾಗಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿದ್ದ ಮುರುಗನ್ಗೆ ಬಂದಿದ್ದ ಕ್ಯಾನ್ಸರ್ ಉಲ್ಬಣಿಸಿದ್ದರಿಂದ ಆತನನ್ನು ಜಯನಗರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಆತ ಮೃತಪಟ್ಟಿದ್ದಾಗಿ ಪೊಲೀಸರು ತಿಳಿಸಿದ್ದಾರೆ.
೨೦೧೯ರಲ್ಲಿ ತಿರುಚನಾಪಲ್ಲಿಯ ಲಲಿತ್ ಜ್ಯುವೆಲ್ಲರ್ಸ್ ರಾಬರಿ ಕೇಸ್ನ ಕಿಂಗ್ಪಿನ್ ಆಗಿದ್ದ ಈತ, ಅಂದು ಸುಮಾರು ೧೨ ಕೋಟಿ ರೂ. ಮೌಲ್ಯದ ಚಿನ್ನ-ವಜ್ರ-ಪ್ಲಾಟಿನಂ ದರೋಡೆ ಮಾಡಿದ್ದ.