ಮುಂಬೈ: ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮಮಂದಿರದ ಉದ್ಘಾಟನೆಗೆ ದಿನಗಣನೆ ಆರಂಭವಾಗಿದ್ದು, ಈಗಾಗಲೇ ಧಾರ್ಮಿಕ ವಿಧಿವಿಧಾನಗಳು ಅರಂಭಗೊಂಡಿವೆ. ಐತಿಹಾಸಿಕ ಕ್ಷಣವನ್ನು ಕಣ್ತುಂಬಿಕೊಳ್ಳಲು ಕೋಟ್ಯಂತರ ಭಕ್ತರು ಕಾತುರದಿಂದ ಕಾಯುತ್ತಿದ್ದು, ಹಲವಾರು ಖ್ಯಾತನಾಮರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲಾಗುತ್ತಿದೆ.
ರಾಮಮಂದಿರ ಉದ್ಘಾಟನೆ ಸಂಬಂಧ ಹಿರಿಯ ವಕೀಲ, ಸಂವಿಧಾನ ಶಿಲ್ಪಿ ಡಾ.ಬಿ. ಆರ್. ಅಂಬೇಡ್ಕರ್ ಅವರ ಮೊಮ್ಮಗ ಪ್ರಕಾಶ್ ಅಂಬೇಡ್ಕರ್ ಅವರನ್ನು ಆಹ್ವಾನಿಸಲಾಗಿತ್ತು. ಆದರೆ, ಅವರು ಆಹ್ವಾನವನ್ನು ತಿರಸ್ಕರಿಸಿದ್ದಾರೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ: ಅಂತರಾಷ್ಟ್ರೀಯ ಟಿ-20 ಕ್ರಿಕೆಟ್ನಲ್ಲಿ ಹೊಸ ದಾಖಲೆ ಬರೆಯಲಿದ್ದಾರೆ ಕಿಂಗ್ ಕೊಹ್ಲಿ
ಈ ಕುರಿತು ಪ್ರತಿಕ್ರಿಯಿಸಿರುವ ಪ್ರಕಾಶ್ ಅಂಬೇಡ್ಕರ್, ಅಯೋಧ್ಯಯೆಯಲ್ಲಿ ನಡೆಯಲಿರುವ ರಾಮಮಂದಿರ ಉದ್ಘಾಟನೆ ಕಾರ್ಯಕ್ರಮಕ್ಕೆ ನನಗೆ ಆಹ್ವಾನ ಬಂದಿತ್ತು. ಇದು ಬಿಜೆಪಿ-ಆರ್ಎಸ್ಎಸ್ ಚುನಾವಣಾ ಲಾಭಕ್ಕಾಗಿ ಮಾಡುತ್ತಿರುವ ಕಾರ್ಯಕ್ರಮವಾದ್ದರಿಂದ ನಾನು ಭಾಗವಹಿಸುವುದಿಲ್ಲ ಎಂದು ಹೇಳಿ ಆಹ್ವಾನವನ್ನು ತಿರಸ್ಕರಿಸಿದ್ದೇನೆ.
ರಾಜಕೀಯ ಪಕ್ಷಗಳು ದೇಶಕ್ಕಿಂತ ಧರ್ಮವನ್ನು ಇರಿಸಿದರೆ, ನಮ್ಮ ಸ್ವಾತಂತ್ರ್ಯ ಎರಡನೇ ಬಾರಿಗೆ ಅಪಾಯಕ್ಕೆ ಸಿಲುಕುತ್ತದೆ ಮತ್ತು ಬಹುಶಃ ಶಾಶ್ವತವಾಗಿ ಕಳೆದುಹೋಗುತ್ತದೆ ಎಂದು ನಮ್ಮ ತಾತನವರು ಹೇಳಿದ್ದರು. ಅಂದು ನಮ್ಮ ತಾತನವರು ಹೇಳಿದ ಮಾತನ್ನು ಆರ್ಎಸ್ಎಸ್ ಹಾಗೂ ಬಿಜೆಪಿ ನಿಜ ಮಾಡಲು ಹೊರಟಿದ್ದು, ರಾಮಮಂದಿರ ಉದ್ಘಾಟನೆಯನ್ನು ತನ್ನ ರಾಜಕೀಯ ಲಾಭಕ್ಕೆ ಬಳಸಿಕೊಳ್ಳುತ್ತಿವೆ ಎಂದು ಆರೋಪಿಸಿದ್ದಾರೆ.