ಚಂಡೀಗಢ: ಉನ್ನತ ತಂತ್ರಜ್ಞಾನ ಬಳಸಿ ತಯಾರಿಸಿದ ಆಲೂಗಡ್ಡೆಯ ಹೊಸ ತಳಿಯ ಮಿನಿ-ಟ್ಯೂಬರ್ಗಳನ್ನು ಹರಿಯಾಣದ ಆಲೂಗಡ್ಡೆ ತಂತ್ರಜ್ಞಾನ ಕೇಂದ್ರ (ಪಿಟಿಸಿ) ಈ ತಿಂಗಳ ಕೊನೆಯೊಳಗೆ ಬಿಡುಗಡೆ ಮಾಡಲಿದೆ ಎಂದು ಮೂಲಗಳು ತಿಳಿಸಿವೆ.
ಏಳು ವರ್ಷದ ಹಿಂದೆ ಸ್ಥಾಪಿಸಲಾದ ಪಿಟಿಸಿ, ದೊಡ್ಡ ಪ್ರಮಾಣದಲ್ಲಿ ರೋಗಮುಕ್ತ ನೆಡುವಿಕೆ ಸಾಮಗ್ರಿ ಪೂರೈಕೆ ಹಾಗೂ ಹೊಸ ತಳಿಗಳನ್ನು ಪರಿಚಯಿಸುವ ಬೇಡಿಕೆಯನ್ನು ಈಡೇರಿಸುತ್ತಿದೆ. ಈ ಮಾಸಾಂತ್ಯ ಹೊರ ಬರಲಿರುವ ನೂತನ ತಳಿಯು ಸತು ಮತ್ತು ಕಬ್ಬಿಣ ಅಂಶದಿಂದ ಸಮೃದ್ಧವಾಗಿರಲಿದೆ. ಉನ್ನತ ಗುಣಮಟ್ಟದ ಆಲೂಗಡ್ಡೆಗಳನ್ನು ಉತ್ಪಾದಿಸಲು ಬಳಸುವ ಈ ಮಿನಿ-ಟ್ಯೂಬರ್ಗಳು ಸಾಮಾನ್ಯವಾಗಿ ಕಿರುರೂಪದ ಬೀಜದ ಬಟಾಟೆಗಳಾಗಿವೆ ಹಾಗೂ ಅವನ್ನು ಏರೋಪೋನಿಕ್ಸ್ ತಂತ್ರಜ್ಞಾನ ಬಳಸಿ ನಿಯಂತ್ರಿತ, ರೋಗಮುಕ್ತ ಪರಿಸ್ಥಿತಿಗಳಲ್ಲಿ ಉತ್ಪಾದಿಸಲಾಗುತ್ತದೆ.
ಮಣ್ಣಿಲ್ಲದೆ ಕೃಷಿ ನಡೆಸುವ ವಿಧಾನವನ್ನು ಏರೋಪೋನಿಕ್ಸ್ ಕೃಷಿ ಎನ್ನುತ್ತಾರೆ. ಈ ವಿಧಾನದಲ್ಲಿ ಸೀಮಿತ ನೀರು ಮತ್ತು ಇತರ ಸಂಪನ್ಮೂಲಗಳಿಂದ ಹೆಚ್ಚು ಬೆಳೆಗಳನ್ನು ತ್ವರಿತವಾಗಿ ಬೆಳೆಸಲಾಗುತ್ತದೆ. ಸರ್ಕಾರಿ ಸಂಸ್ಥೆಯಾದ ಪಿಟಿಸಿಯಲ್ಲಿರುವ ಏರೋಪೋನಿಕ್ಸ್ ಸೌಲಭ್ಯವು ದೇಶದಲ್ಲೇ ದೊಡ್ಡ ಕೇಂದ್ರಗಳಲ್ಲಿ ಒಂದಾಗಿದೆ.
ಕುರ್ಫಿ ಉದಯ್
ಬಟಾಟೆಯ ಹೊಸ ತಳಿಯ ಮಿನಿ-ಟ್ಯೂಬರ್ಗಳಿಗೆ ಕುರ್ಫಿ ಉದಯ್ ಎಂದು ನಾಮಕರಣ ಮಾಡಲಾಗಿದೆ. ಈ ತಳಿ ವಿಶೇಷವಾಗಿ ಉತ್ತರ ಭಾರತದ ಬಯಲು ಪ್ರದೇಶಗಳಲ್ಲಿ ಬೆಳೆಸಲು ಸೂಕ್ತವಾಗಿದೆ. ಇದು ರೈತರಿಗೆ ವರದಾನವಾಗಲಿದೆ ಎಂದು ಪಿಟಿಸಿ ವಿಷಯ ತಜ್ಞ ಜಿತೇಂದ್ರ ಸಿಂಗ್ ಹೇಳಿದ್ದಾರೆ.