ಮೈಸೂರು: ದಕ್ಷಿಣ ಶಿಕ್ಷಕರ ಕ್ಷೇತ್ರದ ಜೆಡಿಎಸ್ ಟಿಕೆಟ್ ಕೈ ತಪ್ಪಿದ ಹಿನ್ನೆಲೆಯಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಸಾಧ್ಯತೆ ಇದೆ.
ಕೆ.ಟಿ.ಶ್ರೀಕಂಠೇಗೌಡ ಹಾಗೂ ವಿವೇಕಾನಂದ ಜೆಡಿಎಸ್ ಟಿಕೆಟ್ ಆಕಾಂಕ್ಷಿಗಳಾಗಿದ್ದರು. ಇವರಲ್ಲಿ ವಿವೇಕಾನಂದ ಅವರು ಟಿಕೆಟ್ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಜೆಡಿಎಸ್ ಟಿಕೆಟ್ ನಿರೀಕ್ಷೆಯಲ್ಲಿದ್ದ ಕೆ.ಟಿ.ಶ್ರೀಕಂಠೇಗೌಡರಿಗೆ ಪಕ್ಷದ ಬಿ ಫಾರಂ ಕೈತಪ್ಪಿದ್ದು ಭಾರಿ ನಿರಾಸೆ ಮೂಡಿಸಿದೆ. ಈ ಹಿನ್ನೆಲೆಯಲ್ಲಿ ಮೈಸೂರಿನ ಕುಂಚಿಟಿಗರ ಸಂಘದ ಆವರಣದಲ್ಲಿ ಬುಧವಾರ ರಾತ್ರಿ ಶಿಕ್ಷಕರ ಸಭೆ ನಡೆಸಿ ತಮ್ಮ ಬೆಂಬಲಿಗರು ಮತ್ತು ಶಿಕ್ಷಕರ ಅಭಿಪ್ರಾಯ ಸಂಗ್ರಹಿಸಿದ್ದಾರೆ.
ಈ ವೇಳೆ ಸಭೆಯಲ್ಲಿ ಭಾಗವಹಿಸಿದ್ದ ಬಹುತೇಕರು ಸ್ವಾಭಿಮಾನಿ ಶಿಕ್ಷಕರ ವೇದಿಕೆ ಪರವಾಗಿ ಸ್ಪರ್ಧಿಸುವಂತೆ ಕೆ.ಟಿ.ಶ್ರೀಕಂಠೇಗೌಡ ಅವರನ್ನು ಒತ್ತಾಯಿಸಿದ್ದಾರೆ. ‘ಚುನಾವಣೆಯಲ್ಲಿ ನೀವು ಪಕ್ಷೇತರವಾಗಿ ಸ್ಪರ್ಧೆ ಮಾಡಬೇಕು’ ಎಂದು ಒತ್ತಾಯಿಸುವ ಜತೆಗೆ ಜೆಡಿಎಸ್ ವರಿಷ್ಠರ ನಿರ್ಧಾರ ಬಗ್ಗೆಯೂ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಾನು ಚುನಾವಣೆಯಲ್ಲಿ ಸ್ಪರ್ಧಿಸಬೇಕು ಎಂದು ಸ್ವಾಭಿಮಾನಿ ಶಿಕ್ಷಕರು ಒತ್ತಾಯ ಮಾಡಿದ್ದಾರೆ. ಈ ಸಂಬಂಧ ಮೈಸೂರಿನಲ್ಲಿ ಸಭೆ ನಡೆಸಿ ಅಭಿಪ್ರಾಯ ಪಡೆದಿದ್ದಾರೆ. ಬುಧವಾರ ರಾತ್ರಿ ಮಂಡ್ಯ, ಹಾಸನ, ಚಾಮರಾಜನಗರದ ಶಿಕ್ಷಕರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಅವರ ಅಭಿಪ್ರಾಯ ಸಂಗ್ರಹಿಸಲಿದ್ದಾರೆ. ಎಲ್ಲ ಕಡೆಯಿಂದಲೂ ಸ್ವಾಭಿಮಾನಿ ಶಿಕ್ಷಕರ ಪರವಾಗಿ ನಾನು ಅಖಾಡಕ್ಕೆ ಇಳಿಯಲು ಒತ್ತಡ ಕೇಳಿ ಬಂದಿದೆ ಎಂದು ಹೇಳುವ ಮೂಲಕ ಕೆ.ಟಿ.ಶ್ರೀಕಂಠೇಗೌಡ ಕಣಕ್ಕಿಳಿಯುವುದಾಗಿ ತಿಳಿಸಿದ್ದಾರೆ.
ಸಭೆಯಲ್ಲಿ ಮಾತನಾಡಿದ ಅವರು, ನನಗೆ ಪಕ್ಷ ಬಿ ಫಾರಂ ನಿರಾಕರಣೆ ಮಾಡಿದೆ. ಪಕ್ಷ ಏಕೆ ಇಂತಹ ನಿರ್ಣಯ ತೆಗೆದುಕೊಂಡಿದೆ ಗೊತ್ತಿಲ್ಲ. ವಿಧಾನ ಪರಿಷತ್ ಚಿಂತಕರ ಚಾವಡಿ ಇದ್ದಂತೆ. ಇಲ್ಲಿಗೆ ಬುದ್ಧಿ ಜೀವಿಗಳು, ಪ್ರಗತಿಪರ ಚಿಂತಕರನ್ನು ಆಯ್ಕೆ ಮಾಡಲಾಗುತ್ತದೆ. ಈ ವಿಷಯ ತಿಳಿದಿದ್ದರೂ ಪಕ್ಷದ ವರಿಷ್ಠರು ನನಗೆ ಯಾಕೆ ಟಿಕೆಟ್ ಕೈ ತಪ್ಪಿಸಿದ್ದರೋ ಗೊತ್ತಿಲ್ಲ ಎಂದು ಅಸಮಧಾನ ವ್ಯಕ್ತಪಡಿಸಿದರು.