ಕೊಪ್ಪಳ: ಸಾಮಾನ್ಯವಾಗಿ ಮಳೆ ಬರಲೆಂದು ಜನರು ಗಂಗಾ ಮಾತೆಗೆ ಪೂಜೆ ಸಲ್ಲಿಸುವುದು ವಾಡಿಕೆ. ಆದರೆ ವರುಣನ ಆರ್ಭಟಕ್ಕೆ ನಲುಗಿದ ಜನರು ‘ಸಾಕು ನಮ್ಮೂರಿಗೆ ಬರಬೇಡ ಮುಂದೆ ಹೋಗು’ ಎಂದು ಬೇಡಿಕೊಂಡು ಪೂಜಿ ಸಲ್ಲಿಸಿದ ಘಟನೆ ಜಿಲ್ಲೆಯಲ್ಲಿ ಮಂಗಳವಾರ ನಡೆದಿದೆ.
ನಮ್ಮೂರಿಗೆ ಬಂದು ಹಾನಿ ಮಾಡಬೇಡ. ಸಾಕು ಮುಂದೆ ಹೋಗು ಎಂದು ಮುತೈದೆಯರು ಕೊಪ್ಪಳ ತಾಲೂಕಿನ ಹಳೆ ಗೊಂಡಬಾಳ ಗ್ರಾಮದಲ್ಲಿ ಗಂಗಾಮಾತೆಗೆ ಪೂಜೆ ಸಲ್ಲಿಸಿದ್ದಾರೆ. ಹಿರೇಹಳ್ಳ ಜಲಾಶಯದಿಂದ ಹಳ್ಳಕ್ಕೆ ನೀರು ಬಿಟ್ಟಿದ್ದರಿಂದ ತಾಲೂಕು ವ್ಯಾಪ್ತಿಯ ಹಲವು ಗ್ರಾಮಗಳ ಹೊಲಗಳಿಗೆ ನೀರು ಹೊಕ್ಕಿದೆ.
ಅಲ್ಲದೆ, ತುಂಗಭದ್ರಾ ನದಿ ಪಾತ್ರದ ಹಿನ್ನಿರಿನಲ್ಲಿಯೂ ಪ್ರವಾಹದ ಆತಂಕ ಮೂಡಿದೆ. ಹೀಗಾಗಿ ತಮ್ಮೂರು ನದಿ ಪಾತ್ರದಲ್ಲಿದ್ದು, ಹೀರೆಹಳ್ಳದ ನೀರು ನದಿಗೆ ಸೇರುವ ಸಮಯದಲ್ಲಿ ತಮ್ಮೂರಿಗೆ ಬಂದು ಪ್ರವಾಹ ಪರಿಸ್ಥಿತಿ ಉಂಟಾಗಬಾರದು ಎಂದು ಮುತೈದೆಯರು ಪೂಜೆ ಸಲ್ಲಿಸಿದ್ದಾರೆ.
ಈಗಾಗಲೇ ಗ್ರಾಮದ ಹತ್ತಿರ ನೀರು ಬಂದಿದ್ದು, ಊರೊಳಗೆ ಬರುವ ಆತಂಕ ಗ್ರಾಮಸ್ಥರನ್ನು ಕಾಡುತ್ತಿದೆ. ತಾಲೂಕಾಡಳಿತವೂ ಜನರ ಸ್ಥಳಾಂತರಕ್ಕೆ ಸಿದ್ಧತೆ ನಡೆಸಿದೆ.