ನವದೆಹಲಿ: ಚುನಾವಣಾ ಕಣಕ್ಕೆ ಇಳಿಯುವ ಅಭ್ಯರ್ಥಿಗಳು ತಮ್ಮ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ಕುರಿತು ಇಲೆಕ್ಟ್ರಾನಿಕ್ಸ್ ಮತ್ತು ಪ್ರಿಂಟ್ ಮೀಡಿಯಾದಲ್ಲಿ ಸಾರ್ವಜನಿಕರಿಗೆ ಮಾಹಿತಿ ನೀಡಬೇಕು ಎಂಬ ನಿರ್ದೇಶನ ಪ್ರಯೋಜನಕ್ಕೆ ಬಂದಿಲ್ಲ. ಕಳೆದ ವರ್ಷದ ನೀಡಿದ ಈ ನಿರ್ದೇಶನ ರಾಜಕೀಯದ ಅಪರಾಧೀಕರಣ ತಡೆಯಲು ಪ್ರಯೋಜನವಾಗಿಲ್ಲ ಎಂದು ಚುನಾವಣಾ ಆಯೋಗ ಶುಕ್ರವಾರ ಸುಪ್ರೀಂ ಕೋರ್ಟ್ಗೆ ತಿಳಿಸಿದೆ.
ನ್ಯಾಯಮೂರ್ತಿಗಳಾದ ಆರ್.ಎಫ್.ನಾರಿಮನ್ ಮತ್ತು ಎಸ್.ರವೀಂದ್ರ ಭಟ್ ಅವರನ್ನು ಒಳಗೊಂಡ ನ್ಯಾಯಪೀಠ, ರಾಷ್ಟ್ರದ ಹಿತಾಸಕ್ತಿಯ ಕಾರಣಕ್ಕೆ ರಾಜಕೀಯ ಅಪರಾಧೀಕರಣ ತಡೆಯಲು ಒಂದು ಫ್ರೇಮ್ವರ್ಕ್ ಸಿದ್ಧಪಡಿಸಿಕೊಂಡು ಒಂದು ವಾರದೊಳಗೆ ಸಲ್ಲಿಸಿ ಎಂದು ಚುನಾವಣಾ ಆಯೋಗಕ್ಕೆ ಸೂಚಿಸಿದೆ.
ಇದಕ್ಕೆ ಪ್ರತಿಕ್ರಿಯಿಸಿದ ಆಯೋಗ, ಕ್ರಿಮಿನಲ್ ಪ್ರಕರಣಗಳ ಬಗ್ಗೆ ಮಾಧ್ಯಮಗಳ ಮೂಲಕ ತಾವೇ ಪ್ರಚುರಪಡಿಸುವಂತೆ ನಿರ್ದೇಶಿಸುವುದರಿಂದ ಪ್ರಯೋಜನವಿಲ್ಲ. ಹೀಗಾಗಿ ಇನ್ನು ಮುಂದೆ ರಾಜಕೀಯ ಪಕ್ಷಗಳೇ ಅಭ್ಯರ್ಥಿಗಳ ಕ್ರಿಮಿನಲ್ ಹಿನ್ನೆಲೆ ಪರಿಶೀಲಿಸಿ ಅವರಿಗೆ ಟಿಕೆಟ್ ನೀಡದಿರಲು ನಿರ್ಧರಿಸಬೇಕು ಎಂಬುದೇ ಸರಿಯಾದ ಪರಿಹಾರೋಪಾಯ ಎಂದು ಹೇಳಿದೆ.
ರಾಜಕೀಯ ಅಪರಾಧೀಕರಣ ತಡೆಯುವಂತೆ ಆಗ್ರಹಿಸಿ ಬಿಜೆಪಿ ನಾಯಕ, ಹಿರಿಯ ನ್ಯಾಯವಾದಿ ಅಶ್ವಿನಿ ಉಪಾಧ್ಯಾಯ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಕೋರ್ಟ್, ಚುನಾವಣಾ ಆಯೋಗದ ಜತೆಗೆ ಸಮಾಲೋಚಿಸಿ ಫ್ರೇಮ್ ವರ್ಕ್ ರೂಪಿಸುವಂತೆ ಅರ್ಜಿದಾರರಿಗೂ ಸೂಚಿಸಿದೆ.
ಪಂಚ ಸದಸ್ಯರ ನ್ಯಾಯಪೀಠ 2018ರ ಸೆಪ್ಟೆಂಬರ್ನಲ್ಲಿ ನೀಡಿದ ತೀರ್ಪಿನ ಪ್ರಕಾರ, ಅಭ್ಯರ್ಥಿಗಳು ತಾವೇ ತಮ್ಮ ವಿರುದ್ಧದ ಕ್ರಿಮಿನಲ್ ಪ್ರಕರಣಗಳನ್ನು ಆಯೋಗದ ಎದುರು ಘೋಷಿಸುವ ನಿಯಮ ಜಾರಿಗೆ ಬಂದಿತ್ತು. ಇದಾದ ಬಳಿಕ, ಆಯೋಗ ಮಾಧ್ಯಮಗಳ ಮೂಲಕ ಇವುಗಳನ್ನು ಪ್ರಚುರ ಪಡಿಸುವಂತೆ ಅಭ್ಯರ್ಥಿಗಳಿಗೆ ಸೂಚಿಸಿತ್ತು. (ಏಜೆನ್ಸೀಸ್)