ನವದೆಹಲಿ: ಈಶಾನ್ಯ ದೆಹಲಿಯಲ್ಲಿ ನಡೆದ ಹಿಂಸಾಚಾರ ರಾಜಕೀಯ ಪಿತೂರಿಯಾಗಿತ್ತು. ಅದನ್ನು ಅಲ್ಪಸಂಖ್ಯಾತರಲ್ಲಿ ಶಾಶ್ವತ ಭಯ ತುಂಬಲು ನಡೆಸಲಾಯಿತು.
ಅದೇ ಸಂದರ್ಭದಲ್ಲಿ ಭಾರತಕ್ಕೆ ಆಗಮಿಸಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮುಂದೆ ದೇಶದ ಮಾನವನ್ನು ಹಾನಿ ಮಾಡಲು ಹಿಂಸಾಚಾರವನ್ನು ಬಳಸಲಾಯಿತು ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ದೆಹಲಿ ಹಿಂಸಾಚಾರದ ಬಗ್ಗೆ ಸೂಕ್ತ ತನಿಖೆ ನಡೆಸಲಾಗುತ್ತಿದೆ. ಆ ವರದಿ ಬಂದ ನಂತರ ಗಲಭೆಗೆ ಕಾರಣವಾದವರ ಮೇಲೆ ಕಠಿಂ ಕ್ರಮಕೈಗೊಳ್ಳಲಾಗುವುದು ಎಂದರು. ಅಲ್ಲದೆ, ಇದು ರಾಜಕೀಯ ಪಿತೂರಿ ಎನ್ನುವುದು ನನ್ನ ವ್ಯಯಕ್ತಿಕ ಅಭಿಪ್ರಾಯ. ಇದರ ಮೇಲೆ ನಡೆಯುತ್ತಿರುವ ತನಿಖೆ ಪೂರ್ಣಗೊಂಡ ಮೇಲೆ ಸತ್ಯ ಬಯಲಿಗೆ ಬರಬೇಕಿದೆ ಎಂದರು.
ಅಲ್ಲಿದ್ದ ಆ್ಯಸಿಡ್ ಬಾಂಬ್ಗಳು ತಯಾರಿಸಿದ ರೀತಿ ನೋಡಿದರೆ ತಿಳಿಯುತ್ತದೆ. ಅಲ್ಲದೆ ಅವುಗಳನ್ನು ತಯಾರಿಸಲು ಆ್ಯಸಿಡ್ ಕೊಂಡುಕೊಂಡಿದ್ದು ಚೆಕ್ ಕೊಟ್ಟು ಎಂದು ತಿಳಿದು ಬಂದಿದೆ. ಆದರೆ ಅದರ ಬಗ್ಗೆ ಮಾತನಾಡುವುದು ಸೂಕ್ತವಲ್ಲ. ತನಿಖೆ ಪೂರ್ಣಗೊಳ್ಳುವವರೆಗೆ ಕಾಯೋಣ ಎಂದರು.
‘ಸಬ್ಕಾ ಸಾಥ್, ಸಬ್ಕಾ ವಿಕಾಸ್ ಮತ್ತು ಸಬ್ ಕಾ ವಿಶ್ವಾಸ’ ಎಂಬ ಘೋಷಣೆಗೆ ನಮ್ಮ ಸರ್ಕಾರ ಬದ್ಧವಾಗಿದೆ. ಪೌರತ್ವ ತಿದ್ದುಪಡಿ ಕಾಯ್ದೆಯು ಅಲ್ಪಸಂಖ್ಯಾತ ಸಮುದಾಯದ ಒಬ್ಬ ಸದಸ್ಯರ ಪೌರತ್ವವನ್ನು ಕಸಿದುಕೊಳ್ಳುವುದಿಲ್ಲ. ಈ ಕಾಯ್ದೆ ಬಗ್ಗೆ ಪ್ರತಿಪಕ್ಷಗಳು ಮತ್ತು ಅಲ್ಪಸಂಖ್ಯಾತರೊಂದಿಗೆ ಚರ್ಚಿಸಲು ಸರ್ಕಾರ ಸಿದ್ಧವಾಗಿದೆ. ವಾಸ್ತವವಾಗಿ ಸಿಎಎ ಅಥವಾ 370 ನೇ ವಿಧಿಯಲ್ಲಿ ಅಲ್ಪಸಂಖ್ಯಾತರ ವಿರುದ್ಧ ಏನೂ ಇಲ್ಲ ಎಂದು ಅವರು ಪುನರುಚ್ಚರಿಸಿದರು. (ಏಜೆನ್ಸೀಸ್)