ಹಾವೇರಿ: ಪರವಾನಗಿ ಪಡೆಯದೆ ಬೈಕ್ ರ್ಯಾಲಿ ಮಾಡಿ ಪಕ್ಷದ ಬಾವುಟ ಹಾಗೂ ಶಾಲು ಬಳಕೆ ಮಾಡಿದ ಆರೋಪದಡಿ ಹಾವೇರಿ-ಗದಗ ಲೋಕಸಭೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ ವಿರುದ್ಧ ಇಲ್ಲಿಯ ಶಹರ ಠಾಣೆಯಲ್ಲಿ ದೂರು ದಾಖಲಾಗಿದೆ.
ಚುನಾವಣಾಧಿಕಾರಿ ವಸೀಂಅಕ್ರಂ ಮಿರ್ಚಿ ದೂರು ನೀಡಿದ್ದು, ಆರೋಪಿಯು ಚುನಾವಣಾ ಆಯೋಗದಿಂದ ಪರವಾನಗಿ ಪಡೆದುಕೊಳ್ಳದೆ ಕೆಇಬಿಯಿಂದ ಸಿದ್ರಾಮೇಶ್ವರ ಕಲ್ಯಾಣ ಮಂಟಪದವರೆಗೆ ಬೈಕ್ ರ್ಯಾಲಿ ಮಾಡಿದ್ದಾರೆ. ಅದರಲ್ಲಿ ಪಾಲ್ಗೊಂಡ ಪಕ್ಷದ ಮುಖಂಡರು, ಕಾರ್ಯಕರ್ತರಿಗೆ ಬಾವುಟ, ಕೊರಳಿಗೆ ಶಾಲು ನೀಡಿದ್ದಾರೆ.
ಈ ಹಿನ್ನೆಲೆಯಲ್ಲಿ ಅವರಿಂದ 2 ಸಾವಿರ ರೂ. ಮೌಲ್ಯದ 80 ಕಾಂಗ್ರೆಸ್ ಪಕ್ಷದ ಬಾವುಟ, 60 ಕೊರಳಿಗೆ ಹಾಕುವ ಶಾಲು ವಶಪಡಿಸಿಕೊಳ್ಳಲಾಗಿದೆ ಎಂದು ದೂರಿನಲ್ಲಿ ವಿವರಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.