ಹಿರಿಯೂರು: ಬಿಜೆಪಿ ಪಕ್ಷದ ಪರ ಪ್ರಚಾರ ಮಾಡಿದ್ದಕ್ಕಾಗಿ ನಾಲ್ವರು ಪೊಲೀಸರನ್ನು ವರ್ಗಾವಣೆ ಮಾಡಿ ಆದೇಶ ನೀಡಿರುವ ಘಟನೆ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ವಿಧಾನಸಭಾ ಕ್ಷೇತ್ರದಲ್ಲಿ ನಡೆದಿದೆ.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಈರಲಿಂಗೇಗೌಡ ರಾಜಕೀಯ ಪಕ್ಷದ ಪರ ಪ್ರಚಾರ ಮಾಡಿದ ಪೊಲೀಸ್ ಕಾನ್ಸ್ಟೇಬಲ್ ಶಿವಮೂರ್ತಿ, ಫಿರ್ದೋಸ್, ತಿಮ್ಮೇಶ್ ತಿಮ್ಮರಾಯಪ್ಪ ಹಾಗೂ ಮೌನೇಶ್ವರ್ ವಿರುದ್ಧ ಬಗ್ಗೆ ಚುನಾವಣಾಧಿಕಾರಿಗಳಿಗೆ ದೂರು ನೀಡಿದ್ದರು. ಈ ಹಿನ್ನೆಲೆ ನಾಲ್ವರು ಪೊಲೀಸರನ್ನು ವರ್ಗಾವಣೆ ಮಾಡಿ ಎಂದು ಎಸ್ಪಿ ಕೆ.ಪರಶುರಾಮ್ ಆದೇಶ ನೀಡಿದ್ದಾರೆ.
ಆದೇಶ ಪತ್ರದಲ್ಲಿ ಏನಿದೆ?
ಆದೇಶ ಪತ್ರದಲ್ಲಿ“ಹಿರಿಯೂರು ವಿಧಾನಸಭಾ ಕ್ಷೇತ್ರದಲ್ಲಿ ವಿವಿಧ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕೆಳಕಂಡ ಸಿಬ್ಬಂದಿಗಳು, ಸುಮಾರು 5 ವರ್ಷಗಳಿಂದ ಹಿರಿಯೂರು ಪಟ್ಟಣ ಹಾಗೂ ಗ್ರಾಮೀಣ ಪೊಲೀಸ್ ಠಾಣೆಗಳಲ್ಲಿ ನಿರ್ವಹಿಸುತ್ತಿದ್ದು ಪ್ರಸ್ತುತ ಹಿರಿಯೂರು ಬಿಜೆಪಿ ಪಕ್ಷದ ಶಾಸಕರ ಪರವಾಗಿ, ಬಿಜೆಪಿ ಪಕ್ಷದ ಪರವಾಗಿ ತೀರ ತೊಡಗಿಸಿಕೊಂಡಿರುತ್ತಾರೆ.
ಇವರು ಸರ್ಕಾರಿ ನೌಕರರಾಗಿದ್ದು ಯಾವುದೇ ರಾಜಕೀಯ ಪಕ್ಷದ ಪರವಾಗಿ ಪ್ರಚಾರ ಹಾಗೂ ಸರಕಾರಿ ಇಲಾಖೆ ಹೆಸರಿನಲ್ಲಿ ಹೆದರಿಸಿ ಇಂತಹದೇ ಪಕ್ಷಕ್ಕೆ ಮತ ಹಾಕಬೇಕೆಂದು ಬೆದರಿಕೆ ಒಡ್ಡುವದು ಕರ್ನಾಟಕ ಸರ್ಕಾರದ ನಿಯಮಾವಳಿಗೆ ವಿರುದ್ಧವಾಗಿರುತ್ತದೆ. ಇವರು ಈ ಹಿರಿಯೂರು ವಿಧಾನಸಭಾ ಕ್ಷೇತ್ರದಲ್ಲಿ 2023ರ ಚುನಾವಣಾ ಕರ್ತವ್ಯದಲ್ಲಿದ್ದಾರೆ. ಬಿಜೆಪಿ ಪಕ್ಷದ ಪರವಾಗಿ ಏಕಪಕ್ಷೀಯವಾಗಿ ಪ್ರಚಾರ ಮಾಡುವುರದ ಜತೆಗೆ ಸಾರ್ವಜನಿಕರಿಗೆ ಬೆದರಿಕೆ ಹಾಕುವ ಮೂಲಕ ಮತ ಹಾಕಿಸುವುದರಲ್ಲಿ ಯಾವುದೇ ಸಂಶಯವಿಲ್ಲ.
ಅಲ್ಲದೇ ಚುನಾವಣೆಯ ಸಂದರ್ಭದಲ್ಲಿ ಗಲಭೆಗಳಾಗುವ ಸಾಧ್ಯತೆ ಇರುತ್ತದೆ. ಈ ಕಾರಣ ಕೆಳಕಂಡ ಸಿಬ್ಬಂದಿಗಳನ್ನು ಹಿರಿಯೂರು ತಾಲೂಕಿನಿಂದ ವರ್ಗಾವಣೆ ಮಾಡೆಲಾಗುತ್ತಿದೆ” ಎಂದು ಬರೆಯಲಾಗಿದೆ.