ಕೆ.ಕೆಂಚಪ್ಪ ಮೊಳಕಾಲ್ಮೂರು
ಪಟ್ಟಣದ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ 35 ಪೊಲೀಸ್ ಸಿಬ್ಬಂದಿಗೆ ಕ್ವಾಟ್ರಸ್ಗಳಿಲ್ಲದೆ ದುಬಾರಿ ಬಾಡಿಗೆ ಮನೆಯಲ್ಲಿ ವಾಸ ಮಾಡಬೇಕಾದ ದುಸ್ಥಿತಿ ಬಂದಿದೆ.
ಇದರಿಂದಾಗಿ ಪ್ರತಿ ತಿಂಗಳು ಬಾಡಿಗೆ ಹಣದ ಹೊರೆ ಬಿಸಿತುಪ್ಪವಾಗಿ ಪರಿಣಮಿಸಿದೆ. ಲಭ್ಯವಿರುವ 14 ವಸತಿ ಗೃಹಗಳಿಗೆ ಮೊದಲು ಬಂದವರೇ ಅದೃಷ್ಟವಂತರು ಎನ್ನುವಂತಾಗಿದೆ.
ಆಂಧ್ರ ಮತ್ತು ಕರ್ನಾಟಕದ ಗಡಿ ಸರಹದ್ದಿನಲ್ಲಿರುವ ಮೊಳಕಾಲ್ಮೂರು ತಾಲೂಕು ಕೇಂದ್ರದದಲ್ಲಿ ಕಾರ್ಯ ನಿರ್ವಹಿಸುತ್ತಿರುವ 55 ಸಿಬ್ಬಂದಿಗೆ
ಅನುಗುಣವಾಗಿ ಸರ್ಕಾರಿ ಸ್ವಾಮ್ಯದ ವಾಸದ ಮನೆ ಸೌಲಭ್ಯ ಕಲ್ಪಿಸಬೇಕೆಂಬ ಮಾನದಂಡ ಇಲ್ಲಿನವರಿಗೆ ಅನ್ವಹಿಸುವುದಿಲ್ಲವೇನೋ ಎಂಬಂತಾಗಿದೆ.
ಪೊಲೀಸ್ ಠಾಣೆ ಪಕ್ಕದಲ್ಲೇ ಒಂದು ಎಕರೆ ವಿಸ್ತೀರ್ಣದಲ್ಲಿ ಬ್ರಿಟೀಷರ ಕಾಲದಲ್ಲಿ ಕಟ್ಟಿರಬಹುದಾದ ಕೆಂಪು ಹೆಂಚಿನ 10 ವಸತಿ ಗೃಹಗಳು ಶಿಥಿಲಗೊಂಡು ವಾಸಕ್ಕೆ ಯೋಗ್ಯ ಇಲ್ಲದಂತಾಗಿವೆ.
ಅನೇಕ ಬಾರಿ ರಿಪೇರಿ ಮಾಡಿಸಿದರೂ ಉಪಯೋಗಕ್ಕೆ ಬಾರದ ರೀತಿ ಇದ್ದರೂ ಕೆಲವರು ಜೀವದ ಹಂಗು ತೊರೆದು ಕುಟಂಬ ಸಹಿತ ಅವುಗಳಲ್ಲೇ ವಾಸ ಮಾಡುತ್ತಿದ್ದರು.
ಮಳೆಗಾಲದಲ್ಲಿ ಬೀಳುವ ಭಯಕ್ಕೆ ಹೆದರಿ ಈಗ ಖಾಲಿ ಮಾಡಿದ್ದಾರೆ. ಪೊಲೀಸ್ ಠಾನೆ ಪಕ್ಕದಲ್ಲಿ ಇತ್ತೀಚೆಗೆ ಕಟ್ಟಿಸಿರುವ 14 ಗೃಹಗಳಲ್ಲಿ 12 ಜನ ಪೊಲೀಸರು ಹಾಗೂ ಸಿಪಿಐ ಮತ್ತು ಪಿಎಸ್ಐ ವಾಸ ಇದ್ದಾರೆ.
ಉಳಿದ 35 ಪೊಲೀಸರಿಗೆ ಕ್ವಾಟ್ರಸ್ ಬೇಡಿಕೆ ಇದ್ದರೂ ಸರ್ಕಾರ ಮತ್ತು ಅಧೀನ ಇಲಾಖೆ ಮರೆತಂತಿದೆ.
ಕಾಲ ಕ್ರಮೇಣ ಜನಸಂಖ್ಯೆ ಹೆಚ್ಚಳ ಆಧಾರದಲ್ಲಿ ಪಟ್ಟಣ ಬೆಳೆದಂತೆಲ್ಲ ಕಾಲಕಾಲಕ್ಕೆ ಮೂಲಭೂತ ಸೌಕರ್ಯ ಕಲ್ಪಿಸುತ್ತ ಬಂದಿರುವ ಆಡಳಿತ ವ್ಯವಸ್ಥೆ.
ಖಾಕಿ ಪಡೆ ಬಗ್ಗೆ ನಿರ್ಲಕ್ಷೃ ಧೋರಣೆ ತಾಳಿರುವುದು ಸರಿಯಲ್ಲ ಎಂದು ಪೊಲೀಸರು ಕಿಡಿಕಾರುತ್ತಿದ್ದು, ಇನ್ನಾದರೂ ಎಚ್ಚೆತ್ತು ಸುಸಜ್ಜಿತ ಮನೆ ಕಟ್ಟಿಸಿಕೊಡಲು ಔದಾರ್ಯ ತೋರಬೇಕು ಎಂದು ಒತ್ತಾಯಿಸಿದ್ದಾರೆ.
ಇಲ್ಲಿನ ಜನ ಸರಳ ಸಜ್ಜನಿಕೆ, ಶಾಂತಿಪ್ರಿಯತೆಗೆ ಹೆಸರಾಗಿದ್ದು, ಮೊಳಕಾಲ್ಮೂರಲ್ಲಿ ಕರ್ತವ್ಯ ನಿರ್ವಹಿಸಲು ಚಿಂತೆಯಿಲ್ಲ. ಆದರೆ ವಸತಿ ಕೊರತೆ ನಿದ್ದೆಗೆಡಿಸಿದೆ. ಈ ನೋವು ಯಾರಿಗೇಳಬೇಕೋ ತಿಳಿಯದಾಗಿದೆ. ಉನ್ನತ ಹಂತದ ಅಧಿಕಾರಿಗಳು ನಮ್ಮ ಸಮಸ್ಯೆ ಅರ್ಥಮಾಡಿಕೊಳ್ಳಬೇಕು.
ಹೆಸರೇಳಲಿಚ್ಛಿಸದ ಸಿಬ್ಬಂದಿಕಾನೂನು ಸುವ್ಯವಸ್ಥೆಗೆ ಧಕ್ಕೆ ಬಂದಾಗ ತಕ್ಷಣ ಅದನ್ನ ತಿಳಿಗೊಳಿಸಲು ಸಿಬ್ಬಂದಿ ಒಂದೇ ಕಡೆ ಇದ್ದರೆ ಅನುಕೂಲ. ಇದನ್ನ ಮನಗಂಡು ವಸತಿ ಗೃಹ ಲಭ್ಯತೆಗಾಗಿ ಮೇಲಧಿಕಾರಿಗಳಿಗೆ ಪತ್ರ ಬರೆಯಲಾಗಿದೆ. ಪ್ರಸ್ತುತ ಶಿಥಿಲಗೊಂಡಿರುವ 10 ಮನೆಗಳನ್ನ ನೆಲಸಮಗೊಳಿಸಿ ಹೊಸದಾಗಿ ಕಟ್ಟಲು ಅನುವು ಸಿಕ್ಕಿದೆ. ಶೀಘ್ರದಲ್ಲೇ ಈಡೇರುವ ಭರವಸೆ ಇದೆ.
ಎನ್. ಸತೀಶ್, ಸಿಪಿಐ