ಚಿಕ್ಕೋಡಿ: ಪಡೆದ ಸಾಲ ವಾಪಸ್ ಕೊಡಬೇಕಾಗುತ್ತದೆ ಎಂಬ ಕಾರಣಕ್ಕೆ ಅದನ್ನು ಕೊಟ್ಟ ವೃದ್ಧೆಯನ್ನೇ ಕೊಂದಿದ್ದಲ್ಲದೆ, ಆಕೆಯ ಬಳಿ ಇದ್ದ ಆಭರಣವನ್ನೂ ಇಬ್ಬರು ಖದೀಮರು ದೋಚಿದ್ದು, ಕೊನೆಗೂ ಪೊಲೀಸರು ಕೈಗೆ ಸಿಕ್ಕಿಬಿದ್ದಿದ್ದಾರೆ. ಬೆಳಗಾವಿ ಜಿಲ್ಲೆಯಲ್ಲಿ ಈ ಪ್ರಕರಣ ನಡೆದಿದೆ.
ಮಲ್ಲವ್ವ ಜೀವಪ್ಪ ಕಮತೆ (75) ಎಂಬಾಕೆ ಸಾಲಗಾರರಿಂದ ಕೊಲೆಯಾದ ವೃದ್ದೆ. ಶಂಕರ್ ರಾಮಪ್ಪ ಪಾಟೀಲ್, ಮಹೇಶ ಸದಾಶಿವ ಕಬಾಡಗೆ ಕೊಲೆ ಆರೋಪಿಗಳು. ಈ ಪೈಕಿ ಆರೋಪಿ ಶಂಕರ್ ಪಾಟೀಲ್ 50 ಸಾವಿರ ರೂ. ಸಾಲವನ್ನು ಮಲ್ಲವ್ವನಿಂದ ಪಡೆದಿದ್ದ. ಆದರೆ ಆಕೆಗೆ ಸಾಲ ಮರಳಿಸಬೇಕಾಗುತ್ತದೆ ಎಂಬ ಕಾರಣಕ್ಕೆ ಮಹೇಶನ ಸಹಾಯದಿಂದ ಕುತ್ತಿಗೆ ಬಿಗಿದು ಕೊಲೆ ಮಾಡಿದ್ದಾನೆ.
ಶಂಕರ್ ಹಾಗೂ ಮಹೇಶ್ ಇಬ್ಬರೂ ಜತೆಯಾಗಿ ಮಲ್ಲವ್ವನ ಕುತ್ತಿಗೆಗೆ ಸೀರೆಯಿಂದ ಬಿಗಿದು ಕೊಲೆ ಮಾಡಿದ್ದಾರೆ. ಮಾತ್ರವಲ್ಲ, ಆಕೆಯ ಮೈಮೇಲಿದ್ದ ಸುಮಾರು 1 ಲಕ್ಷ ರೂ. ಮೌಲ್ಯದ ಬಂಗಾರದ ಆಭರಣಗಳನ್ನೂ ದೋಚಿಕೊಂಡು ಹೋಗಿದ್ದಾರೆ. ಆರೋಪಿಗಳು ಅ. 6ರಂದು ಬೆಲ್ಲದ ಬಾಗೇವಾಡಿ ಗ್ರಾಮದಲ್ಲಿ ಈ ಕೃತ್ಯವೆಸಗಿ ಪರಾರಿಯಾಗಿ ತಲೆಮರೆಸಿಕೊಂಡಿದ್ದರು. ಪ್ರಕರಣ ದಾಖಲಿಸಿಕೊಂಡು ತನಿಖೆಗಿಳಿದ ಹುಕ್ಕೇರಿ ಠಾಣೆ ಪೊಲೀಸರು ಆರೋಪಿಗಳನ್ನು ಪತ್ತೆ ಮಾಡಿ ಬಂಧಿಸಿದ್ದಾರೆ.
ಪೊಲೀಸ್ ಮನೆಗೇ ಹೊಕ್ಕ ಕಳ್ಳರು; ಪರಾರಿ ಆಗುವಾಗ ಅಡ್ಡಬಂದ ಎಎಸ್ಐ ಪುತ್ರನಿಗೆ ಗುಂಡೇಟು..