ನವದೆಹಲಿ: ದೇಶದಲ್ಲಿ ಕರೊನಾ ವೈರಸ್ ಸೋಂಕಿನ ಹರಡುವಿಕೆಯ ಕೇಂದ್ರಬಿಂದು ಎನಿಸಿಕೊಂಡಿರುವ ನವದೆಹಲಿಯ ನಿಜಾಮುದ್ದೀನ್ನ ಧಾರ್ಮಿಕ ಸಂಸ್ಥೆ ತಬ್ಲಿಘಿ ಜಮಾತ್ನ ಮುಖ್ಯಸ್ಥ ಮೌಲಾನಾ ಸಾದ್ ಖಾಂಡಲ್ವಿ, ಕೋವಿಡ್ 19 ಸೋಂಕಿನ ಬಗ್ಗೆ ವೈದ್ಯರು ನೀಡುವ ಸಲಹೆಗಳನ್ನು ಪಾಲಿಸುವಂತೆ ತಮ್ಮ ಹಿಂಬಾಲಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಕರೊನಾ ವೈರಸ್ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರದೊಂದಿಗೆ ಸಹಕರಿಸಿ. ಅವರು ಹೇಳುವ ಮಾತುಗಳನ್ನು ಕೇಳಿ ಎಂದು ತಬ್ಲಿಘಿ ಜಮಾನ್ನ ಯೂಟ್ಯೂಬ್ ಚಾನಲ್ನಲ್ಲಿ ನೀಡಿರುವ ಸಂದೇಶದಲ್ಲಿ ಹೇಳಿದ್ದಾರೆ.
ಸೋಂಕು ತಡೆಗಟ್ಟಲು ಅಧಿಕಾರಿಗಳು ನೀಡುವ ನಿರ್ದೇಶನಗಳನ್ನು ಪಾಲಿಸಬೇಕು. ವೈದ್ಯರ ಸಲಹೆಯನ್ನು ಕೇಳಬೇಕು. ಉದಾಹರಣೆಗೆ ಗುಂಪುಗೂಡುವನ್ನು ಮೊದಲು ನಿಲ್ಲಿಸಬೇಕು. ಮತ್ತು ಸಂಕಷ್ಟದ ಈ ಸಮಯದಲ್ಲಿ ಸರ್ಕಾರದೊಂದಿಗೆ ಸಹಕರಿಸಬೇಕು. ಯಾವುದೇ ಕಾರಣಕ್ಕೂ ಕಾನೂನಿನ ವಿರುದ್ಧ ನಡೆದುಕೊಳ್ಳಬಾರದು. ಅದು ನಮ್ಮ ಧರ್ಮಕ್ಕೆ ವಿರುದ್ಧವಾಗುತ್ತದೆ ಎಂದು ತಿಳಿಸಿದ್ದಾರೆ.
ನಿಷೇಧಾಜ್ಞೆಯ ಹೊರತಾಗಿಯೂ ನಿಜಾಮುದ್ದೀನ್ ಧಾರ್ಮಿಕ ಕೇಂದ್ರದಲ್ಲಿ ಸಭೆ ನಡೆಸಿದ ಆರೋಪದಲ್ಲಿ ಖಾಂಡಲ್ವಿ ಅವರನ್ನು ಬಂಧಿಸಲು ಪೊಲೀಸರು ದೆಹಲಿ ಮತ್ತು ಉತ್ತರಪ್ರದೇಶದಾದ್ಯಂತ ಶೋಧಿಸುತ್ತಿದ್ದಾರೆ. ಗುಪ್ತ ಸ್ಥಳದಲ್ಲಿ ಅಡಗಿಕೊಂಡಿರುವ ಅವರು ಇದಕ್ಕೂ ಮೊದಲು ಧ್ವನಿಮುದ್ರಿತ ಸಂದೇಶ ಬಿಡುಗಡೆ ಮಾಡಿ, ತಾವು ಸ್ವತಃ ಕ್ವಾರಂಟೇನ್ನಲ್ಲಿ ಇರುವುದಾಗಿ ಹೇಳಿದ್ದರು.
ಈ ನಡುವೆ ಖಾಂಡಲ್ವಿ ಪರ ವಕೀಲರು ಕೂಡ ಖಾಂಡಲ್ವಿ ಅವರ ವಿಡಿಯೋ ಸಂದೇಶದ ತುಣಕನ್ನು ಬಿಡುಗಡೆ ಮಾಡಿದ್ದು, ಕರೊನಾ ವೈರಸ್ ಸೋಂಕನ್ನು ಗಂಭೀರವಾಗಿ ಪರಿಗಣಿಸುವಂತೆ ತಮ್ಮ ಹಿಂಬಾಲಕರಿಗೆ ಖಾಂಡಲ್ವಿ ಸೂಚಿಸಿದ್ದಾರೆ.
ತಬ್ಲಿಘಿ ಜಮಾತ್ ಮತ್ತು COVID19 ವಿವಾದದ ವಿಚಾರಗಳು ಏನೇನು?