ನವದೆಹಲಿ: ನಮ್ಮ ದೇಶದಲ್ಲಿ ಸಂಭವಿಸಿರುವ ಕರೋನಾ ಸೋಂಕು ಸಂಬಂಧಿತ ಸಾವುಗಳ ಪೈಕಿ 39 ನವದೆಹಲಿಯ ನಿಜಾಮುದ್ದೀನ್ನಲ್ಲಿರುವ ತಬ್ಲೀಘಿ ಜಮಾತ್ನ ಪ್ರವಚನಕ್ಕೆ ನೇರವಾಗಿ ಸಂಬಂಧಿಸಿದೆ. ಹೀಗಾಗಿ ತಬ್ಲಿಘಿ ಜಮಾತ್ ಮೇಲೆ ಎಲ್ಲರ ಗಮನ ಕೇಂದ್ರೀಕರಿಸಿದೆ. ಕರೊನಾ ಸಂಬಂಧಿಸಿದಂತೆ ಸರ್ಕಾರ ನೀಡಿರುವ ಮಾರ್ಗದರ್ಶಿಯನ್ನು ಉಲ್ಲಂಘಿಸಿದ ಆರೋಪ ಎದುರಿಸುತ್ತಿದೆ. ಈ ಹಿನ್ನೆಲೆಯಲ್ಲಿ ತಬ್ಲಿಘಿ ಜಮಾತ್ ಮತ್ತು ವಿವಾದದ ಕುರಿತು ಒಂದಿಷ್ಟು ಮಾಹಿತಿ ಇಲ್ಲಿದೆ.
ತಬ್ಲಿಘಿ ಜಮಾತ್ ಎಂದರೇನು?: ಸರಿಸುಮಾರು ಒಂಬತ್ತು ದಶಕಗಳ ಹಿಂದೆ ದೇವಬಂದಿ ಇಸ್ಲಾಮಿಕ್ ಸ್ಕಾಲರ್ ಮೌಲಾನ ಮುಹಮ್ಮದ್ ಇಲಿಯಾಸ್ ಕಾಂಧಲವಿ ಧಾರ್ಮಿಕ ಸುಧಾರಣಾ ಚಳವಳಿಯ ಭಾಗವಾಗಿ ಇದನ್ನು ಸ್ಥಾಪಿಸಿದರು. ಇದು ಸಮಾಜದಲ್ಲಿ ನಂಬಿಕೆಯನ್ನು ಪಸರಿಸುವ ಕೆಲಸವನ್ನು ಮಾಡುತ್ತದೆ. ಇದು ಸಂಪೂರ್ಣವಾಗಿ ರಾಜಕೀಯೇತರ ಚಳವಳಿಯಾಗಿದ್ದು, ಪ್ರವಾದಿ ಮಹಮ್ಮದ್ ಅವರ ಕಲಿಮ್ಹಾ (ನಂಬಿಕೆಯ ಘೋಷಣೆ), ಸಲಾಹ್(ಪ್ರಾರ್ಥನೆ), ಇಲ್ಮ್ ಓ ಝಿಕ್ರ್ (ತಿಳಿವಳಿಕೆ), ಇಕ್ರಾಂ ಏ ಮುಸ್ಲಿಂ(ಮುಸ್ಲಿಮನ ಗೌರವ), ಇಖ್ಲಾಸ್-ಏ-ನಿಯ್ಯತ್ (ಉದ್ದೇಶದ ಪ್ರಾಮಾಣಿಕತೆ) ಮತ್ತು ತಫ್ರಿಘ್ ಇ ವಕ್ತ್ (ಬಿಡುವಿನ ವೇಳೆ) ಕುರಿತು ಪ್ರಚಾರ, ಪ್ರಸಾರ ಮಾಡುತ್ತದೆ. ಜಗತ್ತಿನ ಅತ್ಯಂತ ಪ್ರಭಾವಿ ಆಧ್ಯಾತ್ಮಿಕ ಚಳವಳಿ ಎಂದೇ ಪರಿಗಣಿಸಲ್ಪಡುವ ಜಮಾತ್ ಈಗ ಪಾಕಿಸ್ತಾನ ಮತ್ತು ಬಾಂಗ್ಲಾದೇಶದ ಬಣಗಳ ಪ್ರಭಾವ ಪೀಡಿತವಾಗಿವೆ ಎಂದು ಹೇಳಲಾಗುತ್ತಿದೆ.
ಕಾರ್ಯವೇನು ಮತ್ತು ಹೇಗೆ?: ದಕ್ಷಿಣ ಏಷ್ಯಾದಲ್ಲಿ ಇದಕ್ಕೆ 15 ರಿಂದ 25 ಕೋಟಿ ಪ್ರಾಥಮಿಕ ಸದಸ್ಯರಿದ್ದಾರೆ. ಜಮಾತ್ ಸದಸ್ಯರು ಕೇವಲ ಮುಸ್ಲಿಮರ ನಡುವೆ ಕೆಲಸ ಮಾಡುತ್ತಿದ್ದು, ಅವರಿಗೆ ಪ್ರವಾದಿ ಮೊಹಮ್ಮದರ ಆದರ್ಶ ಜೀವನದ ದಾರಿಗಳನ್ನು ಹೇಳಿಕೊಡುವ ಕೆಲಸವನ್ನು ನಿರ್ವಹಿಸುತ್ತಿದ್ದಾರೆ. ಜಮಾತ್ ಪ್ರವಚನ ಸಭೆಯಲ್ಲಿ ಬೋಧಕರ ಸಣ್ಣ ಸಣ್ಣ ಹಲವು ಗುಂಪುಗಳನ್ನಾಗಿ ವಿಂಗಡಿಸಿ ಅವರಲ್ಲಿ ಒಬ್ಬ ಹಿರಿಯನನ್ನು ನಾಯಕನನ್ನಾಗಿ ಆಯ್ಕೆ ಮಾಡಲಾಗುತ್ತದೆ. ಈ ಗುಂಪುಗಳು ಮಸೀದಿಗಳ ಮೂಲಕ ನಿಶ್ಚಿತ ಪ್ರದೇಶಗಳಿಗೆ ತೆರಳಿ ಮುಸ್ಲಿಮರ ನಡುವೆ ಧರ್ಮ ಬೋಧನೆಯನ್ನು ಮಾಡುತ್ತವೆ.
COVID19 ಮತ್ತು ತಬ್ಲಿಘಿ ಜಮಾತ್: ಮಾರ್ಚ್ ಆರಂಭದಲ್ಲಿ ನಿಜಾಮುದ್ದೀನ್ ಪ್ರದೇಶದ ಬಂಗ್ಲಾವಾಲಿ ಮಸೀದಿಯಲ್ಲಿ ಈ ಬೋಧಕರ ಸಮ್ಮೇಳನ ನಡೆಯಿತು. ಇದೇ ಪ್ರದೇಶದಲ್ಲಿ ಜಮಾತ್ನ ಕೇಂದ್ರ ಕಚೇರಿ ಅಥವಾ ಮರ್ಕಜ್ ಕೂಡ ಇದೆ. ಮಾರ್ಚ್ನಲ್ಲಿ ನಡೆದ ಸಮ್ಮೇಳನದಲ್ಲಿ ಇಂಡೋನೇಷ್ಯಾ, ಮಲೇಷ್ಯಾ, ಥಾಯ್ಲೆಂಡ್, ನೇಪಾಳ, ಮ್ಯಾನ್ಮಾರ್, ಬಾಂಗ್ಲಾದೇಶ, ಶ್ರೀಲಂಕಾ, ಕಿರ್ಗಿಸ್ತಾನ ಸೇರಿ ವಿವಿಧ ದೇಶಗಳ 800ಕ್ಕೂ ಹೆಚ್ಚು ಬೋಧಕರು ಪಾಲ್ಗೊಂಡಿದ್ದಾರೆ ಎಂದು ನಂಬಲಾಗುತ್ತಿದೆ. ಸರ್ಕಾರದ ಮಾಹಿತಿ ಪ್ರಕಾರ, 70 ದೇಶಗಳಿಂದ 2000 ಕ್ಕೂ ಹೆಚ್ಚು ವಿದೇಶೀಯರು ಭಾರತಕ್ಕೆ ಜನವರಿ 1ರಿಂದ ಈಚೆಗೆ ಜಮಾತ್ನ ವಿವಿಧ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವ ಸಲುವಾಗಿ ಭಾರತಕ್ಕೆ ಆಗಮಿಸಿದ್ದಾರೆ. ಈ ಪೈಕಿ 1,000ಕ್ಕೂ ಹೆಚ್ಚು ಜನ ಲಾಕ್ಡೌನ್ ಕಾರಣಕ್ಕೆ ಜಮಾತ್ನಲ್ಲಿ ಸಿಲುಕಿಕೊಂಡಿದ್ದಾರೆ. ಹಲವರ ಬಳಿ ಇರುವ ಆರು ತಿಂಗಳ ಪ್ರವಾಸಿ ವೀಸಾದ ಅವಧಿಯೂ ಮುಗಿದಿದೆ.
ಈ ಸಮ್ಮೇಳನ ಮುಗಿಸಿ ತೆಲಂಗಾಣಕ್ಕೆ ತೆರಳಿದ್ದ ಇಂಡೋನೇಷ್ಯಾದ ಪ್ರಜೆ ಮಾರ್ಚ್ 18ರಂದು ಅಲ್ಲಿ ಮೃತಪಟ್ಟಾಗ, ಆತನಿಗೆ COVID19 ಸೋಂಕು ಇರುವುದು ಖಚಿತವಾಗಿದೆ. ಮಾರ್ಚ್ 21ರ ವೇಳೆಗೆ ಕೇಂದ್ರ ಗೃಹ ಸಚಿವಾಲಯ ಎಲ್ಲ ರಾಜ್ಯ ಸರ್ಕಾರಗಳಿಗೆ ಈ ಧರ್ಮ ಬೋಧಕರ ವಿವರ ನೀಡುವಂತೆ ಅಲರ್ಟ್ ಮಾಡಿದೆ. ಮಾರ್ಚ್ 22ರಂದು ಜನತಾ ಕರ್ಫ್ಯೂ ಘೋಷಣೆ ಆದಾಗ, ನಿಜಾಮುದ್ದೀನ್ ಮರ್ಕಜ್ ಅಲ್ಲಿ 2,500ಕ್ಕೂ ಹೆಚ್ಚು ಸದಸ್ಯರು ಇರುವುದಾಗಿ ಘೋಷಿಸಿಕೊಂಡಿತ್ತು. ಇದಾಗಿ ಮರುದಿನ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು 21 ದಿನಗಳ ಲಾಕ್ಡೌನ್ ಘೋಷಿಸಿದಾಗ 1,500ರಷ್ಟು ಜಮಾತ್ ಸದಸ್ಯರು ಅಲ್ಲಿ ಬಾಕಿಯಾಗಿದ್ದಾರೆ ಎಂಬ ಮಾಹಿತಿ ಹೊರಬಿದ್ದಿತ್ತು. ಏಪ್ರಿಲ್ 1ರ ತನಕ ತಬ್ಲಿಘಿ ಜಮಾತ್ನಲ್ಲಿ ಪಾಲ್ಗೊಂಡಿದ್ದವರ ಪೈಕಿ 10 ಜನ ಸಾವನ್ನಪ್ಪಿದ್ದು, ಈ ಪೈಕಿ ಫಿಲಿಪ್ಪಿನ್ಸ್ನ ಪ್ರಜೆ ಮರ್ಕಜ್ನಲ್ಲೇ ಮೃತಪಟ್ಟಿದ್ದಾನೆ. ಇನ್ನುಳಿದಂತೆ, 285 ಮಂದಿಗೆ ಕರೊನಾ ವೈರಸ್ ಸೋಂಕು ಇರುವುದು ಖಚಿತವಾಗಿದ್ದು, ಮರ್ಕಜ್ನಿಂದ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
VIDEO: ಭಯ ಬೇಡ! ನಿಮ್ಮ ವಿಜಯವಾಣಿ ಅತ್ಯಂತ ಸುರಕ್ಷಿತ- ಕೈಯಲ್ಲಿ ಹಿಡಿದುಕೊಂಡೇ ಓದಬಹುದು..