ಪ್ಲಾಸ್ಟಿಕ್ ಸರ್ಜರಿ ವೈದ್ಯಕೀಯ ಕ್ಷೇತ್ರದಲ್ಲಿ ಬಹಳ ಬೇಡಿಕೆಯ ಚಿಕಿತ್ಸೆಯಾಗಿದೆ ಎಂದು ಜೆಎಸ್ಎಸ್ ಮಹಾವಿದ್ಯಾಪೀಠದ ಕಾರ್ಯನಿರ್ವಾಹಕ ಕಾರ್ಯದರ್ಶಿ ಡಾ.ಸಿ.ಜಿ.ಬೆಟಸೂರಮಠ ತಿಳಿಸಿದರು.
ನಗರದ ಜೆಎಸ್ಎಸ್ ಆಸ್ಪತ್ರೆಯಲ್ಲಿ ಶನಿವಾರ ಆಯೋಜಿಸಿದ್ದ ವಿಶ್ವ ಪ್ಲಾಸ್ಟಿಕ್ ಸರ್ಜರಿ ದಿನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸುಟ್ಟಗಾಯಗಳಿಗೆ ಚಿಕಿತ್ಸೆ, ಸೌಂದರ್ಯವಧರ್ಕ ಚಿಕಿತ್ಸೆಗೆ, ದೇಹದಲ್ಲಿ ಅಥವಾ ಇನ್ನಿತರ ಭಾಗಗಳು ಅಪಘಾತದಿಂದ ವಿರೂಪಗೊಂಡಿದ್ದರೆ ಅದನ್ನು ಸರಿಪಡಿಸಲು ಪ್ಲಾಸ್ಟಿಕ್ ಸರ್ಜರಿ ಚಿಕಿತ್ಸೆಯು ಬಹಳ ಉಪಯುಕ್ತ ಮತ್ತು ಪರಿಣಾಮಕಾರಿ ಎಂದು ತಿಳಿಸಿದರು.
ವೈದ್ಯಕೀಯ ಅಧೀಕ್ಷಕಿ ಡಾ.ಸಿ.ಪಿ.ಮಧು ಮಾತನಾಡಿ, ಪ್ಲಾಸ್ಟಿಕ್ ಸರ್ಜರಿ ಚಿಕಿತ್ಸೆಯು ಕೂದಲು ಕಸಿ ಚಿಕಿತ್ಸೆ, ಸೀಳುತುಟಿ ಚಿಕಿತ್ಸೆ, ಸುಟ್ಟಗಾಯಗಳಿಂದಾಗಿರುವ ಗುರುತುಗಳಿಗೆ ಚಿಕಿತ್ಸೆ ನೀಡಲು ಬಹಳ ಸಹಕಾರಿಯಾಗಿದೆ. ಈ ಚಿಕಿತ್ಸೆಯು ನುರಿತ ವೈದ್ಯರುಗಳೊಂದಿಗೆ ಜೆಎಸ್ಎಸ್ ಆಸ್ಪತ್ರೆಯಲ್ಲಿ ಲಭ್ಯವಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ತಿಳಿಸಿದರು.
ಜೆಎಸ್ಎಸ್ ಮೆಡಿಕಲ್ ಕಾಲೇಜಿನ ಉಪ ಪ್ರಾಂಶುಪಾಲ ಡಾ.ಮಹಾಂತಪ್ಪ ಮಾತನಾಡಿ, ಪ್ಲಾಸ್ಟಿಕ್ ಸರ್ಜರಿ ಎಂದರೆ ಶಸ್ತ್ರಚಿಕಿತ್ಸೆಯಲ್ಲಿ ಪ್ಲಾಸ್ಟಿಕ್ ಬಳಸುತ್ತಾರೆ ಎಂದು ಜನರ ನಂಬಿಕೆಯಿದೆ. ಆದರೆ ಪ್ಲಾಸ್ಟಿಕ್ ಬೇರೆ, ಪ್ಲಾಸ್ಟಿಕ್ ಸರ್ಜರಿನೇ ಬೇರೆ. ಅಪಘಾತ ಅಥವಾ ಇನ್ನಿತರ ಗಾಯಗಳಿಂದ ಮಾನವನ ದೇಹದಲ್ಲಿ ವಿಕಾರವಾಗಿದ್ದರೆ, ಆ ಭಾಗಕ್ಕೆ ಒಂದು ಆಕಾರ ನೀಡುವುದೇ ಪ್ಲಾಸ್ಟಿಕ್ ಸರ್ಜರಿ ಎಂದು ತಿಳಿಸಿದರು. ಸೀಳುತುಟ್ಟಿ ಚಿಕಿತ್ಸೆ, ಸೊಟ್ಟ ಮೂಗನ್ನು ನೇರ ಮಾಡುವುದು ದೇಹದಲ್ಲಿರುವ ಕೊಬ್ಬಿನ ಅಂಶವನ್ನು ತೆಗೆಯುವುದು, ಬೊಕ್ಕತಲೆಗೆ ಕೂದಲನ್ನು ನಾಟಿ ಮಾಡುವುದು ಇನ್ನಿತರ ಚಿಕಿತ್ಸೆಗಳು ಎಂದು ಸಾರ್ವಜನಿಕರಿಗೆ ತಿಳಿಸಿದರು.
ಜೆಎಸ್ಎಸ್ ಮಹಾವಿದ್ಯಾಪೀಠದ ಹಣಕಾಸು ವಿಭಾಗದ ನಿರ್ದೇಶಕ ಪುಟ್ಟಸುಬ್ಬಪ್ಪ, ಪ್ಲಾಸ್ಟಿಕ್ ಸರ್ಜರಿ ವಿಭಾಗದ ಮುಖ್ಯಸ್ಥ ಡಾ.ಎಚ್.ಎಸ್.ರವಿ, ಸಹಾಯಕ ಪ್ರಾಧ್ಯಾಪಕ ಡಾ.ಎಲ್.ಚೇತನ್, ಡಾ.ಶ್ಯಾಮ್ಪ್ರಸಾದ್ ಶೆಟ್ಟಿ, ವಿಜಯ್ ಬೆನ್ನೂರು ಇದ್ದರು.