ರೋಣ: ರಸ್ತೆ ನಿರ್ಮಾಣ ಸೇರಿ ವಿವಿಧ ಕಾಮಗಾರಿಗಳಿಗೆ ಹಿರೇಹಾಳ ಗ್ರಾಮದ ಹೊಲದಲ್ಲಿರುವ ಗರಸು ತೆಗೆದ ಕಾರಣ ಎಕರೆಗಟ್ಟಲೆ ಭೂಮಿ ತಗ್ಗು ಬಿದ್ದು ಖಾಲಿ ಉಳಿದಿದೆ. ಅಲ್ಲಿ ಅರಣ್ಯ ಇಲಾಖೆಯಿಂದ ಗಿಡಗಳನ್ನು ನೆಡಬೇಕು ಎಂದು ತಾಪಂ ಉಪಾಧ್ಯಕ್ಷೆ ಇಂದ್ರಾ ತೇಲಿ ಹೇಳಿದರು.
ತಾಪಂದಲ್ಲಿ ಗುರುವಾರ ಏರ್ಪಡಿಸಿದ್ದ ಕೆಡಿಪಿ ಸಭೆಯಲ್ಲಿ ಅವರು ಮಾತನಾಡಿದರು.
ತಾಲೂಕು ಅರಣ್ಯಾಧಿಕಾರಿ ಪ್ರಕಾಶ ಪವಾಡಿಗೌಡ್ರ ಮಾತನಾಡಿ, ನರೇಗಾದಡಿ ಕುರಹಟ್ಟಿ, ಗುಜಮಾಗಡಿ, ಡ.ಸ. ಹಡಗಲಿ, ಹೊಳೆಮಣ್ಣೂರ, ಇಟಗಿ, ಹೊಸಳ್ಳಿ ಮೊದಲಾದ ಗ್ರಾಮಗಳ ರಸ್ತೆ ಬದಿ ವಿವಿಧ ಗಿಡ ನೆಡಲಾಗಿದೆ. ಉಪಾಧ್ಯಕ್ಷರ ಸೂಚನೆಯನ್ನು ಮುಂದಿನ ಕ್ರಿಯಾಯೋಜನೆಯಲ್ಲಿ ಹಾಕಿಕೊಳ್ಳಲಾಗುವುದು ಎಂದರು.
ಕೃಷಿ ಸಹಾಯಕ ನಿರ್ದೇಶಕ ಎಸ್.ವಿ. ಶಾಂತಗೇರಿ ಮಾತನಾಡಿ, ಇಲಾಖೆಯಲ್ಲಿ ಬಿತ್ತನೆ ಬೀಜ, ಗೊಬ್ಬರ, ಔಷಧ ದಾಸ್ತಾನಿದೆ. ಈ ವರ್ಷ ರೈತರಿಗೆ ಬೀಜೋಪಚಾರ ಕೊರತೆ ಕಾಡುವುದಿಲ್ಲ ಎಂದು ತಿಳಿಸಿದರು.
ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಬಸವರಾಜ ಅಂಗಡಿ ಮಾತನಾಡಿ, ಕರೊನಾ ಹಿನ್ನೆಲೆಯಲ್ಲಿ ಪ್ರಾಥಮಿಕ ಶಾಲೆಗಳು ನಡೆದಿಲ್ಲ. ಹಾಗಾಗಿ ಆಹಾರ ಭದ್ರತೆ ಕಾಯ್ದೆಯನ್ವಯ ಮಕ್ಕಳಿಗೆ ಆಹಾರ ಧಾನ್ಯಗಳನ್ನು ಅವರ ಮನೆಗೆ ಕಳಿಸಿಕೊಡುತ್ತಿದ್ದೇವೆ ಎಂದು ತಿಳಿಸಿದರು.
ಆರೋಗ್ಯ ಇಲಾಖೆಯ ಡಾ. ರಘು ಹೊಸೂರ ಮಾತನಾಡಿ, ತಾಲೂಕಿನಾದ್ಯಂತ ಕರೊನಾ ಹತೋಟಿಗೆ ಬಂದಿದೆ. ದಿನಕ್ಕೆ ಒಂದು ಅಥವಾ ಎರಡು ಪ್ರಕರಣ ಪತ್ತೆಯಾಗುತ್ತಿವೆ. ಶಾಲೆಗಳು ಪ್ರಾರಂಭವಾಗಿದ್ದು, ಶಿಕ್ಷಕರು ಹಾಗೂ ಮಕ್ಕಳ ಪರೀಕ್ಷೆ ನಡೆಸಲಾಗುತ್ತಿದೆ ಎಂದು ಹೇಳಿದರು.
ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಎಸ್.ಬಿ. ಸುರಕೋಡ ಮಾತನಾಡಿ, ಪಿಯುಸಿ ಹಾಗೂ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ವಸತಿ ಶಾಲೆಗಳು ಪ್ರಾರಂಭವಾಗಿವೆ. ಸರ್ಕಾರ ಆದೇಶ ನೀಡಿದರೆ ಇನ್ನುಳಿದ ಮಕ್ಕಳ ಪ್ರವೇಶಕ್ಕೆ ಎಲ್ಲ ರೀತಿಯ ತಯಾರಿ ಮಾಡಿಕೊಂಡಿದ್ದೇವೆ ಎಂದು ಹೇಳಿದರು.
ತಾಪಂ ಅಧ್ಯಕ್ಷೆ ಪ್ರೇಮವ್ವ ನಾಯಕ ಅಧ್ಯಕ್ಷತೆ ವಹಿಸಿದ್ದರು. ತಾಪಂ ಕಾರ್ಯ ನಿರ್ವಾಹಕ ಅಧಿಕಾರಿ ಸಂತೋಷ ಪಾಟೀಲ, ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.