ವಿಧಾನಸಭಾಧ್ಯಕ್ಷರ ಮುಂದೆ ಗಲಾಟೆ ಮಾಡುವ ಮೂಲಕ ಪೀಠದತ್ತ ಮಸೂದೆಗಳ ಪ್ರತಿಗಳನ್ನು ಚೂರು ಮಾಡಿ ಎಸೆದಿರುವ ಶಾಸಕರನ್ನು ಶಾಶ್ವತವಾಗಿ ಸದನದಿಂದ ಅಮಾನತು ಮಾಡುವಂತೆ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಒತ್ತಾಯಿಸಿದರು.
ಐಎಎಸ್ ಅಧಿಕಾರಿಗಳನ್ನು ಶಿಷ್ಟಾಚಾರ ಪಾಲನೆಗೆ ಕಳುಹಿಸಿದ್ದರಲ್ಲಿ ಯಾವುದೇ ತಪ್ಪಿಲ್ಲ. ಗೃಹಲಕ್ಷ್ಮೀ ಯೋಜನೆಗೆ ಪ್ರಚಾರ ಸಿಗಬಾರದೆಂದು ಈ ವಿಚಾರದಲ್ಲಿ ಗಲಾಟೆ ಮಾಡಿದ್ದಾರೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹತಾಶರಾಗಿ ಹೋರಾಡುತ್ತಿದ್ದಾರೆ. ಜೆಡಿಎಸ್ ಕೆಲ ದಿನಗಳಲ್ಲಿ ಮೂರು ಹೋಳಾಗುತ್ತದೆ. ಜೆಡಿಎಸ್ನ 9 ಶಾಸಕರು ಕಾಂಗ್ರೆಸ್ ಬಾಗಿಲು ತಟ್ಟುತ್ತಿದ್ದಾರೆ. ಯಾವುದೇ ಅಧಿಕಾರದ ಆಸೆ ಇಲ್ಲದೆ ಕಾಂಗ್ರೆಸ್ಗೆ ಬರಲು ತಯಾರಾಗಿದ್ದಾರೆ. ಜೆಡಿಎಸ್ ಮುಗಿದ ಅಧ್ಯಾಯ. ಯುಪಿಎ, ಎನ್ಡಿಎ ಒಕ್ಕೂಟ ಇಬ್ಬರೂ ಜೆಡಿಎಸ್ಅನ್ನು ಕರೆಯುತ್ತಿಲ್ಲ ಎಂದು ಲೇವಡಿ ಮಾಡಿದರು.
ಶಂಕಿತ ಭಯೋತ್ಪಾದಕರನ್ನು ಬಂಧಿಸಿದ್ದಕ್ಕೆ ಬೆಂಗಳೂರು ನಗರ ಪೊಲೀಸ್ ಆಯಕ್ತರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಬಂಧಿತರು ರೌಡಿಶೀಟರ್ಗಳಾಗಿದ್ದವರು. ಬಿಜೆಪಿ ಅವಧಿಯಲ್ಲಿ ಹೆಚ್ಚು ರೌಡಿಶೀಟರ್ಗಳ ಹೆಸರು ಕೈಬಿಡಲಾಗಿತ್ತು. ಯಾವ ಕಾರಣಕ್ಕೆ ಹೆಸರು ಕೈ ಬಿಡಲಾಗಿತ್ತು ಎಂದು ಪ್ರಶ್ನಿಸಿದರು.