More

    ಅಭಿವೃದ್ಧಿ ಕೆಲಸ ನೋಡಿ ಜನ ಬಿಜೆಪಿಗೆ ಮತ ಹಾಕ್ತಾರೆ: ಪ್ರತಾಪಸಿಂಹ

    ಮೈಸೂರು: ಮಹಾರಾಜರೆ ನೀವು ಕೈ ಮುಗಿದುಕೊಂಡು ಹೋಗಿ ಸಾಕು. ನಿಮ್ಮ ಎಂಪಿ ಹತ್ತು ವರ್ಷದಲ್ಲಿ ಬಹಳ ಅಭಿವೃದ್ಧಿ ಕೆಲಸ ಮಾಡಿದ್ದಾರೆ. ಅದಕ್ಕೆ ಮತ ಹಾಕ್ತೀವಿ ಅಂತ ಜನ ಹೇಳುತ್ತಾರೆ. ಹಿಂದಿನ ಯಾವ ಸಂಸದರೂ ಮಾಡದಷ್ಟು ಅಭಿವೃದ್ಧಿ ನಾನು ಮಾಡಿದ್ದೇನೆ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದರು.
    ನಗರದ ವಿವಿಧೆಡೆ ಬಿಜೆಪಿ ಘೋಷಿತ ಅಭ್ಯರ್ಥಿ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಪರ ಹಲವು ಕಡೆ ಮಂಗಳವಾರ ಪ್ರಚಾರ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಬಿಜೆಪಿ ಅಭ್ಯರ್ಥಿ ಯದುವೀರ್ ಗೆಲುವು ನಿರಾಯಾಸವಾಗಿ ಆಗುತ್ತೆ. ಹತ್ತು ವರ್ಷಗಳಲ್ಲಿ ಕ್ಷೇತ್ರದ ಮೂಲೆ ಸುತ್ತಿ ಅಭಿವೃದ್ಧಿ ಕೆಲಸ ಮಾಡಿದ್ದೇನೆ. ಜನರಿಗೆ ಯಾರು ಬೇಕು, ಯಾರು ಬೇಡ ಎನ್ನುವುದು ನನಗೆ ಗೊತ್ತಿದೆ. ಅದಕ್ಕಾಗಿ ನಾನು ಈ ಮಾತು ಹೇಳುತ್ತಿದ್ದೇನೆ ಎಂದರು.
    1952 ರಿಂದ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಹಾದಿಯಾಗಿ ಎಂಪಿಗಳ ಕೆಲಸ ನೋಡಿ. ಕಳೆದ ಹತ್ತು ವರ್ಷಗಳಲ್ಲಿ ನರೇಂದ್ರ ಮೋದಿ ಕೊಟ್ಟಿರುವ ಕೊಡುಗೆ, ಪ್ರತಾಪ್ ಸಿಂಹ ಮಾಡಿರುವ ಕೆಲಸ ಗೊತ್ತಾಗುತ್ತೆ. ನೀವು ಕೇಳಿರಲಿಲ್ಲ, ಆದರೂ ನಾನು ಟ್ವಿಟರ್‌ನಲ್ಲಿ ಹಾಕಿ ರೈಲು, ಪಾಸ್‌ಪೋರ್ಟ್ ಸೇವಾಕೇಂದ್ರ, ರಿಂಗ್ ರೋಡ್ ರಾಷ್ಟ್ರೀಯ ಹೆದ್ದಾರಿಗೆ ಸೇರಿಸಿದ್ದು, ಕಸದ ಸಮಸ್ಯೆ ನಿಭಾಯಿಸುವ ಕೆಲಸ ಮಾಡಿದೆ ಎಂದು ಹೇಳಿದರು.
    ಎಲ್ಲರೂ ಕಸದ ವಿಚಾರದಲ್ಲಿ ರಾಜಕೀಯ ಮಾಡುತ್ತಿದ್ದರು. ನಾನು ಅದನ್ನು ಬಗೆಹರಿಸುವ ಕೆಲಸ ಮಾಡಿದೆ. ಮಹಾರಾಜರು ಏನೇನು ಕೆಲಸ ಮಾಡಿದ್ದಾರೋ ಅದೇ ರೀತಿ ಶಾಶ್ವತವಾಗಿ ಉಳಿಯುವ ಕೆಲಸ ನಾನು ಮಾಡಿದ್ದೇನೆ. ನನ್ನನ್ನು ಜಗಳಗಂಟ ಎನ್ನುತ್ತಾರೆ. ಮಹಿಷ ದಸರಾ ಆಚರಣೆ ವಿಚಾರದಲ್ಲಿ ಗಲಾಟೆ ಮಾಡಿದ್ದೇನೆ. ಚಾಮುಂಡೇಶ್ವರಿ ಹತ್ತಿರ ವರ ಕೊಡು ಎಂದು ಎಲ್ಲರೂ ಬೇಡಿಕೊಳ್ಳುತ್ತಾರೆ. ಆದರೆ ಚಾಮುಂಡಿಗೆ ಅವಮಾನ ಆಗುವಾಗ ಯಾರು ಬರಲಿಲ್ಲ. ಗ್ಯಾಸ್ ಪೈಪ್‌ಲೈನ್ ವಿಚಾರದಲ್ಲಿ ಜನರಿಗೆ ಒಳ್ಳೆಯದಾಗಲಿದೆ ಎಂದು ನಮ್ಮ್ಮ ಕ್ಷೇತ್ರದ ಶಾಸಕರ ವಿರುದ್ಧವೇ ಗಲಾಟೆ ಮಾಡಿದೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts