ಗೋಕಾಕ: ಜನೋಪಯೋಗಿ, ಯೋಜನೆಗಳಿಗೆ, ಆದ್ಯತೆ, ಸಚಿವ, ರಮೇಶ, ಜಾರಕಿಹೊಳಿ, ಹೇಳಿಕೆ, ವಿವಿಧ, ರಸ್ತೆ, ಕಾಮಗಾರಿಗಳಿಗೆ, ಭೂಮಿಪೂಜೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಮಾರ್ಗದರ್ಶನದಲ್ಲಿ ಹಲವು ಜನೋಪಯೋಗಿ ಯೋಜನೆಗಳ ಅನುಷ್ಠಾನದೊಂದಿಗೆ ಕ್ಷೇತ್ರದ ಅಭಿವೃದ್ಧಿ ಜತೆಗೆ ಬೆಳಗಾವಿಯನ್ನು ಮಾದರಿ ಜಿಲ್ಲೆಯನ್ನಾಗಿ ಮಾಡಲು ಶ್ರಮಿಸುತ್ತಿರುವುದಾಗಿ ಜಿಲ್ಲಾ ಉಸ್ತುವಾರಿ ಹಾಗೂ ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಹೇಳಿದರು.
ಗೋಕಾಕ ಮತಕ್ಷೇತ್ರದ ಉಪ್ಪಾರಟ್ಟಿ ಗ್ರಾಮದಲ್ಲಿ ವಿವಿಧ ರಸ್ತೆ ಕಾಮಗಾರಿಗಳಿಗೆ ಶನಿವಾರ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು. ನೀರಾವರಿ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡಿ ರಾಜ್ಯದಲ್ಲಿಯ ನೀರಾವರಿ ಯೋಜನೆಗಳಿಗೆ ಗುಣಮಟ್ಟದೊಂದಿಗೆ ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಲು ಹೆಚ್ಚಿನ ಗಮನ ಹರಿಸಲಾಗುತ್ತಿದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಂಜನಿಯರಿಂಗ್ ಇಲಾಖೆ, ಕರ್ನಾಟಕ ಗ್ರಾಮೀಣ ರಸ್ತೆ ಅಭಿವೃದ್ಧಿ ಸಂಸ್ಥೆಯ ವತಿಯಿಂದ ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯಡಿಯಲ್ಲಿ 10 ಕೋಟಿ ರೂ ವೆಚ್ಚದಲ್ಲಿ ಬೆಟಗೇರಿ- ಮೆಳವಂಕಿ, ಮೆಳವಂಕಿ-ಉಪ್ಪಾರಟ್ಟಿ ಗ್ರಾಮಗಳ ನಡುವಿನ 11.60 ಕಿ.ಮೀ. ರಸ್ತೆ ಸುಧಾರಣೆ ಕಾಮಗಾರಿ, ಲೋಕೋಪಯೋಗಿ ಇಲಾಖೆಯಿಂದ 3.30 ಕೋಟಿ ರೂ. ವೆಚ್ಚದಲ್ಲಿ ಉಪ್ಪಾರಟ್ಟಿ- ಮಮದಾಪುರ 5 ಕಿ.ಮೀ. ರಸ್ತೆ ನಿರ್ಮಾಣ ಕಾಮಗಾರಿ, ಲೋಕೋಪಯೋಗಿ ಇಲಾಖೆಯಿಂದ 2.20 ಕೋಟಿ ರೂ.ಗಳ ವೆಚ್ಚದಲ್ಲಿ ಪಾರನಟ್ಟಿ-ಬೆಣಚಿನಮರಡಿ ಗ್ರಾಮದ ನಡುವಿನ 3 ಕಿಮೀ ರಸ್ತೆ ಕಾಮಗಾರಿಗೆ ಸಚಿವ ಜಾರಕಿಹೊಳಿ ಚಾಲನೆ ನೀಡಿದರು.
ಜಿಪಂ ಸದಸ್ಯರಾದ ಟಿ.ಆರ್. ಕಾಗಲ, ಮಡ್ಡೆಪ್ಪ ತೋಳಿನವರ, ಭೀಮಗೌಡ ಪೋಲಿಸಗೌಡರ, ಹನುಮಂತ ದುರ್ಗಣ್ಣವರ, ವಾಮದೇವ ಜಕಬಾಳ, ಯಲ್ಲಪ್ಪ ಬೂದಿಗೊಪ್ಪ, ರಾಮಣ್ಣ ಕಡಕೋಳ, ರಂಗಪ್ಪ ನಂದಿ, ಹನಮಂತ ಕಿಚಡಿ, ಲಕಪ್ಪ ಕಡಕೋಳ, ಗುರುಲಿಂಗ ಭಾಗೋಜಿ, ನಾರಾಯಣ ಮೂಡಲಗಿ, ತಿಪ್ಪಣ್ಣ ಕಡಕೋಳ, ಸಂತೋಷ ಚಿಗದನ್ನವರ, ಶ್ರೀಕಾಂತ ಹೊನಕುಪ್ಪಿ, ರಮೇಶ ತಿಗಡಿ, ಶಿವಪುತ್ರ ಜಕಬಾಳ, ಮಹಾದೇವ ಬಂಡಿ, ಕರೆಪ್ಪ ಕೊಳವಿ, ಭೀಮಶಿ ಆಡಿನ ಇತರರು ಇದ್ದರು.