ಗದಗ: ಜಿಲ್ಲೆಯಲ್ಲಿ ಮೇ 27ರ ಬೆಳಗ್ಗೆ 10 ಗಂಟೆಯಿಂದ ಜೂ.1ರವರೆಗೆ ಐದು ದಿನಗಳ ಕಾಲ ವಿಧಿಸಿರುವ ಕಠಿಣ ಲಾಕ್ಡೌನ್ ಘೊಷಣೆ ಹಿನ್ನೆಲೆಯಲ್ಲಿ ಬುಧವಾರ ಜನರು ದಿನಸಿ ವಸ್ತುಗಳ ಖರೀದಿಗೆ ಜನರು ಮುಗಿಬಿದ್ದರು. ಬುಧವಾರ ಮತ್ತು ಗುರುವಾರ ಬೆಳಗ್ಗೆ 6ರಿಂದ 10 ಗಂಟೆವರೆಗೆ ಮಾತ್ರ ದಿನಸಿ ವಸ್ತುಗಳ ಖರೀದಿಗೆ ಅವಕಾಶ ಇರುವುದರಿಂದ ಜನರು ಕಿರಾಣಿ ಅಂಗಡಿಗಳು, ದಿನಸಿ ಮಾರ್ಟ್ಗಳು, ಬೇಕರಿ ಇತ್ಯಾದಿ ಅಂಗಡಿಗಳ ಮುಂದೆ ಜನಜಾತ್ರೆಯೇ ಸೇರಿತ್ತು. ಸರದಿಯಲ್ಲಿ ನಿಂತು ಜನರು ದಿನಸಿ ವಸ್ತುಗಳನ್ನು ಖರೀದಿಸಿದರು. ಆದರೆ, ಏಕಕಾಲಕ್ಕೆ ಜನರು ಅಂಗಡಿಗಳಿಗೆ ಅಗಮಿಸಿದ್ದರಿಂದ ಅಂಗಡಿಗಳ ಮಾಲೀಕರು ಗ್ರಾಹಕರನ್ನು ನಿಭಾಯಿಸುವುದೇ ಕಷ್ಟವಾಗಿತ್ತು.
ಐದು ದಿನಗಳ ಸಂಪೂರ್ಣ ಲಾಕ್ಡೌನ್ ಹಿನ್ನೆಲೆಯಲ್ಲಿ ಗದಗ-ಬೆಟಗೇರಿ ಅವಳಿನಗರ ಸೇರಿ ಜಿಲ್ಲೆಯಲ್ಲಿ ಮದ್ಯ ಖರೀದಿ ಭರಾಟೆ ಜೋರಾಗಿತ್ತು. ಸಂಪೂರ್ಣ ಲಾಕ್ಡೌನ್ ಘೊಷಣೆ ವಿಷಯ ಗೊತ್ತಾದ ಕೂಡಲೇ ಮದ್ಯಪ್ರಿಯರು ಬೆಳಗಾಗುವುದನ್ನೇ ಕಾಯುತ್ತಿದ್ದರು. ಬೆಳಗ್ಗೆ 6 ಗಂಟೆಗೆ ಮದ್ಯಕ್ಕಾಗಿ ಬಾರ್ ಮತ್ತು ವೈನ್ಶಾಪ್ಗಳ ಮುಂದೆ ಜನರು ಸರದಿಯಲ್ಲಿ ನಿಂತಿದ್ದು ವಿಶೇಷವಾಗಿತ್ತು. ಕೆಲವರು ಮರ್ಯಾದೆಗೆ ಅಂಜಿ ಆತ್ಮೀಯರು, ಮಕ್ಕಳು, ಸ್ನೇಹಿತರ ಕೈಗೆ ಹಣ ಕೊಟ್ಟು ಮದ್ಯ ತರಿಸಿಕೊಂಡು ಸಂಭ್ರಮಿಸಿದರು.
ಧಾರವಾಡ, ಹಾವೇರಿ ಜಿಲ್ಲೆಗಳಲ್ಲಿ ಈಗಾಗಲೇ ಸಂಪೂರ್ಣ ಲಾಕ್ಡೌನ್ ಜಾರಿಯಲ್ಲಿ ಇರುವುದರಿಂದ ಅಲ್ಲಿಂದಲೂ ಜನರು ಆಗಮಿಸಿ ಮದ್ಯ ಖರೀದಿಸಿದರು.
ಪರಸ್ಪರ ಅಂತರ ಮರೆತು ವ್ಯಾಪಾರ
ಗದಗ ನಗರದ ಎಪಿಎಂಸಿ ಮಾರುಕಟ್ಟೆ ಬುಧವಾರ ಜನಜಾತ್ರೆಯಂತಾಗಿತ್ತು. ಗುರುವಾರದಿಂದ ಐದು ದಿನ ಕಠಿಣ ಲಾಕ್ಡೌನ್ ಇರುವುದರಿಂದ ಜನರು ಕರೊನಾ ಲೆಕ್ಕಿಸದೆ ತರಕಾರಿ ಖರೀದಿ ಮಾಡುತ್ತಿದ್ದುದು ಕಂಡುಬಂದಿತು. ತರಕಾರಿ ವ್ಯಾಪಾರಸ್ಥರು, ಗ್ರಾಹಕರು, ದಲಾಲಿಗಳು ಪರಸ್ಪರ ಅಂತರ ಮರೆತು ವ್ಯಾಪಾರ ನಡೆಸಿದರು.