ಕುಂದಾಪುರ: 1975ರ ತುರ್ತು ಪರಿಸ್ಥಿತಿ ಹೋರಾಟಗಾರರಿಗೆ ಛತ್ತೀಸ್ಘಡ ಮತ್ತು ಮಧ್ಯಪ್ರದೇಶ ಸರ್ಕಾರ 25 ಸಾವಿರ, ರಾಜಸ್ಥಾನ 13.2 ಸಾವಿರ, ಗುಜರಾತ್ 12 ಸಾವಿರ ಹಾಗೂ ಹರಿಯಾಣ 10 ಸಾವಿರ ರೂ. ನೀಡುತ್ತಿದ್ದು, ರಾಜ್ಯದಲ್ಲೂ ಈ ಪದ್ಧತಿ ಜಾರಿಗೆ ತರಬೇಕು ಎಂದು ಅಖಿಲ ಭಾರತೀಯ ಸಂಘಟನೆ ಲೋಕತಂತ್ರ ಸೇನಾನಿ ಸಂಘ ಒತ್ತಾಯಿಸಿದೆ.
ಸಂಸದ ನಳಿನ್ ಕುಮಾರ್ ಕಟೀಲು ಹಾಗೂ ಮಂಗಳೂರು ಶಾಸಕ ವೇದವ್ಯಾಸ ಕಾಮತ್ ಮೂಲಕ ಹೋರಾಟಗಾರರಿಗೆ ಪಿಂಚಣಿ ನೀಡುವ ವಾಗ್ದಾನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೀಡಿದ್ದು, ಕರೊನಾ ಹಿನ್ನೆಲೆಯಲ್ಲಿ ಭರವಸೆ ಅನುಷ್ಠಾನಗೊಂಡಿಲ್ಲ. ಶೀಘ್ರ ಪಿಂಚಣಿ ವ್ಯವಸ್ಥೆ ಜಾರಿಯಾದರೆ ಹೋರಾಟಗಾರರ ಪರಿಶ್ರಮಕ್ಕೆ ಸಾರ್ಥಕತೆ ಸಿಕ್ಕಂತೆ ಆಗುತ್ತದೆ ಎನ್ನುವುದು ಸಂಘದ ಆಶಯ.
208 ಹೋರಾಟಗಾರರು: ತುರ್ತು ಪರಿಸ್ಥಿತಿ ವಿರುದ್ಧ ದ.ಕ. ಜಿಲ್ಲೆಯಲ್ಲಿ 181 ಮಂದಿ ಹೋರಾಟ ಮಾಡಿದ್ದು, ಅದರಲ್ಲಿ 8 ಜನ ಮೃತಪಟ್ಟಿದ್ದಾರೆ. ಉಡುಪಿಯಲ್ಲಿ 27 ಜನ ಹೋರಾಟ ಮಾಡಿದವರ ಹೆಸರು ಸಿಕ್ಕಿದ್ದು, ಮತ್ತೆಷ್ಟು ಜನರಿದ್ದಾರೆ ಎಂದು ಪತ್ತೆ ಮಾಡುವ ಕೆಲಸ ಸೇನಾನಿ ಸಂಘ ಮಾಡುತ್ತಿದೆ. ಇವರೆಲ್ಲ್ಲ ತುರ್ತು ಪರಿಸ್ಥಿತಿ ವಿರುದ್ಧ ಹೋರಾಡಿ, ಮೆಂಟೆನೆನ್ಸ್ ಆಫ್ ಇಂಟರ್ನಲ್ ಸೆಕ್ಯುರಿಟಿ ಆ್ಯಕ್ಟ್ ಮತ್ತು ಡಿಫೆನ್ಸ್ ಇಡಿಯಾ ರೂಲ್ ಪ್ರಕಾರ ಶಿಕ್ಷೆ ಅನುಭವಿಸಿದ್ದಾರೆ.
ಹೋರಾಟದಲ್ಲಿ ಪಾಲ್ಗೊಂಡವರ ಭಾವಚಿತ್ರ, ಆಧಾರ್ ಕಾರ್ಡ್, ಜೈಲು ಶಿಕ್ಷೆ ಅನುಭವಿಸುತ್ತಿದ್ದಾಗ ಅವರ ಜತೆಗಿದ್ದವರ ಸಾಕ್ಷಿ ಸಮೇತ ಸರ್ಕಾರಕ್ಕೆ ಸಲ್ಲಿಸಬೇಕಾದ ದಾಖಲೆಗಳನ್ನು ಸೇನಾನಿ ಸಂಘ ಸಂಗ್ರಹಿಸಿದೆ. ಸರ್ಕಾರ ಆದಷ್ಟು ಬೇಗ ಸ್ಪಂದಿಸಿದರೆ ವೃದ್ಧಾಪ್ಯದಲ್ಲಿರುವ ಹೋರಾಟಗಾರರಿಗೆ ಆಧಾರ ಆಗಲಿದೆ.
-ಚಂದ್ರಶೇಖರ ಗಟ್ಟಿಗಾರ್, ಜಿಲ್ಲಾ ಕಾರ್ಯದರ್ಶಿ, ಲೋಕತಂತ್ರ ಸೇನಾನಿ ಸಂಘತುರ್ತು ಪರಿಸ್ಥಿತಿಯ ವಿರುದ್ಧ ಹೋರಾಟ ಎನ್ನುವುದು ದೇಶದ ಎರಡನೇ ಸ್ವಾತಂತ್ರೃ ಸಂಗ್ರಾಮ ಎಂದು ಪರಿಗಣಿಸಿ ಪಿಂಚಣಿ ನೀಡಬೇಕು. ಯಾರೂ ಕೂಡ ಪಿಂಚಣಿಗಾಗಿ ಹೋರಾಟ ಮಾಡದೆ ದೇಶಕ್ಕಾಗಿ ಮಾಡಿದ್ದು, ಅವರ ವೃದ್ಧಾಪ್ಯದಲ್ಲಿ ಪಿಂಚಣಿ ಸಿಕ್ಕರೆ ಆಧಾರ ಆಗುತ್ತದೆ.
-ನಾರಾಯಣ ಗಟ್ಟಿ, ರಾಜ್ಯ ಉಪಾಧ್ಯಕ್ಷ, ಲೋಕತಂತ್ರ ಸೇನಾನಿ ಸಂಘ