ಶಿವಮೊಗ್ಗ: ರಾಜಕೀಯದಲ್ಲಿ ಬದ್ಧತೆ ಮತ್ತು ಆದರ್ಶ ಅತಿಮುಖ್ಯ. ಪ್ರಧಾನಿ ನರೇಂದ್ರ ಮೋದಿ ಅವರಿಗಿದ್ದ ಬದ್ಧತೆ ಕಾಶ್ಮೀರದಲ್ಲಿ 370ನೇ ವಿಧಿ ರದ್ದು ಮಾಡಲು ಹಾಗೂ ಅಯೋಧ್ಯೆಯಲ್ಲಿ ಗುಲಾಮಗಿರಿ ಸಂಕೇತವಾಗಿದ್ದ ಕಟ್ಟಡ ಕೆಡವಿದ ಜಾಗದಲ್ಲಿ ರಾಮಮಂದಿರ ಶಿಲಾನ್ಯಾಸ ಮಾಡಲು ಸಾಧ್ಯವಾಗಿದೆ ಎಂದು ವಿಧಾನ ಪರಿಷತ್ ಮಾಜಿ ಸಭಾಪತಿ ಡಿ.ಎಚ್. ಶಂಕರಮೂರ್ತಿ ಹೇಳಿದರು.
ನಗರದಲ್ಲಿ ಶನಿವಾರ ನಗರ ಬಿಜೆಪಿ ಪ್ರಶಿಕ್ಷಣ ಪ್ರಕೋಷ್ಠದಿಂದ ಎರಡು ದಿನಗಳ ಮಂಡಲ ಪ್ರಶಿಕ್ಷಣ ವರ್ಗ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಬಿಜೆಪಿ ದೇಶದಲ್ಲಿಯೇ ವಿಭಿನ್ನವಾಗಿ ಕಾರ್ಯಕರ್ತರನ್ನು ಬೆಳೆಸುವ ಹಾಗೂ ಸಂಘಟಿಸುವ ಪಕ್ಷ. ಕಾರ್ಯಕರ್ತರು ಪಕ್ಷದ ಚಟುವಟಿಕೆಗಳಲ್ಲಿ ಭಾಗಿಯಾಗಬೇಕು. ಈ ಮೂಲಕ ಪಕ್ಷ ಬೆಳೆಸುವ ಜತೆಗೆ ತಾವೂ ಬೆಳೆಯಬೇಕು ಎಂದರು.
ರಾಜಕೀಯಕ್ಕೆ ಅಧಿಕಾರದ ಆಸೆಯಿಂದಲೇ ಬರುತ್ತಾರೆಂಬುದು ಸಾಮಾನ್ಯ ಆರೋಪ. ಆದರೆ ಇದು ಬಿಜೆಪಿ ಪಾಲಿಗೆ ಸುಳ್ಳಾಗಿದ್ದು ರಾಜಕೀಯ ಅಧಿಕಾರ ಇಲ್ಲದಿದ್ದರೂ ಹಾಗೂ ಗ್ರಾಪಂನಿಂದ ಸಂಸತ್ವರೆಗೆ ಒಬ್ಬ ಸದಸ್ಯ ಕೂಡ ಇಲ್ಲದಿದ್ದಾಗಲೂ ಪಕ್ಷವನ್ನು ಸಂಘಟಿಸಲಾಗಿದೆ. ಇದು ಪ್ರಶಿಕ್ಷಣ ವರ್ಗದಿಂದ ಮಾತ್ರ ಸಾಧ್ಯ ಎಂದರು.
ಪ್ರತಿಯೊಂದು ರಾಜಕೀಯ ಪಕ್ಷಗಳು ಅಧಿಕಾರ ಹಿಡಿಯಲು ಯತ್ನಿಸುವುದು ಸಾಮಾನ್ಯ. ಅದಕ್ಕೆ ಚುನಾವಣೆ ಹಾದಿಯಾಗಿದ್ದು ಅದನ್ನು ಗೆಲ್ಲಲು ತಂತ್ರ ಮಾಡಲೇಬೇಕಿದೆ. ಆ ತಂತ್ರವನ್ನು ಪ್ರಜ್ಞಾವಂತ ಕಾರ್ಯಕರ್ತರ ಮೂಲಕ ಬಿಜೆಪಿ ಮಾಡುತ್ತಿದೆ. ಕಾರ್ಯಕರ್ತರಿಂದ ಪಕ್ಷ ಗಟ್ಟಿಯಾದರೆ ಅದಕ್ಕೆ ಎಂದಿಗೂ ದುರ್ಬಲವಾಗುವುದಿಲ್ಲ ಎಂಬ ಅಚಲ ನಂಬಿಕೆ ಇಟ್ಟುಕೊಳ್ಳಲಾಗಿದೆ ಎಂದರು.
ನಗರಾಧ್ಯಕ್ಷ ಜಗದೀಶ್ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಅಧ್ಯಕ್ಷ ಎನ್.ಜೆ.ನಾಗರಾಜ್, ಸೂಡಾ ಅಧ್ಯಕ್ಷ ಎಸ್.ಎಸ್.ಜ್ಯೋತಿಪ್ರಕಾಶ್, ಮೇಯರ್ ಸುವರ್ಣ ಶಂಕರ್, ಪಾಲಿಕೆ ಸದಸ್ಯರಾದ ಎಸ್.ಎನ್.ಚನ್ನಬಸಪ್ಪ, ಎಸ್.ಜ್ಞಾನೇಶ್ವರ್, ಸುನಿತಾ ಅಣ್ಣಪ್ಪ, ಮೋಹನ್ ರೆಡ್ಡಿ, ಬಳ್ಳೆಕೆರೆ ಸಂತೋಷ್, ಎಸ್.ರಮೇಶ್, ಮೋಹನ್ ಇದ್ದರು.