ಉಡುಪಿ: ನವದೆಹಲಿಯಲ್ಲಿ ಸೋಮವಾರ ಪ್ರಧಾನಿ ನರೇಂದ್ರ ಮೋದಿ ಜತೆಗೆ ನಡೆದ ಪರೀಕ್ಷಾ ಪೇ ಚರ್ಚಾದಲ್ಲಿ ಕುಂದಾಪುರ ವಿ.ಕೆ.ಆರ್. ಆಚಾರ್ಯ ಸ್ಮಾರಕ ಪ್ರೌಢಶಾಲೆಯ 9ನೇ ತರಗತಿ ವಿದ್ಯಾರ್ಥಿನಿ ಗಾರ್ಗಿದೇವಿ ಪಾಲ್ಗೊಂಡಿದ್ದಾರೆ.
ಈ ಬಗ್ಗೆ ವಿಜಯವಾಣಿಯೊಂದಿಗೆ ಮಾತನಾಡಿದ ಅವರು, ನಾನು ಪ್ರತ್ಯೇಕವಾಗಿ ಪ್ರಶ್ನೆ ಕೇಳಿಲ್ಲ. ನಮ್ಮ ಕಲೋತ್ಸವ ತಂಡದಿಂದ ವ್ಯಾಯಾಮ ಮತ್ತು ವಿದ್ಯಾಭ್ಯಾಸವನ್ನು ಹೇಗೆ ಒಟ್ಟಿಗೆ ನಿರ್ವಹಣೆ ಮಾಡೋದು ಎಂಬುದಾಗಿ ಪ್ರಶ್ನಿಸಲಾಗಿತ್ತು. ಇದಕ್ಕೆ ಉತ್ತರಿಸಿದ ಪ್ರಧಾನಿಯವರು, ಅಧ್ಯಯನದಲ್ಲಿ ಏಕಾಗ್ರತೆ ಬರಲು ದೈಹಿಕ ವ್ಯಾಯಾಮ ಅತೀ ಮುಖ್ಯ. ಯೋಗ ಇದಕ್ಕೆ ಸಹಕಾರಿ ಎಂದು ಉತ್ತರಿಸಿದ್ದಾರೆ. ಬಹಳ ಒಳ್ಳೆಯ ಅನುಭವ. ಕಾರ್ಯಕ್ರಮ ಮುಗಿದ ಬಳಿಕ ಪ್ರಧಾನಿಯವರನ್ನು ಭೇಟಿಯಾಗುವ ಅವಕಾಶ ಲಭಿಸಿದೆ. ಅವರು ಹಸ್ತಲಾವ ನೀಡಿದರು ಎಂದು ತಮ್ಮ ಅನುಭವ ಹಂಚಿಕೊಂಡರು.
ಜಿಲ್ಲೆಯಿಂದ ಏಕೈಕ ವಿದ್ಯಾರ್ಥಿನಿ ಆಯ್ಕೆ
ಕೇಂದ್ರ ಶಿಕ್ಷಣ ಇಲಾಖೆ ನಡೆಸಿದ ರಾಷ್ಟ್ರಮಟ್ಟದ ಆನ್ ಲೈನ್ ಸ್ಪರ್ಧೆ ಕಲೋತ್ಸವದಲ್ಲಿ ಭರತನಾಟ್ಯ ವಿಭಾಗದಲ್ಲಿ ರಾಜ್ಯ ಮಟ್ಟದಲ್ಲಿ ಪ್ರಥಮ ಸ್ಥಾನ ಗಳಿಸಿದ್ದರು. ನಂತರ ದೆಹಲಿಯಲ್ಲಿ ಆ್ ಲೈನ್ ಸ್ಪರ್ಧೆ ನಡೆದಿದ್ದು, ಇಲ್ಲಿ ವಿಜೇತರಾದವರಿಗೆ ಗಣರಾಜ್ಯೋತ್ಸವ ಪರೇಡ್ ಹಾಗೂ ಪರೀಾ ಪೇ ಚರ್ಚಾ ಸಂವಾದದಲ್ಲಿ ಭಾಗಿಯಾಗಲು ಅವಕಾಶ ದೊರೆತಿದೆ. ಗಾರ್ಗಿ ದೇವಲ್ಕುಂದದ ಅಶೋಕ್ ಸುವರ್ಣ ಮತ್ತು ನಾಟ್ಯ ವಿದುಷಿ ಪವಿತ್ರಾ ಅಶೋಕ್ ದಂಪತಿ ಪುತ್ರಿ.
2021ರ ಮಾರ್ಚ್ನಲ್ಲಿ ಪ್ರಧಾನಿ ಮೋದಿ ಜತೆಗೆ ನಡೆದ ಪರೀಕ್ಷಾ ಪೇ ಚರ್ಚಾದಲ್ಲಿ ಕುಂದಾಪುರ ತಾಲೂಕಿನ ವಿದ್ಯಾರ್ಥಿನಿ ಆರ್ಡಿ ಚಾರಮಕ್ಕಿ ನಾರಾಯಣ ಶೆಟ್ಟಿ ಸ್ಮಾರಕ ಸರ್ಕಾರಿ ಪ್ರೌಢ ಶಾಲೆಯ ಅನುಷಾ ಭಾಗಿಯಾಗಿದ್ದರು.