ಪರಶುರಾಮಪುರ: ಕೇತೇದೇವರ ಜಾತ್ರೆ ಹಿನ್ನೆಲೆಯಲ್ಲಿ ಸಮೀಪದ ಐಗಾರ್ಲಹಳ್ಳಿ ಹೊರವಲಯದ ಪೂಜಾರಿ ನಾಗರಾಜಪ್ಪ ಅವರ ತೋಟದಲ್ಲಿ ಗುರುವಾರ ಗುಡಿಕಟ್ಟಿನ ಭಕ್ತರಿಂದ ಪೂಜಾ ಮರ ಕಡಿವ ಶಾಸ್ತ್ರ ನೆರವೇರಿತು.
ಗುಡಿಕಟ್ಟೆಯ ಗೌಡ, ಯಜಮಾನ, ಪೂಜಾರರು, ಹನ್ನೆರೆಡು ಕೈವಾಡದವರು, ಮರವಾಯಿಗಳು ಇದರಲ್ಲಿ ಪಾಲ್ಗೊಂಡಿದ್ದರು. ಕಳ್ಳೆ ಗುಡಿ ನಿರ್ಮಿಸಲು ಮೊದಲೇ ಗುರುತಿಸಿದ್ದ ಹತ್ತಿ, ಬೇವು, ತಬಸೆಮರ ಹಾಗೂ ಇವುಗಳ ಟೊಂಗೆ ಕತ್ತರಿಸಿ ನೆಲಕ್ಕೆ ತಾಗಿಸದಂತೆ ಬರಿಗಾಲಲ್ಲಿ ಹೆಗಲ ಮೇಲೆ ಹೊತ್ತು ದೇವರ ಮೂಲ ಸನ್ನಿದಾನ ಪುರ್ಲೆಹಳ್ಳಿಯ ವಸಲು ದಿನ್ನೆಗೆ ತಂದು ಸಂಪ್ರದಾಯದಂತೆ ಪೂಜಾ ವಿಧಿವಿಧಾನ ನೆರವೇರಿಸಿದರು.
ಭಕ್ತರು ತಂದಿದ್ದ ಹಣ್ಣು, ಕಾಯಿ, ಹೂವು, ಹಾಲು, ಸಜ್ಜೆ ರೊಟ್ಟಿ, ಶೇಂಗಾ ಚಟ್ನಿ, ಅನ್ನದ ಉಂಡೆಯನ್ನು ಎಲ್ಲರಿಗೂ ವಿತರಿಸಿದರು. ನೆರೆದ ಭಕ್ತರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.