More

    ರಾಷ್ಟ್ರಪತಿ ಗದ್ದುಗೆ ಯಾರಿಗೆ?; ಜುಲೈ 24ಕ್ಕೆ ರಾಮನಾಥ ಕೋವಿಂದ ಅಧಿಕಾರಾವಧಿ ಮುಕ್ತಾಯ

    ನವದೆಹಲಿ: ದೇಶದ ಅತ್ಯುನ್ನತ ಸಾಂವಿಧಾನಿಕ ಹುದ್ದೆಯಾದ ರಾಷ್ಟ್ರಪತಿ ಸ್ಥಾನಕ್ಕೆ ಜುಲೈ 18ಕ್ಕೆ ಚುನಾವಣೆ ನಡೆಯಲಿದೆ. ಫಲಿತಾಂಶ 21ಕ್ಕೆ ಪ್ರಕಟವಾಗಲಿದೆ. ದೇಶದ 15ನೇ ರಾಷ್ಟ್ರಪತಿ ಜುಲೈ 25ಕ್ಕೆ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಚುನಾವಣಾ ಆಯೋಗ ತಿಳಿಸಿದೆ. ನಾಮಪತ್ರ ಸಲ್ಲಿಕೆ ಜೂನ್ 15ರಂದು ಆರಂಭವಾಗಲಿದ್ದು, 29 ಕಡೆಯ ದಿನ. ಪರಿಶೀಲನೆ 30ರಂದು ನಡೆಯಲಿದ್ದು, ಹಿಂಪಡೆಯಲು ಜುಲೈ 2 ಕೊನೆಯ ದಿನ. ರಾಜ್ಯಸಭೆಯ ಮಹಾಪ್ರಧಾನ ಕಾರ್ಯದರ್ಶಿ ಚುನಾವಣಾಧಿಕಾರಿಯಾಗಿರುತ್ತಾರೆ ಎಂದು ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಹಾಲಿ ರಾಷ್ಟ್ರಪತಿ ರಾಮನಾಥ ಕೋವಿಂದ ಅವರ ಐದು ವರ್ಷದ ಅವಧಿ ಜುಲೈ 24ಕ್ಕೆ ಕೊನೆಗೊಳ್ಳುವ ಹಿನ್ನೆಲೆಯಲ್ಲಿ ಚುನಾವಣೆ ಘೋಷಿಸಲಾಗಿದೆ.

    2017ರ ಚುನಾವಣೆ: ಬಿಹಾರದ ರಾಜ್ಯಪಾಲರಾಗಿದ್ದ ರಾಮನಾಥ ಕೋವಿಂದರನ್ನು 2017ರಲ್ಲಿ ರಾಷ್ಟ್ರಪತಿ ಚುನಾವಣೆ ಅಭ್ಯರ್ಥಿಯನ್ನಾಗಿ ಬಿಜೆಪಿ ಆಯ್ಕೆ ಮಾಡಿತ್ತು. ಕಾಂಗ್ರೆಸ್ ಇನ್ನಿತರ ವಿರೋಧ ಪಕ್ಷಗಳು ಮಾಜಿ ಸ್ಪೀಕರ್ ಮೀರಾ ಕುಮಾರ್ ಅವರನ್ನು ಕಣಕ್ಕೆ ಇಳಿಸಿದ್ದವು. ಜುಲೈ 17ರಂದು ನಡೆದ ಚುನಾವಣೆಯಲ್ಲಿ 65.65ರಷ್ಟು ಮತದಾನ ಆಗಿತ್ತು. 7,02,044 ಎಲೆಕ್ಟೊರಲ್ ಕಾಲೇಜ್ ಮತ ಮೌಲ್ಯ ಇತ್ತು. ಜುಲೈ 20ಕ್ಕೆ ಫಲಿತಾಂಶ ಪ್ರಕಟವಾಗಿ ಕೋವಿಂದ ಅವರು 3.34 ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಜಯಶಾಲಿಗಳಾದರು. 2012ರಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಅಭ್ಯರ್ಥಿ ಪ್ರಣಬ್ ಮುಖರ್ಜಿ ಜಯಗಳಿಸಿದ್ದರು. ಎನ್​ಡಿಎ ಬೆಂಬಲಿತ ಅಭ್ಯರ್ಥಿ ಪಿ.ಎ. ಸಂಗ್ಮಾ ಎದುರಾಳಿಯಾಗಿದ್ದರು.

    ಜಂಟಿ ಅಭ್ಯರ್ಥಿ ಬಗ್ಗೆ ಕಾಂಗ್ರೆಸ್ ಸಭೆ: ರಾಷ್ಟ್ರಪತಿ ಚುನಾವಣೆ ಯಲ್ಲಿ ಒಮ್ಮತದ ಅಭ್ಯರ್ಥಿ ಕಣಕ್ಕೆ ಇಳಿಸುವ ಕುರಿತು ರ್ಚಚಿಸಲು ಸಿಪಿಐ ಜತೆ ಕಾಂಗ್ರೆಸ್ ಮಾತುಕತೆ ನಡೆಸಲಿದೆ. ಸಿಪಿಐ ಸಂಸದ ಬಿನೋಯ್ ವಿಶ್ವಂ ಜತೆ ಕಾಂಗ್ರೆಸ್ ಹಿರಿಯ ನಾಯಕ ಎಂ.ಮಲ್ಲಿಕಾರ್ಜುನ ಖರ್ಗೆ ಮಾತುಕತೆ ನಡೆಸಲಿದ್ದಾರೆ. ಖರ್ಗೆ ದೂರವಾಣಿ ಕರೆ ಮಾಡಿ ಈ ವಿಷಯ ಕುರಿತು ರ್ಚಚಿಸಲು ಅಪೇಕ್ಷೆ ವ್ಯಕ್ತಪಡಿಸಿದ್ದಾರೆ ಎಂದು ವಿಶ್ವಂ ಹೇಳಿದ್ದಾರೆ.

    ರಾಷ್ಟ್ರಪತಿ ಚುನಾವಣೆ ಹೇಗೆ?: ಭಾರತದಲ್ಲಿ ರಾಷ್ಟ್ರಪತಿ ಚುನಾವಣೆ ಪರೋಕ್ಷ ಪದ್ಧತಿಯದ್ದಾಗಿದೆ. ಅಂದರೆ ಸಂಸತ್​ನ ಉಭಯ ಸದನ ಮತ್ತು ರಾಜ್ಯಗಳ ವಿಧಾನಸಭೆಗಳ ಸದಸ್ಯರು ರಾಷ್ಟ್ರಪತಿ ಚುನಾವಣೆಗೆ ಮತದಾರರಾಗಿರುತ್ತಾರೆ. ವಿಧಾನಸಭೆಯನ್ನು ಹೊಂದಿರುವ ದೆಹಲಿ ಮತ್ತು ಪುದುಚೇರಿಗಳ ಶಾಸಕರಿಗೂ ಮತದಾನದ ಹಕ್ಕಿದೆ. ಜಮ್ಮು-ಕಾಶ್ಮೀರದಲ್ಲಿ ರಾಷ್ಟ್ರಪತಿ ಆಡಳಿತ ಇರುವ ಕಾರಣ ಈ ಸಾರಿ ಸಂಸದರ ಮತಮೌಲ್ಯವು 708ರಿಂದ 700ಕ್ಕೆ ಇಳಿಕೆ ಆಗಿದೆ. ಸಾಮಾನ್ಯ ಚುನಾವಣೆಯಂತೆ ಅತಿಹೆಚ್ಚು ಮತಪಡೆದವರು ಜಯಶಾಲಿ ಎಂಬ ನಿಯಮ ರಾಷ್ಟ್ರಪತಿ ಚುನಾವಣೆಗೆ ಅನ್ವಯ ಆಗುವುದಿಲ್ಲ. ಚಲಾವಣೆಯಾದ ಒಟ್ಟು ಮತಗಳಲ್ಲಿ ಶೇ. 50ಕ್ಕಿಂತ ಹೆಚ್ಚು ಮತವನ್ನು ಗಳಿಸಿದ ಅಭ್ಯರ್ಥಿ ವಿಜಯಿ ಆಗುತ್ತಾರೆ. ಮತದಾರರು ಕೂಡ ಪ್ರಾಶಸ್ಱದ ಮತದಂತೆ ಮತಪತ್ರದ ಮೂಲಕ ಮತದಾನ ಮಾಡುತ್ತಾರೆ.

    ಮತ ಮೌಲ್ಯ ಹೇಗೆ?: 4,033 ಶಾಸಕರು ಮತ್ತು 776 (ಲೋಕಸಭೆ 543, ರಾಜ್ಯಸಭೆ 233) ಸಂಸದರನ್ನು ಎಲೆಕ್ಟೊರಲ್ ಕಾಲೇಜ್ ಎಂದು ಗುರುತಿಸಲಾಗುತ್ತದೆ. ಆದರೆ, ನಾಮನಿರ್ದೇಶಿತ ಸಂಸದರು ಅಥವಾ ಶಾಸಕರಿಗೆ ಮತದಾನದ ಹಕ್ಕಿಲ್ಲ. ಪ್ರತಿ ಸಂಸದರ ಮತಮೌಲ್ಯ 700ಕ್ಕೂ ತುಸು ಹೆಚ್ಚಾಗಿದ್ದು, ಒಟ್ಟು ಮತ ಮೌಲ್ಯ 5,43,231. ಆದರೆ, ಪ್ರತಿ ಶಾಸಕರ ಮತವನ್ನು ಆಯಾ ರಾಜ್ಯಗಳ ಜನಸಂಖ್ಯೆಗೆ ಅನುಗುಣವಾಗಿ ವಿಂಗಡಿಸಿ ಮೌಲ್ಯ ಮಾಡಲಾಗುತ್ತದೆ. ಹೀಗಾಗಿ ರಾಜ್ಯದಿಂದ ರಾಜ್ಯಕ್ಕೆ ಇದು ಭಿನ್ನವಾಗಿರುತ್ತದೆ. ಒಟ್ಟಾರೆ ಮತಮೌಲ್ಯ 10,86,431 ಆಗಿರಲಿದೆ. ಉದಾಹರಣೆಗೆ ಉತ್ತರ ಪ್ರದೇಶದಲ್ಲಿ ಅತಿ ಹೆಚ್ಚು ಶಾಸಕರಿದ್ದು, ಅಲ್ಲಿ ಪ್ರತಿ ಮತದಾರರ ಮೌಲ್ಯ 208. ಇಡೀ ದೇಶದಲ್ಲಿ ಅಧಿಕ ಮತಮೌಲ್ಯ ಹೊಂದಿರುವ ಎಲೆಕ್ಟೊರಲ್ ಕಾಲೇಜ್ ಉತ್ತರ ಪ್ರದೇಶದ್ದಾಗಿದೆ. ಕರ್ನಾಟಕದ ಶಾಸಕರ ಮತಮೌಲ್ಯ 131 ಆಗಿದೆ.

    ರಾಷ್ಟ್ರಪತಿ ಗದ್ದುಗೆ ಯಾರಿಗೆ?; ಜುಲೈ 24ಕ್ಕೆ ರಾಮನಾಥ ಕೋವಿಂದ ಅಧಿಕಾರಾವಧಿ ಮುಕ್ತಾಯ

    ಚುನಾವಣೆಗೆ ಸ್ಪರ್ಧಿಸಲು ಅರ್ಹತೆ ಏನು?: ರಾಷ್ಟ್ರಪತಿ ಚುನಾವಣೆಯಲ್ಲಿ ಸ್ಪರ್ಧಿಸಲು ಕನಿಷ್ಠ 35 ವರ್ಷ ವಯಸ್ಸಾಗಿರಬೇಕು. ಲಾಭದಾಯಕ ಸರ್ಕಾರಿ ಹುದ್ದೆಯಲ್ಲಿ ಇರಬಾರದು. ಎಲೆಕ್ಟೊರಲ್ ಕಾಲೇಜಿನ ಕನಿಷ್ಠ 50 ಮಂದಿ ಸೂಚಕರು, 50 ಅನುಮೋದಕರ ಬೆಂಬಲ ಇರಬೇಕು. 15 ಸಾವಿರ ರೂ. ಠೇವಣಿ ಇರಿಸಬೇಕು. ಸಂಸತ್ ಭವನ ಮತ್ತು ರಾಜ್ಯಗಳ ವಿಧಾನಸಭೆಗಳು ಮತ ಕೇಂದ್ರಗಳಾಗಿರುತ್ತವೆ. ಸಂಸದರು ಸಂಸತ್ ಭವನ ಅಥವಾ ತಾವು ಪ್ರತಿನಿಧಿಸುವ ರಾಜ್ಯದ ವಿಧಾನಸಭೆಯಲ್ಲಿ ಮತದಾನ ಮಾಡಬಹುದು. ಆದರೆ, ಎಲ್ಲಿ ಮತದಾನ ಮಾಡಲು ಬಯಸುತ್ತಾರೆ ಎಂಬುದನ್ನು ಚುನಾವಣಾ ದಿನಾಂಕಕ್ಕೆ 10 ದಿನ ಮೊದಲು ಚುನಾವಣಾ ಆಯೋಗಕ್ಕೆ ತಿಳಿಸಬೇಕು.

    ರಾಜಕೀಯ ಲೆಕ್ಕಾಚಾರ: ರಾಜಸ್ಥಾನ, ಛತ್ತೀಸ್​ಗಢ, ಮತ್ತು ತಮಿಳುನಾಡು ರಾಜ್ಯಗಳು ಈ ಸಾರಿ ಚುನಾವಣೆಯಲ್ಲಿ ಮಹತ್ವದ ಪಾತ್ರ ವಹಿಸಲಿವೆ. 2017ರಲ್ಲಿ ರಾಜಸ್ಥಾನ ಮತ್ತು ಛತ್ತೀಸ್​ಗಢದಲ್ಲಿ ಬಿಜೆಪಿ ಸರ್ಕಾರ ಇತ್ತು. ತಮಿಳುನಾಡಿನಲ್ಲಿ ಎನ್​ಡಿಎ ಮಿತ್ರಪಕ್ಷವಾದ ಎಐಎಡಿಎಂಕೆ ಸರ್ಕಾರ ಇತ್ತು. ಆದರೆ, ಈ ಸಾರಿ ಮೊದಲೆರಡು ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದರೆ, ತಮಿಳುನಾಡಿನಲ್ಲಿ ಡಿಎಂಕೆ ಸರ್ಕಾರ ಇದೆ. ಒಡಿಶಾ, ಪಶ್ಚಿಮ ಬಂಗಾಳ, ಕೇರಳದಲ್ಲಿ ಬದಲಾವಣೆ ಆಗಿಲ್ಲ. ಪಂಜಾಬ್​ನಲ್ಲಿ ಕಾಂಗ್ರೆಸ್ ಬದಲು ಆಮ್ ಆದ್ಮಿ ಪಕ್ಷ ಅಧಿಕಾರದಲ್ಲಿ ಇದೆ. ಕರ್ನಾಟಕದಲ್ಲಿ ಕಾಂಗ್ರೆಸ್ ಬದಲು ಬಿಜೆಪಿ ಸರ್ಕಾರ ಇದೆ.

    ರಾಜಧಾನಿಯಲ್ಲಿ ಸಿಗ್ತಿದೆ ಅರ್ಧಬೆಲೆಗೆ ಮದ್ಯ, ಕಳ್ಳಸಾಗಾಟ ಶುರು: 70ಕ್ಕೂ ಅಧಿಕ ಮಂದಿಯ ಬಂಧನ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts