ಇಂಡಿ: ಮತಕ್ಷೇತ್ರದ ಸರ್ಕಾರಿ ನೌಕರ ವರ್ಗಾವಣೆ ಖಂಡಿಸಿ ಜೆಡಿಎಸ್ ನೇತೃತ್ವದಲ್ಲಿ ಉಪವಿಭಾಗಾಧಿಕಾರಿ ಕಚೇರಿಯ ಮುಂದೆ ನೌಕರರು ಪ್ರತಿಭಟನೆ ಮಾಡಿದರು. ಉಪವಿಭಾಗಾಧಿಕಾರಿ ಅನುಪಸ್ಥಿತಿಯಲ್ಲಿ ಕಚೇರಿಯ ಅಧಿಕಾರಿ ಆರ್.ಎಸ್. ಮುಜಗೊಂಡ ಅವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಜೆಡಿಎಸ್ ಮುಖಂಡ ಬಿ.ಡಿ. ಪಾಟೀಲ ಮಾತನಾಡಿ, ಇಂಡಿ ಮತಕ್ಷೇತ್ರದ ಅಂದಾಜು 50 ಸರ್ಕಾರಿ ನೌಕರರ ವರ್ಗಾವಣೆ ಮಾಡಿ ಸೇಡಿನ ರಾಜಕಾರಣ ಮಾಡಲಾಗಿದೆ. ಇದರಲ್ಲಿ ಎಸಿ ಹಾಗೂ ಮೂವರು ಪಿಎಸ್ಐ, ಕಂದಾಯ ಇಲಾಖೆ, ಕೃಷಿ ಇಲಾಖೆ, ವಿದ್ಯುತ್ ಇಲಾಖೆ, ಗೃಹ ಇಲಾಖೆ ಮುಂತಾದ ಇಲಾಖೆಯಲ್ಲಿ ನೌಕರರು ಪ್ರಾಮಾಣಿಕವಾಗಿ ಕೆಲಸ ಮಾಡಿದ್ದಾರೆ. ಆದರೆ ಕೇವಲ ಕೆಲವೊಂದು ಸರ್ಕಾರಿ ನೌಕರರನ್ನು ಗುರಿಯಾಗಿಸಿಕೊಂಡು ವರ್ಗಾವಣೆ ಮಾಡಿದ್ದು ಖಂಡನಾರ್ಹ ಎಂದರು.
ಚುನಾವಣೆ ನಂತರ ಹೂಸ ಸರ್ಕಾರಗಳು ತಮ್ಮ ಆಡಳಿತದ ಅನುಕೂಲಕ್ಕಾಗಿ ವರ್ಗಾವಣೆ ಮಾಡುವುದು ಸರ್ವೇ ಸಾಮಾನ್ಯ. ಆದರೆ ದುರುದ್ದೇಶದಿಂದ ಕೂಡಿದ ವರ್ಗಾವಣೆಯಲ್ಲಿ ಅಮಾಯಕ ಸಾಮಾನ್ಯ ನೌಕರರು ವರ್ಗಾವಣೆ ಹೂಂದಿರುವುದು ದುಃಖಕರವಾಗಿದೆ. ಜೂನ್ ತಿಂಗಳಲ್ಲಿ ಅಡ್ಮಿಷನ್ಗಾಗಿ ಶುಲ್ಕ ಪಾವತಿಸಿ ಶಾಲೆ ಕಾಲೇಜುಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಮಕ್ಕಳ ಶಿಕ್ಷಣ ಅತಂತ್ರವಾಗಿದೆ. ಅದರಲ್ಲಿ ವೃದ ತಂದೆ-ತಾಯಿ ಯೋಗಕ್ಷೇಮ ನೋಡಿಕೊಳ್ಳಲು ತೊಂದರೆಯಾಗಿದೆ. ಏಕಾಏಕಿ ವರ್ಗಾವಣೆಯಿಂದ ದಿಕ್ಕು ಕಾಣದಂತಾಗಿದೆ. ಕೂಡಲೇ ಸರ್ಕಾರ ಈ ವರ್ಗಾವಣೆ ನಿಲ್ಲಿಸಬೇಕು ಎಂದು ಆಗ್ರಹಿಸಿದರು.
ಜೆಡಿಎಸ್ ಮುಖಂಡರಾದ ಅಯೋಬ ನಾಟೀಕರ ಮಾತನಾಡಿ, ಶಾಸಕರು ಅಭಿನಂದನಾ ಸಮಾರಂಭದಲ್ಲಿ ಸರ್ವರನ್ನು ವಿಶೇಷವಾಗಿ ವಿರೋಧಿಗಳನ್ನು ಕೂಡ ಹೆಗಲ ಮೇಲೆ ಕೈಹಾಕಿ ಪ್ರೀತಿಯಿಂದ ಕಾಣುವುದಾಗಿ ಹೇಳಿದ್ದು, ನೋಡಿದರೆ ನಾಲಿಗೆ ಮೇಲೆ ಒಂದು, ಕೃತಿಯಲ್ಲಿ ಇನ್ನೊಂದು ಎಂಬುದು ಕಂಡು ಬರುತ್ತದೆ. ಕೂಡಲೇ ಸರ್ಕಾರ ಅಮಾಯಕ ನೌಕರರಿಗೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದರು.
ಶ್ರೀಶೈಲಗೌಡ ಪಾಟೀಲ, ರೇವಣಸಿದ್ದ ಗೋಡಕೆ, ಮಹಿಬೂಬ ಬೇವನೂರ, ಇಸ್ಮಾಯಿಲ್ ಕುಣಬಿ, ಸಿದ್ದು ಡಂಗಾ, ರಾಜು ಮುಲ್ಲಾ, ಬಸುಗೌಡ ಬಿರಾದಾರ, ದುಂಡು ಬಿರಾದಾರ, ವಿ.ಜಿ. ಬಿರಾದಾರ, ಇರ್ಫಾನ್ ಅಗರಖೇಡ, ನಿಯಾಜ್ ಅಗರಖೇಡ, ಶರಣಪ್ಪ ಹೂಸೂರ, ಸುರೇಸ ಪೂಜಾರಿ, ಬಸವರಾಜ ಯಾಡಗಿ, ಮಾಳಪ್ಪ ಪೂಜಾರಿ, ಫಜಲು ಮುಲ್ಲಾ, ಸುದರ್ಶನ ಉಪಾಧ್ಯಾಯ, ಲಕ್ಕಿ ಲಚ್ಚ್ಯಾಣ, ಶಿವ ಟೆಂಗಳೆ, ಸದ್ದಾಂ ಕೋಟ್ನಾಳ, ಭಾಷಾ ಇಂಡಿಕರ ಇತರರಿದ್ದರು.