ಭೋಪಾಲ್: ಮಂಗಳವಾರ ಮಧ್ಯರಾತ್ರಿ ಮಧ್ಯಪ್ರದೇಶ ರಾಜ್ಯ ರಾಜಕೀಯದಲ್ಲಿ ಭಾರಿ ಹೈಡ್ರಾಮ ನಡೆದಿದೆ. ಸಿಎಂ ಕಮಲ್ನಾಥ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಉರುಳಿಸಲು 10 ಶಾಸಕರನ್ನು ಬಿಜೆಪಿ ಸೆಳೆದು ಗುರುಗ್ರಾಮದ ಲಕ್ಷುರಿ ಹೋಟೆಲ್ನಲ್ಲಿ ಬಂಧಿಸಿದೆ ಎಂದು ಕಾಂಗ್ರೆಸ್ ಆರೋಪಿಸಿದ ಬೆನ್ನಲ್ಲೇ ತನ್ನ ಆರು ಶಾಸಕರನ್ನು ಮರಳಿ ಕರೆತರುವಲ್ಲಿ ಕಾಂಗ್ರೆಸ್ ಯಶಸ್ವಿಯಾಗಿದೆ.
ಒಟ್ಟು 10 ಮಂದಿಯಲ್ಲಿ ಉಳಿದಿರುವ ನಾಲ್ವರು ಪಕ್ಷೇತರರು ಬಿಜೆಪಿ ವಶದಲ್ಲಿದ್ದಾರೆ. ಆದರೂ ಅವರೊಂದಿಗೆ ಸಂಪರ್ಕದಲ್ಲಿದ್ದೇವೆ ಎಂದು ಎಂದು ಕಾಂಗ್ರೆಸ್ ನಾಯಕ ಜೈವರ್ಧನ್ ಸಿಂಗ್ ಹೇಳಿಕೆ ನೀಡಿದ್ದು, ಹೋಟೆಲ್ನಲ್ಲಿ ಬಿಜೆಪಿ ನಾಯಕ ನರೋತ್ತಮ ಮಿಶ್ರಾ ಕೂಡ ಇದ್ದಾರೆಂದು ತಿಳಿಸಿದ್ದಾರೆ.
ಶಾಸಕರನ್ನು ಭೇಟಿ ಮಾಡಲು ಕಾಂಗ್ರೆಸ್ ಸಚಿವರು ಹೋದಾಗ ಬಿಎಸ್ಪಿ ಶಾಸಕಿ ರಮಾಬಾಯಿ ಅವರು ಹಲ್ಲೆಗೆ ಯತ್ನಿಸಿದರು ಎಂದು ಕಾಂಗ್ರೆಸ್ ಆರೋಪಿಸಿದೆ. ಶಾಸಕರನ್ನು ಕರೆತರಲು ಜೀತು ಪಟ್ವಾರಿ ಮತ್ತು ಜೈವರ್ಧನ್ ಸಿಂಗ್ ಗುರುಗ್ರಾಮದ ಹೋಟೆಲ್ಗೆ ತೆರಳಿದ್ದರು. ನಮ್ಮೊಂದಿಗೆ ಸಂಪರ್ಕದಲ್ಲಿದ್ದ ಶಾಸಕರು ನಮ್ಮೊಂದಿಗೆ ವಾಪಸ್ ಬರಲು ತಯಾರಿದ್ದರು. ಕರೆತರುವ ವೇಳೆ ರಮಾಬಾಯಿ ನಮ್ಮವರನ್ನು ತಡೆದು ಹಲ್ಲೆಗೆ ಮುಂದಾದರು ಎಂದು ಕಾಂಗ್ರೆಸ್ ಹಿರಿಯ ನಾಯಕ ದಿಗ್ವಿಜಯ ಸಿಂಗ್ ದೂರಿದ್ದಾರೆ.
ಇದನ್ನೂ ಓದಿ: VIDEO| ಮಧ್ಯಪ್ರದೇಶದಲ್ಲಿ ರಾತ್ರೋ ರಾತ್ರಿ ರಾಜಕೀಯ ಕ್ಷಿಪ್ರಕ್ರಾಂತಿ: ಸಿಎಂ ಕಮಲ್ನಾಥ್ ಸರ್ಕಾರಕ್ಕೆ ಆಪತ್ತು
ಉಳಿದ ಶಾಸಕರ ಜತೆಯಲ್ಲಿಯೂ ಸಂಪರ್ಕದಲ್ಲಿದ್ದೇವೆ. ಅವರು ಕೂಡ ಮರಳಿ ಬರುವ ವಿಶ್ವಾಸದಲ್ಲಿದ್ದೇವೆ ಎಂದು ದಿಗ್ವಿಜಯ ಸಿಂಗ್ ಹೇಳಿದರು. ಬಿಎಸ್ಪಿ ಶಾಸಕಿ ರಮಾಬಾಯಿ ಅವರನ್ನು ಪಕ್ಷದ ಮುಖ್ಯಸ್ಥೆ ಮಾಯಾವತಿ ಅವರು ಕಳೆದ ಡಿಸೆಂಬರ್ನಲ್ಲೇ ಅಮಾನತು ಮಾಡಿದ್ದಾರೆ.
ದಿಢೀರ್ ಬೆಳವಣಿಗೆ ಬಗ್ಗೆ ಸಿಎಂ ಕಮಲ್ನಾಥ್ ಮಾಡಿ, ಪರಿಸ್ಥಿತಿ ನಮ್ಮ ನಿಯಂತ್ರಣದಲ್ಲಿದೆ. ಎಲ್ಲ ಶಾಸಕರು ಮರಳಿ ಬರಲಿದ್ದಾರೆ ಎಂದು ತಿಳಿಸಿದ್ದಾರೆ.
ನಮ್ಮ ಶಾಸಕರನ್ನು ಸೆಳೆಯಲು ಬಿಜೆಪಿ ಆಮಿಷವೊಡ್ಡುತ್ತಿದೆ ಎಂದು ಇದಕ್ಕೂ ಮುಂಚೆಯೇ ಕಾಂಗ್ರೆಸ್ ನಾಯಕ ದಿಗ್ವಿಜಯ ಸಿಂಗ್ ಆರೋಪಿಸಿದ್ದರು. ಮಾಜಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಮತ್ತು ನರೋತ್ತಮ್ ಮಿಶ್ರಾ ಕಾಂಗ್ರೆಸ್ ಶಾಸಕರಿಗೆ ಸುಮಾರು 25 ರಿಂದ 35 ಕೋಟಿ ರೂ. ಆಮಿಷವೊಡ್ಡುತ್ತಿದ್ದಾರೆ ಎಂದು ದಿಗ್ವಿಜಯ ಸಿಂಗ್ ದೂರಿದ್ದಾರೆ. ಆದರೆ, ಬಿಜೆಪಿ ದಿಗ್ವಿಜಯ ಸಿಂಗ್ ದೂರನ್ನು ಅಲ್ಲಗೆಳೆದಿದ್ದಾರೆ.
ಮಧ್ಯಪ್ರದೇಶಲ್ಲಿ ಒಟ್ಟು 230 ವಿಧಾನಸಭಾ ಸ್ಥಾನಗಳಿದ್ದು, ಇಬ್ಬರು ಶಾಸಕ ಮರಣದಿಂದ 228ಕ್ಕೆ ಇಳಿದಿದೆ. ಅದರಲ್ಲಿ ಮ್ಯಾಜಿಕ್ ನಂಬರ್ಗೆ 215 ಸ್ಥಾನಗಳು ಬೇಕಾಗಿದ್ದು, ಸದ್ಯ ಕಾಂಗ್ರೆಸ್ 114, ಬಿಜೆಪಿ 107 ಚುನಾಯಿತ ಪ್ರತಿನಿಧಿಗಳನ್ನು ಹೊಂದಿದೆ. ಉಳಿದಂತೆ ಬಿಎಸ್ಪಿ 2, ಎಸ್ಪಿ 1 ಹಾಗೂ ಪಕ್ಷೇತರರು ನಾಲ್ವರು ಶಾಸಕರಿದ್ದು, ದಿಢೀರ್ ಬೆಳವಣಿಗೆಯಿಂದ ಮಧ್ಯಪ್ರದೇಶ ರಾಜಕೀಯ ಯಾವೆಲ್ಲಾ ತಿರುವುಗಳು ಪಡೆದುಕೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕಿದೆ. (ಏಜೆನ್ಸೀಸ್)