ಬೆಳ್ಮಣ್: ಆನ್ಲೈನ್ನಲ್ಲಿ ಸಾಲಕ್ಕೆ ಮೊರೆಹೋದ ಕಾರ್ಕಳ ತಾಲೂಕಿನ ಮುಂಡ್ಕೂರಿನ ಯುವಕನಿಂದ ಲಕ್ಷಾಂತರ ರೂಪಾಯಿ ವರ್ಗಾವಣೆ ಮಾಡಿಸಿಕೊಂಡು ವಂಚನೆ ಮಾಡಲಾಗಿದೆ.
ಮುಂಡ್ಕೂರು ಗ್ರಾಮ ನಿವಾಸಿ ಸಿರಾಜ್ (26) ಮೋಸಗೊಳಗಾದ ಯುವಕ. ಆನ್ಲೈನ್ನಲ್ಲಿ ಸಾಲ ಪಡೆಯುವ ಬಗ್ಗೆ ಗೂಗಲ್ನ ಲೋನ್ ಆ್ಯಪ್ನಲ್ಲಿ ಹೆಸರು ಮತ್ತು ಪೋನ್ ನಂಬರ್ ದಾಖಲಿಸಿದ್ದು, ಮೂರು ದಿನಗಳ ನಂತರ ಅಪರಿಚಿತರು ಕರೆ ಮಾಡಿ ಮುದ್ರಾ ಲೋನ್ನಿಂದ ಮಾತನಾಡುವುದಾಗಿ ನಂಬಿಸಿ ಟ್ಯಾಕ್ಸ್ ಕಟ್ಟುವಂತೆ ಖಾತೆಗೆ ಹಂತ ಹಂತವಾಗಿ 1,97,400 ರೂ. ವರ್ಗಾವಣೆ ಮಾಡಿಸಿಕೊಂಡಿದ್ದಾರೆ. ಸ್ವಲ್ಪ ದಿನಗಳ ನಂತರ ಇನ್ನೊಬ್ಬ ಅಪರಿಚಿತ ವ್ಯಕ್ತಿ ಲೋನ್ ಕೊಡಿಸುವುದಾಗಿ ಹಾಗೂ ಮೊದಲು ಕಳೆದುಕೊಂಡ ಹಣ ಹಿಂದಿರುಗಿಸಿ ನೀಡುವುದಾಗಿ ನಂಬಿಸಿ, ಇದಕ್ಕಾಗಿ ಹಂತ ಹಂತವಾಗಿ ಒಟ್ಟು 39,300 ರೂ, ಹಣವನ್ನು ವರ್ಗಾವಣೆ ಮಾಡಿಸಿಕೊಂಡಿದ್ದಾರೆ. ಯುವಕ ಸಿರಾಜ್ ಒಟ್ಟು 2.36 ಲಕ್ಷ ರೂ. ಹಣವನ್ನು ವರ್ಗಾವಣೆ ಮಾಡಿದ್ದಾರೆ. ಸಾಲವನ್ನು ನೀಡದೆ ಕಟ್ಟಿದ ಹಣವನ್ನೂ ನೀಡದೆ ಮೋಸ ಮಾಡಿದ್ದಾರೆ ಎಂದು ಕಾರ್ಕಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.