ನವದೆಹಲಿ: ನಮ್ಮ ಪ್ರದೇಶದಲ್ಲಿ ಕೋವಿಡ್ 19 ಸೋಂಕಿತರು ಇಲ್ಲ. ಆದರೂ ನಮ್ಮ ಏರಿಯಾದಲ್ಲಿ ಲಾಕ್ಡೌನ್ ಘೋಷಿಸಲಾಗಿದೆ. ಇದು ಅನ್ಯಾಯ ಎನ್ನುವವರಿಗೆ ಇಲ್ಲೊಂದು ಎಚ್ಚರಿಕೆ. ಅದೇನೆಂದರೆ, ಲಾಕ್ಡೌನ್ ನಿಯಮ ಜಾರಿಗೊಳಿಸದೇ ಇದ್ದರೆ, ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಹೋದರೆ, ಒಬ್ಬ ಕೋವಿಡ್ 19 ಸೋಂಕಿತ 30 ದಿನಗಳಲ್ಲಿ ಅಂದಾಜು 406 ಜನರಿಗೆ ಸೋಂಕು ದಾಟಿಸಬಲ್ಲ!
ಸಾಮಾಜಿಕ ಅಂತರ ಹಾಗೂ ಇನ್ನಿತರ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳದಿದ್ದರೆ ಒಬ್ಬ ಸೋಂಕಿತನಿಂದ 406 ಜನರಿಗೆ ಸೋಂಕು ದಾಟುತ್ತದೆ. ಪರೀಕ್ಷೆ ನಂತರವೇ ಸೋಂಕು ತಗುಲಿರುವುದು ತಿಳಿಯುವುದರಿಂದ, ಆ ವೇಳೆಗಾಗಲೆ ಆಗಬಹುದಾದ ಎಲ್ಲ ಅನಾಹುತಗಳು ಆಗಿ ಹೋಗಿರುತ್ತವೆ.
ಆತನ ಸಂಪರ್ಕದಲ್ಲಿ ಯಾರು ಯಾರಿದ್ದರು ಎಂಬುದನ್ನು ಪತ್ತೆ ಮಾಡುವುದು ಅಸಾಧ್ಯದ ಮಾತು. ಹಾಗಾಗಿ ಲಾಕ್ಡೌನ್ ನಿಯಮ ಪಾಲಿಸುವುದು ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಅನಿವಾರ್ಯ. ಇಲ್ಲವಾದರೆ, ಮೂರನೇ ಹಂತದ ಸೋಂಕು ಹರಡುವಿಕೆಯ ಅಪಾಯಕ್ಕೆ ಆಹ್ವಾನವಿತ್ತಂತೆ.
ಉದಾಹರಣೆಗೆ ಆರ್0 (ಆರ್ ನಾಟ್-ರಿಪ್ರೊಡೆಕ್ಟಿವ್ ನಂಬರ್) ಅಂದರೆ ಯಾವುದೇ ಕಾಯಿಲೆಯ ಪ್ರಸರಣ ಪ್ರಮಾಣವನ್ನು ಗುರುತಿಸುವ ಮಾನಕ. ಕರೊನಾ ವೈರಸ್ನ ಪ್ರಸರಣ ಪ್ರಮಾಣ 1.4ರಿಂದ 1.5ರ ನಡುವೆ ಇದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ (ಐಸಿಎಂಆರ್) ಅಧ್ಯಯನ ತಿಳಿಸಿದೆ.
ಆರ್0 ಅನ್ನು 2.5 ಎಂದು ಪರಿಗಣಿಸುವುದಾದರೆ ಒಬ್ಬ ಸೋಂಕಿತ 30 ದಿನಗಳಲ್ಲಿ 406 ಜನರಿಗೆ ಸೋಂಕು ದಾಟಿಸಬಲ್ಲ. ಅದೇ ಲಾಕ್ಡೌನ್ ಮತ್ತು ಸಾಮಾಜಿಕ ಅಂತರವನ್ನು ಪಾಲಿಸಿದಾಗ ಈ ಪ್ರಮಾಣ ಶೇ.75 ಕಡಿಮೆಯಾಗುತ್ತದೆ. ಆಗ ಒಬ್ಬ ಸೋಂಕಿತ 2.5 ಜನರಿಗೆ ಸೋಂಕು ದಾಟಿಸಬಲ್ಲ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ ಅಗರ್ವಾಲ್ ವಿವರಿಸಿದ್ದಾರೆ.
ಈಗ ಹೇಳಿ, ಕೇಂದ್ರ ಸರ್ಕಾರ ಲಾಕ್ಡೌನ್ ಘೋಷಿಸಿರುವುದು ಒಳ್ಳೆಯದೋ ಅಥವಾ ಅದನ್ನು ಹಿಂಪಡೆದು ಎಂದಿನಂತೆ ಜೀವನ ನಡೆಸಲು ಅವಕಾಶ ಮಾಡಿಕೊಡಬೇಕಾ? ಇನ್ನಾದರೂ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಮುಂದಾಗಿ ಕರೊನಾ ಪ್ರಸರಣದ ಪ್ರಮಾಣ ಕಡಿಮೆ ಮಾಡುವಿರಾ? ನಿರ್ಧಾರ ನಿಮ್ಮದು.
ರಾಜ್ಯದಲ್ಲಿ ಕೋವಿಡ್ 19 ಸೋಂಕಿತರ ಸಂಖ್ಯೆ 175ಕ್ಕೆ ಏರಿಕೆ, ಮಂಗಳವಾರ ಒಟ್ಟು 12 ಹೊಸ ಪ್ರಕರಣಗಳು ದಾಖಲು