ಕುಶಾಲನಗರ: ಕಾವೇರಿ ನೀರಾವರಿ ನಿಗಮದ ವತಿಯಿಂದ ಹಾರಂಗಿ ಅಣೆಕಟ್ಟೆಯ ಹಿಂಭಾಗದಲ್ಲಿ ನಡೆಯುತ್ತಿರುವ ಹೂಳೆತ್ತುವಿಕೆ, ತಡೆಗೋಡೆ, ಕಿರು ಸೇತುವೆ ನಿರ್ಮಾಣ ಸೇರಿದಂತೆ ವಿವಿಧ ಕಾಮಗಾರಿಗಳು ಮತ್ತು ಅಣೆಕಟ್ಟೆಯ ಸಮೀಪದಿಂದ 6ನೇ ತೂಬಿನವರೆಗೆ ನಡೆಯುತ್ತಿರುವ 49 ಕೋಟಿ ರೂ. ವೆಚ್ಚದ ಮುಖ್ಯನಾಲೆಯ ದುರಸ್ತಿ ಕಾರ್ಯವನ್ನು ಮೈಸೂರು ವಿಭಾಗದ ಕಾವೇರಿ ನೀರಾವರಿ ನಿಗಮದ ಮುಖ್ಯ ಇಂಜಿನಿಯರ್ ಒಳಗೊಂಡ ತಂಡ ಸೋಮವಾರ ಪರಿಶೀಲನೆ ನಡೆಸಿತು.
ಕಾವೇರಿ ನೀರಾವರಿ ನಿಗಮದ ಮೈಸೂರು ವಿಭಾಗದ ಮುಖ್ಯ ಇಂಜಿನಿಯರ್ ವೆಂಕಟೇಶ್ ನೇತೃತ್ವದಲ್ಲಿ ಕುಶಾಲನಗರ ಹಾರಂಗಿ ನೀರಾವರಿ ನಿಗಮದ ಅಧೀಕ್ಷಕ ಇಂಜಿನಿಯರ್ ಕೆ.ಕೆ.ರಘುಪತಿ, ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಪುಟ್ಟಸ್ವಾಮಿ, ಸಹಾಯಕ ಇಂಜಿನಿಯರ್ ದೇವೇಗೌಡ, ಇಂಜಿನಿಯರ್ಗಳಾದ ಸೌಮ್ಯಾ, ಸಿದ್ದರಾಜು ಸೇರಿದಂತೆ ಸಿಬ್ಬಂದಿ ವರ್ಗದವರು ಎರಡೂ ಕಡೆಗಳ ಕಾಮಗಾರಿಗಳನ್ನು ಹಂತ ಹಂತವಾಗಿ ಪರಿಶೀಲನೆ ನಡೆಸಿದರು.
ಕಾಮಗಾರಿಯ ಕೊನೆಯವರೆಗೂ ಉತ್ತಮ ಗುಣಮಟ್ಟವನ್ನು ಕಾಯ್ದುಕೊಂಡು ಪೂರ್ಣಗೊಳಿಸುವಂತೆ ಗುತ್ತಿಗೆದಾರನಿಗೆ ಅಧಿಕಾರಿಗಳು ಸೂಚನೆ ನೀಡಿದರು.
ಕಾವೇರಿ ನೀರಾವರಿ ನಿಗಮದ ಮೈಸೂರು ವಿಭಾಗದ ಮುಖ್ಯ ಇಂಜಿನಿಯರ್ ವೆಂಕಟೇಶ್ ನೇತೃತ್ವದ ತಂಡ ವಿವಿಧ ಕಾಮಗಾರಿಗಳನ್ನು ಸೋಮವಾರ ಪರಿಶೀಲಿಸಿತು. ಕೆ.ಕೆ.ರಘುಪತಿ, ದೇವೇಗೌಡ, ಪುಟ್ಟಸ್ವಾಮಿ, ಸೌಮ್ಯಾ, ಸಿದ್ದರಾಜು ಇದ್ದರು.