More

    ಕಲ್ಯಾಣ ಕರ್ನಾಟಕ ಉತ್ಸವ ಅದ್ದೂರಿ ಆಚರಣೆಗೆ ಸಿದ್ಧತೆ ಕೈಗೊಳ್ಳಿ

    ಕನಕಗಿರಿ: ಪಟ್ಟಣದ ಕರ್ನಾಟಕ ಪಬ್ಲಿಕ್ ಶಾಲಾ ಆವರಣದಲ್ಲಿ ಸೆ.17ರಂದು ಕಲ್ಯಾಣ ಕರ್ನಾಟಕ ಉತ್ಸವವನ್ನು ವಿಜೃಂಭಣೆಯಿಂದ ಆಚರಿಸಲು ಸಕಲ ಸಿದ್ಧತೆ ಕೈಗೊಳ್ಳುವಂತೆ ಅಧಿಕಾರಿಗಳಿಗೆ ತಹಸೀಲ್ದಾರ್ ವಿಶ್ವನಾಥ ಮುರುಡಿ ಸೂಚಿಸಿದರು.

    ತಹಸಿಲ್ ಕಚೇರಿಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ದೇಶಕ್ಕೆ ಸ್ವಾತಂತ್ರೃ ದೊರೆತರೂ ಕಲ್ಯಾಣ ಕರ್ನಾಟಕ ಎಂದು ಕರೆಯಿಸಿಕೊಳ್ಳುವ ಕರ್ನಾಟಕದ ಬೀದರ್, ಕಲಬುರ್ಗಿ, ರಾಯಚೂರು, ಕೊಪ್ಪಳ, ಬಳ್ಳಾರಿ, ಯಾದಗಿರಿ ಜಿಲ್ಲೆಗಳು ಮಾತ್ರ ಹೈದ್ರಾಬಾದ್ ನಿಜಾಮನ ಕಪಿಮುಷ್ಠಿಯಲ್ಲಿದ್ದವು.

    1948 ಸೆ.17ರಂದು ಸರ್ದಾರ್ ವಲ್ಲಭಬಾಯಿ ಪಟೇಲ್‌ರ ಯೋಚನಾಯುಕ್ತ ದಾಳಿಯಿಂದಾಗಿ ಈ ಆರು ಜಿಲ್ಲೆಗಳ ಜನರು ಸ್ವಾತಂತ್ರೃ ಕಂಡಿದ್ದಾರೆ. ಇಂತಹ ದಿನವನ್ನು ಸಡಗರದಿಂದ ಆಚರಿಸಬೇಕಾಗಿದೆ. ಈ ನಿಟ್ಟಿನಲ್ಲಿ ಬೇಕಾದ ಸಿದ್ಧತೆ ಕೈಗೊಳ್ಳಬೇಕು. 371 (ಜೆ) ಅಡಿಯಲ್ಲಿ ತಾಲೂಕು ವ್ಯಾಪ್ತಿಯಲ್ಲಿ ಸರ್ಕಾರಿ ಉದ್ಯೋಗ ಪಡೆದವರನ್ನು ಗುರುತಿಸಿ ಸನ್ಮಾನಿಸಲಾಗುವುದು ಎಂದು ತಿಳಿಸಿದರು.

    ಗ್ರೇಡ್ 2 ತಹಸೀಲ್ದಾರ್ ಮಹಾಂತಗೌಡ, ತಾಪಂ ಇಒ ಚಂದ್ರಶೇಖರ ಕಂದಕೂರು, ಪಪಂ ಮುಖ್ಯಾಧಿಕಾರಿ ದತ್ತಾತ್ರೆಯ ಹೆಗಡೆ, ಇಸಿಒ ಆಂಜನೇಯ, ಸಾರಿಗೆ ನಿಯಂತ್ರಕ ಶ್ರೀರಾಮ್, ಎಸಿಡಿಪಿಒ ವಿಮಲಪ್ಪ, ಕಂದಾಯ ನಿರೀಕ್ಷಕ ಬಸ್ರುದೀನ್ ಇತರರಿದ್ದರು.

    ಪ್ರತಿಧ್ವನಿಸಿದ ವಿಜಯವಾಣಿ ವರದಿ: ಸ್ವಾತಂತ್ರೃ ದಿನಾಚರಣೆಯಂದು ಪಟ್ಟಣದ ಕಾರ್ಮಿಕ ಇಲಾಖೆ ನಿರೀಕ್ಷಕರ ಕಚೇರಿಯಲ್ಲಿ ಸ್ವಚ್ಛತೆಯಿಲ್ಲದೇ, ಪ್ಲಾಸ್ಟಿಕ್ ಪೈಪ್‌ಗೆ ಬಾವುಟ ಕಟ್ಟಿ ಧ್ವಜಾರೋಹಣ ಮಾಡಿದ ಕುರಿತು ಆ.16ರಂದು ಪ್ರಕಟಿಸಿದ್ದ ವರದಿ ಸಭೆಯಲ್ಲಿ ಪ್ರತಿಧ್ವನಿಸಿತು. ಈ ಬಗ್ಗೆ ಮಾತನಾಡಿದ ತಹಸೀಲ್ದಾರ್, ಧ್ವಜಾರೋಹಣಕ್ಕೆ ಅದರದೇ ಆದ ನೀತಿ ನಿಯಮಗಳಿವೆ. ಆದರೆ, ಬೇಜವಾಬ್ದಾರಿತನದಿಂದ ಪೈಪ್‌ಗೆ ಧ್ವಜ ಕಟ್ಟಿ ಏರಿಸಿ ನಿಯಮ ಮೀರಿರುವುದರ ಬಗ್ಗೆ ಬೇಸರ ವ್ಯಕ್ತಪಡಿಸಿದರು. ನಿರ್ಲಕ್ಷೃತನದಿಂದ ಧ್ವಜಾರೋಹಣ ಮಾಡುವುದನ್ನು ಕೈ ಬಿಟ್ಟು ಸೆ.17ರಂದು ಧ್ವಜಾರೋಹಣ ನೆರವೇರಿಸಲು ಸೂಚಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts