ಆಲಮೇಲ: ಪಟ್ಟಣದಲ್ಲಿ ಪಪಂ ಅಧಿಕಾರಿ ಅಭಿಷೇಕ ಪಾಂಡೆ ನೇತೃತ್ವದಲ್ಲಿ ಸಿಬ್ಬಂದಿ ಸೋಮವಾರ ವಿವಿಧೆಡೆ ಸಂಚರಿಸಿ ಮಾಸ್ಕ್ ಧರಿಸದೆ ವಾಪಾರ ವಹಿವಾಟು ನಡೆಸುತ್ತಿದ್ದ ಅಂಗಡಿಕಾರರಿಗೆ ದಂಡ ವಿಧಿಸಿ ಅರಿವು ಮೂಡಿಸಿದರು.
ಈ ಸಂದರ್ಭ ಪಟ್ಟಣದ ಮೇನ್ ಬಜಾರ್ ರಸ್ತೆಯಲ್ಲಿ ಬಂಗಾರದ ವ್ಯಾಪಾರಿಯೊಬ್ಬರು ಮಾಸ್ಕ್ ಧರಿಸದೆ ವ್ಯಾಪಾರದಲ್ಲಿ ತೊಡಗಿದ್ದನ್ನು ಗಮನಿಸಿದ ಪಪಂ ಸಿಬ್ಬಂದಿ ಆ ವ್ಯಾಪಾರಿಗೆ ದಂಡ ಹಾಕಲು ಮುಂದಾದಾಗ ವಾಗ್ವಾದ ನಡೆಯಿತು.
ಪಟ್ಟಣಕ್ಕೆ ದಿನಾಲೂ ಬೇರೆ ಜಿಲ್ಲೆಗಳಿಂದ ವ್ಯಾಪಾರಿಗಳು ಹಾಗೂ ಹಳ್ಳಿಗಳಿಂದ ನೂರಾರು ಜನತೆ ಆಗಮಿಸುತ್ತಿದ್ದು, ಪ್ರತಿಯೊಬ್ಬರೂ ಕಡ್ಡಾಯವಾಗಿ ಮಾಸ್ಕ್ ಹಾಕಿಕೊಂಡು ವ್ಯಾಪಾರ ನಡೆಸಲು ಧ್ವನಿವರ್ಧಕದಲ್ಲಿ ತಿಳಿಸಲಾಗಿತ್ತು. ಆದರೂ ಯಾರು ನಿಯಮ ಪಾಲಿಸುತ್ತಿಲ್ಲ ಎಂದು ಕಂದಾಯ ನಿರೀಕ್ಷಕ ಭೋಜರಾಜ ನಾರಾಯಣಕರ ಬೇಸ ವ್ಯಕ್ತಪಡಿಸಿದ್ದಾರೆ.
ಪಟ್ಟಣದಲ್ಲಿ ಕೆಲ ವ್ಯಾಪಾರಿಗಳು ಕರೊನಾ ನಿಯಮಗಳನ್ನು ಗಾಳಿಗೆ ತೂರಿ ವ್ಯಾಪಾರ ನಡೆಸುತ್ತಿದ್ದಾರೆ. ಅಂತವರಿಗೆ ದಂಡ ಹಾಕಲು ಹೋದಾಗ ನಮ್ಮನ್ನೇ ಅವ್ಯಾಚ ಶಬ್ದಗಳಿಂದ ನಿಂದಿಸುತ್ತಿದ್ದಾರೆ. ಮೇಲಧಿಕಾರಿಗಳ ಗಮನಕ್ಕೆ ತಂದು ಅಂತವರ ಮೇಲೆ ಕ್ರಮ ಜರುಗಿಸಲಾಗುವುದು.
ಅಭಿಷೇಕ ಪಾಂಡೆ, ಮುಖ್ಯಾಧಿಕಾರಿ, ಪಪಂ ಆಲಮೇಲ
ಸೋಮವಾರ ಅಂದಾಜು 30ಕ್ಕೂ ಹೆಚ್ಚು ಅಂಗಡಿಕಾರರಿಗೆ ದಂಡ ಹಾಕಲಾಯಿತು. ಈ ವೇಳೆ ಸಿಬ್ಬಂದಿಗಳಾದ ಚಾಂದಸಾಬ ವಡಗೇರಿ, ಈರೇಶ ಮೋರಟಗಿ, ದಯಾನಂದ ಇವಣಿ, ಯುವರಾಜ ರಜಪೂತ, ಇಜಾಜ ಹುಂಡೇಕಾರ ಹಾಗೂ ಪೌರ ಕಾರ್ಮಿಕರು ಇದ್ದರು.