More

    ಪೇಯಿಂಗ್ ಗೆಸ್ಟ್​ನಲ್ಲಿ ವಾಸಿಸುತ್ತಿದ್ದ ಒಡಿಶಾ ಯುವತಿಗೆ ಗುಂಡೇಟು

    ಬೆಂಗಳೂರು: ಪೇಯಿಂಗ್ ಗೆಸ್ಟ್​ನಲ್ಲಿ ವಾಸಿಸುತ್ತಿದ್ದ ಯುವತಿ ಮೇಲೆ ಪರಿಚಿತ ವ್ಯಕ್ತಿ ಪಿಸ್ತೂಲ್​ನಿಂದ ಗುಂಡು ಹಾರಿಸಿ ಪರಾರಿಯಾಗಿದ್ದಾನೆ. ವೈಯಕ್ತಿಕ ವಿಚಾರಕ್ಕೆ ಗಲಾಟೆಯಾಗಿ ಗುಂಡು ಹಾರಿಸಿರುವ ಶಂಕೆ ವ್ಯಕ್ತವಾಗಿದೆ.

    ಒಡಿಶಾ ಮೂಲದ ಶುಭಶ್ರೀ ಪ್ರಿಯದರ್ಶಿನಿ (25) ಗಾಯ ಗೊಂಡಾಕೆ. ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆರೋಗ್ಯ ಸ್ಥಿತಿ ಚಿಂತಾಜನಕವಾಗಿದೆ. ಈ ಕುರಿತು ಮಾರತ್​ಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಪರಾರಿಯಾಗಿರುವ ಆರೋಪಿಗಾಗಿ ಹುಡುಕಾಟ ನಡೆದಿದೆ ಎಂದು ವೈಟ್​ಫೀಲ್ಡ್ ವಿಭಾಗದ ಡಿಸಿಪಿ ಎಂ.ಎನ್. ಅನುಚೇತ್ ತಿಳಿಸಿದ್ದಾರೆ.

    2 ವರ್ಷಗಳಿಂದ ಮುನೆಕೋಳಾಲದ ಮಂಜುನಾಥ ಲೇಔಟ್​ನ ಪಿಜಿಯೊಂದರಲ್ಲಿ ವಾಸವಿದ್ದ ಶುಭಶ್ರೀ ನಿಮ್ಹಾನ್ಸ್ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದರು. ಮಂಗಳವಾರ (ಫೆ.25) ಸಂಜೆ 6 ಗಂಟೆಗೆ ಯುವಕನೊಬ್ಬ ಬೈಕ್​ನಲ್ಲಿ ಪಿಜಿ ಬಳಿ ಬಂದಿದ್ದು ಪಿಸ್ತೂಲ್​ನಿಂದ ಆಕೆ ಮೇಲೆ ಗುಂಡು ಹಾರಿಸಿದ್ದಾನೆ. ಶುಭಶ್ರೀ ಚೀರಾಡುತ್ತಿದ್ದಂತೆ ಆರೋಪಿ ತನ್ನ ಕೈಯಲ್ಲಿದ್ದ ಪಿಸ್ತೂಲ್​ನ ಚರಂಡಿಗೆ ಎಸೆದು ಪರಾರಿಯಾಗಿದ್ದಾನೆ.

    7.65 ಎಂಎಂ ನಾಡಪಿಸ್ತೂಲ್ ಚರಂಡಿಯಲ್ಲಿ ಸಿಕ್ಕಿದೆ. ವಶಕ್ಕೆ ಪಡೆದು ಎಫ್​ಎಸ್​ಎಲ್ ಪರೀಕ್ಷೆಗೆ ರವಾನಿಸಲಾಗಿದೆ. ಸುತ್ತಮುತ್ತಲಿನ ಸಿಸಿ ಕ್ಯಾಮರಾ ದೃಶ್ಯಗಳನ್ನು ತಪಾಸಣೆ ನಡೆಸಲಾಗಿದ್ದು, ಆರೋಪಿಯ ಮುಖ ಚಹರೆ ದೊರೆತಿದೆ. ಶುಭಶ್ರೀ ಬೆಳಗ್ಗೆ ಯುವಕನೊಬ್ಬನ ಜತೆ ಬೈಕ್​ನಲ್ಲಿ ತೆರಳಿ ಮಧ್ಯಾಹ್ನ ವಾಪಸಾಗಿದ್ದಳು. ಆತನೊಂದಿಗೆ ಜಗಳವಾಡಿದ್ದಳು ಎನ್ನಲಾಗಿದೆ. ಆರೋಪಿ ಪತ್ತೆಗೆ ಎರಡು ಪ್ರತ್ಯೇಕ ತಂಡ ರಚಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts