ಆನಂದಪುರ: ಅಡಕೆ ಸಿಪ್ಪೆಯ ಮಹತ್ವ ಅರಿಯದೇ ರೈತರು ಅದಕ್ಕೆ ಬೆಂಕಿ ಹಾಕುತ್ತಿದ್ದಾರೆ. ಕೆಲವಡೆ ರಸ್ತೆ ಬದಿಯಲ್ಲಿ ಸುರಿದು ವ್ಯರ್ಥ ಮಾಡುತ್ತಿದ್ದಾರೆ. ಅಡಕೆ ಸಿಪ್ಪೆಯಲ್ಲಿ ಕೊಟ್ಟಿಗೆ ಗೊಬ್ಬರಕ್ಕಿಂತ ಅಧಿಕ ಶಕ್ತಿಯಿದೆ. ಇದರಲ್ಲಿ ನಾರಿನಂಶ ಇರುವ ಕಾರಣ ಅಡಕೆ ಬೆಳೆಗೆ ಹೇಳಿ ಮಾಡಿಸಿದಂತಹ ಗೊಬ್ಬರ ಇದಾಗಿದೆ. ಎರೆಹುಳು ಗೊಬ್ಬರ ತಯಾರಿಯಲ್ಲಿ ಸಹ ಅಡಕೆ ಸಿಪ್ಪೆ ಹೇರಳವಾಗಿ ಬಳಸಬಹುದು ಎಂದು ತೋಟಗಾರಿಕೆ ವಿವಿಯ ಕೃಷಿ ವಿಸ್ತರಣಾ ವಿಭಾಗದ ಡಾ. ಅರುಣ್ಕುಮಾರ್ ತಿಳಿಸಿದರು.
ಇರುವಕ್ಕಿಯ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿವಿಯ ಅಂತಿಮ ವರ್ಷದ ಬಿ.ಎಸ್ಸಿ ಕೃಷಿ ವಿದ್ಯಾರ್ಥಿಗಳು ಭಾನುವಾರ ಸಾವಯವ ಗೊಬ್ಬರ ತಯಾರಿಕೆ ಪ್ರಾತ್ಯಕ್ಷಿಕೆ ನಡೆಸಿದರು. ಸಿರಿಜೇನಿ ತಂಡ ಹಮ್ಮಿಕೊಂಡಿದ್ದ ಈ ಶಿಬಿರದಲ್ಲಿ ಕೃಷಿ ಅರ್ಥಶಾಸ್ತ್ರ ವಿಭಾಗದ ಡಾ. ಕಿರಣ್ಕುಮಾರ್ ಮಾರ್ಗದರ್ಶನ ನೀಡಿ, ರೈತರೊಂದಿಗೆ ಸಂವಾದ ನಡೆಸಿದರು.