ನವದೆಹಲಿ: ದೆಹಲಿ-ಎನ್ಸಿಆರ್ ಪ್ರದೇಶದಲ್ಲಿ ಉಗ್ರ ದಾಳಿ ಸಂಘಟಿಸಲು ಸಂಚು ರೂಪಿಸಿದ್ದ ಜೈಷ್ ಏ ಮೊಹಮ್ಮದ್(JeM) ಉಗ್ರ ಸಂಘಟನೆಯ ನಾಲ್ಕು ಉಗ್ರರ ವಿರುದ್ಧ ನ್ಯಾಷನಲ್ ಇನ್ವೆಸ್ಟಿಗೇಷನ್ ಏಜೆನ್ಸಿ(NIA) ಪೂರಕ ಚಾರ್ಜ್ಶೀಟ್ ಅನ್ನು ಸಲ್ಲಿಸಿದೆ. ಇದರಂತೆ, ಪುಲ್ವಾಮಾ ಉಗ್ರ ದಾಳಿಯ ಪ್ರಮುಖ ಸಂಚುಕೋರ ಮಾಸ್ಟರ್ ಮೈಂಡ್ ಮುದಾಸ್ಸಿರ್ ಅಹ್ಮದ್ ಖಾನ್ ಎಂದು ಆರೋಪಿಸಲಾಗಿದೆ.
ಎನ್ಐಎ ಯ ಹಿರಿಯ ಅಧಿಕಾರಿಯೊಬ್ಬರ ಪ್ರಕಾರ, ಪುಲ್ವಾಮಾದ ನಿವಾಸಿಗಳಾದ ಸಾಜ್ಜದ್ ಅಹ್ಮದ್ ಖಾನ್ ಅಲಿಯಾಸ್ ಸಾಜ್ಜದ್ (27), ಬಿಲಾಸ್ ಅಹ್ಮದ್ ಮಿರ್ ಬಿಲ್ಲಾ (23), ಇಶ್ಫಾಕ್ ಅಹ್ಮದ್ ಭಟ್(24), ಮೆಹ್ರಾಜ್ ಉದ್ ದಿನ್ ಛೋಪಾನ್(22) ಎಂಬ ನಾಲ್ವರ ವಿರುದ್ಧ ಪೂರಕ ಚಾರ್ಜ್ಶೀಟ್ ಅನ್ನು ದೆಹಲಿಯಲ್ಲಿರುವ ಎನ್ಐಎ ಸ್ಪೆಷಲ್ ಕೋರ್ಟ್ಗೆ ಮಂಗಳವಾರ ಸಲ್ಲಿಸಲಾಗಿದೆ. ಐಪಿಸಿಯ ವಿವಿಧ ಸೆಕ್ಷನ್ಗಳು, ಎಕ್ಸ್ಪ್ಲೋಸಿವ್ ಸಬ್ಸ್ಟಾನ್ಸ್ ಆ್ಯಕ್ಟ್, ಅನ್ಲಾಫುಲ್ ಆ್ಯಕ್ಟಿವಿಟೀಸ್ ಪ್ರಿವೆನ್ಶನ್ ಆ್ಯಕ್ಟ್(ಯುಎಪಿಎ) ಅಡಿ ಪ್ರಕರಣ ದಾಖಲಾಗಿದೆ.
ಜೆಇಎಂನ ಹಿರಿಯ ಕಮಾಂಡರ್ಗಳು ದೆಹಲಿ-ಎನ್ಸಿಆರ್ ಪ್ರದೇಶ ಸೇರಿ ವಿವಿಧ ಭಾಗಗಳಲ್ಲಿ ದಾಳಿ ನಡೆಸುವ ಸಂಚನ್ನು ರೂಪಿಸಿದ್ದರು ಎಂಬ ಮಾಹಿತಿ ಇವರಿಂದ ಬಹಿರಂಗವಾಗಿದೆ. ತನಿಖೆ ವೇಳೆ ಈ ನಾಲ್ವರು ಆರೋಪಿಗಳು ಜೆಇಎಂ ಸಂಬಂಧಿತ ಚಟುವಟಿಕೆಗಳಲ್ಲಿ ಭಾಗಿಯಾಗಿರುವುದಕ್ಕೆ ಸಾಕಷ್ಟು ಸಾಕ್ಷ್ಯಗಳಿವೆ.
ಮಿಲಿಟರಿ ಕಾರ್ಯಾಚರಣೆಯ ವೇಳೆ ಕಳೆದ ವರ್ಷದ ಮಾರ್ಚ್ 10ರಂದು ತ್ರಾಲ್ನಲ್ಲಿ ಹತನಾದ ಉಗ್ರ ಮುದಾಸ್ಸಿರ್ ಅಹ್ಮದ್ ಖಾನ್ ಪುಲ್ವಾಮಾ ಉಗ್ರ ದಾಳಿಯ ಪ್ರಮುಖ ಸಂಚುಕೋರರಲ್ಲಿ ಒಬ್ಬ. ಬಂಧಿತ ಆರೋಪಿಗಳ ಪೈಕಿ ಸಾಜ್ಜದ್ ನೇರವಾಗಿ ಮುದಾಸ್ಸಿರ್ ಜತೆಗೆ ಸಂಪರ್ಕದಲ್ಲಿದ್ದ. ಇಶ್ಫಾಕ್ ಅಹ್ಮದ್ ಭಟ್ ಜೆಇಎಂ ಬಲ ಪಡಿಸುವುದಕ್ಕಾಗಿ ಶಸ್ತ್ರಾಸ್ತ್ರಗಳ ಸಾಗಣೆ ಮಾಡುವುದರಲ್ಲಿ, ಉಗ್ರರನ್ನು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಕರೆದೊಯ್ಯುವುದರಲ್ಲಿ ಭಾಗಿಯಾಗಿದ್ದ. ಮೆಹ್ರಾಜ್ ಉದ್ ದಿನ್ ಛೋಪಾನ್ ಬಳಿ ಒಂದು ಹ್ಯಾಂಡ್ ಗ್ರೆನೇಡ್ ಸಿಕ್ಕಿದ್ದು, ಸೇನಾ ನೆಲೆಗಳ ಮೇಲೆ ದಾಳಿ ಎಸಗಿ ಅಲ್ಲಿಂದ ಶಸ್ತ್ರಾಸ್ತ್ರ ದೋಚುವುದಕ್ಕೆ ಬಳಸುತ್ತಿದ್ದ ಎಂದು ಎನ್ಐಎ ಹೇಳಿದೆ.
ಇದಕ್ಕೂ ಮೊದಲು ಎನ್ಐಎ ಕಳೆದ ವರ್ಷ ಸೆಪ್ಟೆಂಬರ್ನಲ್ಲಿ ಸಾಜ್ಜದ್ ಅಹ್ಮದ್ ಖಾನ್, ತನ್ವೀರ್ ಅಹ್ಮದ್ ಗಣಿ, ಬಿಲಾಲ್ ಅಹ್ಮದ್ ಮಿರ್ ಅಲಿಯಾಸ್ ಬಿಲ್ಲಾ, ಮುಜಾಫರ್ ಅಹ್ಮದ್ ಭಟ್ ವಿರುದ್ಧ ಚಾರ್ಜ್ಶೀಟ್ ಸಲ್ಲಿಸಿತ್ತು. (ಏಜೆನ್ಸೀಸ್)