ಬೆಂಗಳೂರು: ಎನ್ಎಚ್ಎಐ ಪ್ರಾದೇಶಿಕ ಕಚೇರಿ ಅಧಿಕಾರಿ ಅಕಿಲ್ ಅಹ್ಮದ್ ಲಂಚ ಪ್ರಕರಣದಲ್ಲಿ ಜಪ್ತಿಯಾಗಿದ್ದ 20 ಲಕ್ಷ ರೂಪಾಯಿಯನ್ನು ಜಾರಿ ನಿರ್ದೇಶನಾಲಯ (ಇಡಿ) ಮುಟ್ಟುಗೋಲು ಹಾಕಿಕೊಂಡಿದೆ.
ಭ್ರಷ್ಟಾಚಾರ ತಡೆ ಕಾಯ್ದೆ ಪ್ರಕರಣದಲ್ಲಿ ಸಿಬಿಐ ಅಧಿಕಾರಿಗಳು, ಅಕಿಲ್ ಅಹ್ಮದ್ನನ್ನು ಬಂಧಿಸಿದ್ದರು. ತನಿಖೆ ವೇಳೆ ಅಕ್ರಮ ಹಣಕಾಸು ವಹಿವಾಟು ಬೆಳಕಿಗೆ ಬಂದಿದ್ದು, ಲಂಚದ ಹಣ 20 ಲಕ್ಷ ರೂ. ಜಪ್ತಿ ಮಾಡಿರುವುದಾಗಿ ಇಡಿ ಅಧಿಕಾರಿಗಳು ತಿಳಿಸಿದ್ದಾರೆ.
ಬೆಂಗಳೂರು-ಚೆನ್ನೈ ಎಕ್ಸ್ಪ್ರೆಸ್ ವೇ ಯೋಜನೆ ಗುತ್ತಿಗೆ ಕಂಪನಿ ದಿಲೀಪ್ ಬಿಲ್ಡ್ಕಾನ್ ಪ್ರೈ.ಲಿ. ಜನರಲ್ ಮ್ಯಾನೇಜರ್ ರತ್ನಾಕರ್ ಸಜೀಲಾಲ್ಗೆ ಒಪ್ಪಂದದ ಅನುಮೋದನೆ ಕೊಡಲು ಎನ್ಎಚ್ಎಐ ಪ್ರಾದೇಶಿಕ ಕಚೇರಿ ಅಧಿಕಾರಿ ಅಕಿಲ್ ಅಹ್ಮದ್, ಲಂಚಕ್ಕೆ ಬೇಡಿಕೆ ಒಡ್ಡಿದ್ದರು.
ಈ ಕುರಿತು ಗುತ್ತಿಗೆ ಕಂಪನಿ ನೀಡಿದ ದೂರಿನ ಮೇರೆಗೆ ಸಿಬಿಐ ಅಧಿಕಾರಿಗಳು, 2021ರ ಡಿಸೆಂಬರ್ 30ರಂದು ಗುತ್ತಿಗೆ ಕಂಪನಿ ಪರವಾಗಿ ದೆಹಲಿ ಮೂಲದ ಲೆಕ್ಕಪರಿಶೋಧಕನ ಬಳಿ ಲಂಚ ಪಡೆಯುವಾಗ ಅಕಿಲ್ ಅಹ್ಮದ್ನನ್ನು ಸಿಬಿಐ ಟ್ರ್ಯಾಪ್ ಮಾಡಿತ್ತು. ಈ ವೇಳೆ ಜಪ್ತಿಯಾದ ಲಂಚದ ಹಣ 20 ಲಕ್ಷ ರೂ. ವಶಕ್ಕೆ ಪಡೆಯಲಾಗಿದೆ ಎಂದು ಇಡಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.