ಮೈಸೂರು: ಕರೊನಾ ಹರಡುವಿಕೆಯಲ್ಲಿ ರಾಜ್ಯದಲ್ಲಿ ಮೈಸೂರು ಎರಡನೇ ಸ್ಥಾನದಲ್ಲಿದೆ. ಶೀಘ್ರವೇ ಮೈಸೂರಿಗರು ಆ್ಯಂಟಿಜೆನ್ ಟೆಸ್ಟ್ ಮಾಡಿಸಿಕೊಳ್ಳಬೇಕೆಂದು ನೂತನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಹೇಳಿದರು.
ಅಧಿಕಾರ ಸ್ವೀಕರಿಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಕರೊನಾ ಪರೀಕ್ಷೆ ತಡ ಮಾಡುವುದರಿಂದ ಪ್ರಾಣಹಾನಿ ಹೆಚ್ಚಾಗುತ್ತದೆ. ಇದೇ ಸಂದರ್ಭದಲ್ಲೂ ನಾಡಹಬ್ಬ ದಸರಾ ಆಚರಣೆಯ ಜವಾಬ್ದಾರಿಯು ಇದೆ. ಹೀಗಾಗಿ ಜನರು ಸಾಮಾಜಿಕ ಅಂತರ ಪಾಲಿಸಬೇಕು. ಮಾಸ್ಕ್ ಧರಿಸಬೇಕು ಮತ್ತು ಆಗಾಗ ಸ್ಯಾನಿಟೈಜ್ ಮಾಡಿಕೊಂಡರೆ ಮಾತ್ರ ಮಹಾಮಾರಿ ನಿಯಂತ್ರಣ ಸಾಧ್ಯ ಎಂದರು.
ಕರೊನಾ ವಿಚಾರದಲ್ಲಿ ಎಲ್ಲರ ಸಹಕಾರ ಅಗತ್ಯವಿದೆ. ತುರ್ತಾಗಿ ಅಧಿಕಾರಿಗಳ ಸಭೆ ನಡೆಸಿ ಆದಷ್ಟು ಬೇಗ ಮಾಹಿತಿ ಪಡೆದುಕೊಳ್ಳುತ್ತೇನೆ. ಮೈಸೂರು ನನಗೆ ಹೊಸದೇನಲ್ಲ. ಈ ಹಿಂದೆ ಐಎಟಿನಲ್ಲಿ ತರಬೇತಿ ಪಡೆದಿದ್ದೇನೆ. ಕೋವಿಡ್ ಹಾಗೂ ಈ ಬಾರಿಯ ದಸರಾ ಆಚರಣೆ ಬಗ್ಗೆ ಹೆಚ್ಚು ಒತ್ತು ನೀಡುತ್ತೇನೆಂದು ಹೇಳಿದರು.
ಇದನ್ನೂ ಓದಿ: ಬಿಜೆಪಿಯೊಳಗಿನ ಅಪ್ರಬುದ್ಧರ ಹೇಳಿಕೆಯಿಂದ ಯಡಿಯೂರಪ್ಪನವರಿಗೆ ಸಂಕಟ: ಕಿಡಿಕಾರಿದ ಕುಮಾರಸ್ವಾಮಿ
ಹೆಚ್ಚುವರಿ ಜಿಲ್ಲಾಧಿಕಾರಿಯಿಂದ ಅಧಿಕಾರ ಸ್ವೀಕಾರ
ಈ ಹಿಂದಿನ ಡಿಸಿ ಬಿ. ಶರತ್, ಮೈಸೂರಿನಲ್ಲೇ ಇದ್ದರೂ ಕಚೇರಿಗೆ ಬಾರದ ಹಿನ್ನೆಲೆಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಮಂಜುನಾಥ್ ಸ್ವಾಮಿ ಅವರಿಂದ ರೋಹಿಣಿ ಸಿಂಧೂರಿ ಅವರಿಗೆ ಅಧಿಕಾರ ಹಸ್ತಾಂತರವಾಯಿತು. ಕಲಬುರಗಿಯಿಂದ ಒಂದು ತಿಂಗಳ ಹಿಂದಷ್ಟೇ ಮೈಸೂರಿಗೆ ವರ್ಗಾವಣೆಯಾಗಿದ್ದ ಶರತ್ ಅವರನ್ನು ಮತ್ತೆ ವರ್ಗಾವಣೆ ಮಾಡಿರುವುದರಿಂದ ಅಸಮಾಧಾನಗೊಂಡಿದ್ದಾರೆಂದು ತಿಳಿದುಬಂದಿದೆ.
ಚಾಮುಂಡಿ ಬೆಟ್ಟಕ್ಕೆ ಭೇಟಿ
ಅಧಿಕಾರ ಸ್ವೀಕಾರಕ್ಕೂ ಮುನ್ನ ಚಾಮುಂಡಿ ಸನ್ನಿಧಿಗೆ ಭೇಟಿ ನೀಡಿದ ನೂತನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ, ನಾಡದೇವತೆ ಚಾಮುಂಡೇಶ್ವರಿಯ ದರ್ಶನ ಪಡೆದರು. ಈ ವೇಳೆ ರೋಹಿಣಿ ಸಿಂಧೂರಿ ಪತಿ ಸುಧೀರ್ ರೆಡ್ಡಿ ಸಹ ಜತೆಯಲ್ಲಿದ್ದರು. ದೇವಸ್ಥಾನಕ್ಕೆ ಆಗಮಿಸಿದ ರೋಹಿಣಿ ಸಿಂಧೂರಿ ದಂಪತಿಯನ್ನುದೇವಸ್ಥಾನ ಆಡಳಿತ ಮಂಡಳಿಯ ಕಾರ್ಯ ನಿರ್ವಾಹಕ ಅಧಿಕಾರಿ ಎನ್.ಎಸ್. ಯತಿರಾಜ್ ಸಂಪತ್ ಕುಮಾರನ್, ವ್ಯವಸ್ಥಾಪಕ ಗೋವಿಂದರಾಜು ಹಾಗೂ ಪ್ರಧಾನ ಅರ್ಚಕ ಡಾ.ಶಶಿಶೇಖರ್ ದೀಕ್ಷಿತ್ ಅವರು ಸ್ವಾಗತಿಸಿದರು. (ದಿಗ್ವಿಜಯ ನ್ಯೂಸ್)
ರೋಹಿಣಿ ಸಿಂಧೂರಿ ವರ್ಗಾವಣೆಗೆ ಕಾರಣವಾಯ್ತಾ ಸಿಎಂ ಬಿಎಸ್ವೈ ತಿರುಪತಿ ಭೇಟಿ..?!