ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ಅದ್ದೂರಿಯಲ್ಲಿ 2023ನ್ನು ಸ್ವಾಗತಿಸಲಾಯಿತು. ಹಾಡು, ಕುಣಿತ, ಮೋಜು-ಮಸ್ತಿ, ಪರಸ್ಪರ ಶುಭಾಶಯಗಳನ್ನು ವಿನಿಮಯ ಮಾಡುವ ಮೂಲಕ ಹಲವರು 2022ಕ್ಕೆ ಬೈ ಬೈ ಹೇಳಿ 2023ಕ್ಕೆ ಹಾಯ್ ಹಾಯ್ ಅಂದರು. ಕೆಲ ಯುವಕ-ಯುವತಿಯರು ಕಂಠಪೂರ್ತಿ ಕುಡಿದು ಕುಣಿದು ಕುಪ್ಪಳಿಸುತ್ತಾ ತೇಲಾಡಿದರು. ಕೆಲ ಗಲಾಟೆ ಗದ್ದಲಗಳಿಗೂ ಈ ಬಾರಿಯ ಹೊಸ ವರ್ಷ ಸಾಕ್ಷಿಯಾಯಿತು.
ಎಂ.ಜಿ ರಸ್ತೆ, ಬ್ರಿಗೇಡ್ ರಸ್ತೆಗಳಲ್ಲಿ ಹೊಸ ವರ್ಷಾಚರಣೆಗೆ ಸರ್ಕಾರ ಅನುಮತಿ ನೀಡಿದ್ದ ಹಿನ್ನೆಲೆಯಲ್ಲಿ ಹೆಚ್ಚಿನ ಜನಸಂಖ್ಯೆಯಲ್ಲಿ ಯುವ ಸಮೂಹ ಸೇರಿತ್ತು. ಪಾಶ್ಚಾತ್ಯ ಸಂಗೀತ, ಕಲರ್ಫುಲ್ ಲೈಟಿಂಗ್ಸ್, ಡಿಜೆ ಸದ್ದಿಗೆ ಹೆಜ್ಜೆ ಹಾಕಿದ ಯುವಕ-ಯುವತಿಯರು ಕುಣಿದು ಕುಪ್ಪಳಿಸಿ ರಾತ್ರಿ 12 ಗಂಟೆ ಆಗುತ್ತಿದ್ದಂತೆ “ಹ್ಯಾಪಿ ನ್ಯೂ ಇಯರ್’ ಎಂದು ಜೋರಾಗಿ ಕೂಗುತ್ತಾ, ತಮ್ಮ ಆಪ್ತರನ್ನು ತಬ್ಬಿಕೊಂಡು ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು. ಸಂಭ್ರಮಾಚರಣೆಗೆ ರಾತ್ರಿ 1 ಗಂಟೆವರೆಗೂ ಅವಕಾಶ ನೀಡಲಾಗಿತ್ತು. ಎಲ್ಲೆಡೆ ಪೊಲೀಸ್ ಕಣ್ಗಾವಲಿತ್ತು.
ಚರ್ಚ್ ಸ್ಟ್ರೀಟ್ನಲ್ಲಿ ಕೆಲ ಕಾಲ ಹೈಡ್ರಾಮ ನಡೆಯಿತು. ಕಂಠಪೂರ್ತಿ ಕುಡಿದು ರಸ್ತೆಯಲ್ಲೇ ಕೆಲ ಯುವಕ ಯುವತಿಯರು ತೇಲಾಡುತ್ತಿದ್ದರು. ಅವರೆಲ್ಲರನ್ನೂ ಮನೆಗೆ ಕಳಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು. ಸಂಭ್ರಮಾಚರಣೆಯ ಅವಧಿ ಮುಗಿಯುತ್ತಿದ್ದಂತೆ ಪ್ರತಿಯೊಬ್ಬರಿಗೂ ಮನೆಗೆ ಹೋಗುವಂತೆ ಮೈಕ್ನಲ್ಲಿ ಮೂಲಕ ಪೊಲೀಸರು ಅನೌನ್ಸ್ ಮಾಡುತ್ತಾ ಸೂಚನೆ ಕೊಡುತ್ತ ಜನರ ಗುಂಪನ್ನ ಚದುರಿಸಿದರು. ಎಂ.ಜಿ.ರಸ್ತೆಯಲ್ಲಿ ಜನಸಂದಣಿ ಹೆಚ್ಚಿದ್ದ ಕಾರಣ ಟ್ರಾಫಿಕ್ ಜಾಮ್ ಉಂಟಾಗಿತ್ತು. ಪಾರ್ಟಿ ವೇಳೆ ಅಸ್ವಸ್ಥರಾಗಿದ್ದ ಕೆಲ ಯುವತಿಯರನ್ನ ಲೇಡಿಸ್ ಸೇಫ್ಟಿ ಕ್ಯಾಂಪ್ಗೆ ಪೊಲೀಸ್ ಸಿಬ್ಬಂದಿ ಕರೆದೊಯ್ದರು. ಕೆಲವೆಡೆ ಯುವಕರು ಕುಡಿದು ರಸ್ತೆಬದಿಯಲ್ಲೇ ಬಿದ್ದಿದ್ದರು. ಜನರನ್ನ ಚದುರಿಸಲು ಪೊಲೀಸರು ಲಾಠಿಯನ್ನೂ ಎತ್ತಬೇಕಾಯಿತು.
ಎಂ.ಜಿ.ರಸ್ತೆ, ಬ್ರಿಗೇಡ್ ರಸ್ತೆ, ಚರ್ಚ್ ಸ್ಟ್ರೀಟ್ ಹಾಗೂ ಕೋರಮಂಗಲ, ಇಂದಿರಾನಗರ, ವೈಟ್ಫೀಲ್ಡ್ ಪ್ರದೇಶಗಳಲ್ಲಿನ ಬಾರ್, ಪಬ್, ಡಿಸ್ಕೊಥೆಕ್ ರೆಸ್ಟೋರೆಂಟ್ಗಳಲ್ಲಿ ಕಿಕ್ಕಿರಿದು ಜನ ಸೇರಿದ್ದರು. ಪಬ್ಗಳಲ್ಲಿ ಮಹಿಳಾ ಬಾಡಿಗಾರ್ಡ್ ಮತ್ತು ಪುರುಷ ಬಾಡಿರ್ಗಾರ್ಡ್ಗಳನ್ನು ನಿಯೋಜಿಸಲಾಗಿತ್ತು. ಅಗತ್ಯಕ್ಕಿಂತ ಹೆಚ್ಚಿನ ಜನರನ್ನು ಸೇರಿಸಬಾರದು ಎಂದು ಪೊಲೀಸರು ಕಟ್ಟು ನಿಟ್ಟಾಗಿ ಸೂಚಿಸಿದ್ದರು. ಕೆಲವರು ಅದನ್ನು ಉಲ್ಲಂಘಿಸಿ ಹೆಚ್ಚಿನ ಜನರನ್ನು ಸೇರಿಕೊಂಡಿರುವುದು ಕಂಡು ಬಂತು.
ಸಿಸಿ ಕ್ಯಾಮರಾ, ಡ್ರೋನ್ ಕಣ್ಗಾವಲು: ಎಂ.ಜಿ.ರಸ್ತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನೆರೆದಿದ್ದವರ ಮೇಲೆ ಕಣ್ಣಿಡಲು ಸಿಸಿ ಕ್ಯಾಮರಾ, ಡ್ರೋನ್ ಮತ್ತು ಭದ್ರತೆಗಾಗಿ 3 ಸಾವಿರಕ್ಕೂ ಅಧಿಕ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. 8ಕ್ಕೂ ಹೆಚ್ಚು ಡ್ರೋನ್ಗಳನ್ನು ಹಾರಿ ಬಿಡಲಾಗಿತ್ತು. ಅದು ಪ್ರತಿಯೊಬ್ಬರ ಚಲನ-ವಲನದ ದೃಶ್ಯವನ್ನು ಸೆರೆ ಹಿಡಿದು ನೀಡುತ್ತಿತ್ತು. ಹೆಣ್ಣು ಮಕ್ಕಳ ಸುರಕ್ಷತೆಗಾಗಿ ಪಿಂಕ್ ಪೊಲೀಸರನ್ನು ಸಹ ನಿಯೋಜನೆ ಮಾಡಲಾಗಿತ್ತು. ಆ ಸಿಬ್ಬಂದಿ ಹೆಣ್ಣು ಮಕ್ಕಳ ಜತೆ ಅನುಚಿತವಾಗಿ ವರ್ತನೆ ಮಾಡುವರರನ್ನು ಸೂಕ್ಷ್ಮವಾಗಿ ಗಮನಿಸುತ್ತಿತ್ತು. ಹೋಮ್ಗಾರ್ಡ್, ಸಿವಿಲ್ ಡಿಫೆನ್ಸ್ ಸಿಬ್ಬಂದಿಯ ನೆರವು ಪಡೆಯಲಾಗಿತ್ತು.
ಚರ್ಚ್ ಸ್ಟ್ರೀಟ್ ಬಳಿ ಸಂಚಾರ ದಟ್ಟಣೆಯನ್ನು ತಪ್ಪಿಸಲು ಮುನ್ನೆಚ್ಚರಿಕಾ ಕ್ರಮವಾಗಿ ವಾಹನಗಳ ಸಂಚಾರಕ್ಕೆ ನಿರ್ಬಂಧ ವಿಧಿಸಿ ಬ್ಯಾರಿಕೇಡ್ಗಳನ್ನು ಹಾಕಿ ಪಾದಚಾರಿ ಮಾರ್ಗಗಳ ಮೂಲಕ ಜನರ ಓಡಾಟ ನಡೆಸಲು ಅವಕಾಶ ಕಲ್ಪಿಸಲಾಗಿತ್ತು. ಹೀಗಾಗಿ ಈ ಭಾಗದಲ್ಲಿ ಹೆಚ್ಚಿನ ಸಂಚಾರ ದಟ್ಟಣೆ ಉಂಟಾಗಲಿಲ್ಲ. ಕೇಂದ್ರ ವಿಭಾಗದ ಡಿಸಿಪಿ ಶ್ರೀನಿವಾಸ್ ಗೌಡ ನೇತೃಡ ತಂಡ ಸ್ಥಳದಲ್ಲಿಯೇ ಬೀಡು ಬಿಟ್ಟಿತ್ತು.
ಹೆಲ್ಮೆಟ್ ಹಾಕಿಲ್ಲ ಎಂದು ಕಾರು ಮಾಲೀಕನಿಗೆ ನೋಟಿಸ್ ಕಳಿಸಿದ ಟ್ರಾಫಿಕ್ ಪೊಲೀಸರು! ಮಂಗಳೂರಲ್ಲಿ ಘಟನೆ