More

    ವಿದ್ಯಾರ್ಥಿಗಳ ಸಾಮರ್ಥ್ಯ ವೃದ್ಧಿಗೆ ಎನ್‌ಇಪಿ ಪೂರಕ: ನಾರಾಯಣ ಮೂರ್ತಿ

    ಬೆಂಗಳೂರು: ಯುವಜನರು ಮತ್ತು ವಿದ್ಯಾರ್ಥಿಗಳ ಸಬಲೀಕರಣಕ್ಕೆ ನೂತನ ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ 2020) ಪೂರಕ ಮತ್ತು ಸಮರ್ಪಕವಾಗಿದೆ ಎಂದು ಇನ್ಫೋಸಿಸ್ ಸಹ ಸಂಸ್ಥಾಪಕ ಎನ್. ಆರ್. ನಾರಾಯಣ ಮೂರ್ತಿ ಅಭಿಪ್ರಾಯಪಟ್ಟರು.

    ಬೆಂಗಳೂರು ಟೆಕ್ ಸಮಿಟ್‌ನಲ್ಲಿ ವಿಶೇಷ ಸಂವಾದದಲ್ಲಿ ಭಾಗವಹಿಸಿದ ಅವರು, ವಿದ್ಯಾರ್ಥಿಗಳು ಹೆಚ್ಚು ಸಮರ್ಥರಾಗಲು ಎನ್‌ಇಪಿ ನೆರವಾಗಲಿದೆ. ಇದಕ್ಕಾಗಿ ಪ್ರಧಾನಿ ೋದಿ ಹಾಗೂ ಎನ್‌ಇಪಿ ಕರಡು ರಚನೆ ಅಧ್ಯಕ್ಷ ಕೆ. ಕಸ್ತೂರಿ ರಂಗನ್ ಅಭಿನಂದನಾರ್ಹರು ಎಂದರು.

    ವಿದ್ಯಾರ್ಥಿಗಳು ಸ್ವತಂತ್ರವಾಗಿ ಚಿಂತನೆ ಮಾಡುವುದು, ಕ್ರಿಯಾತ್ಮಕವಾಗಿ ಆಲಿಸುವುದು, ವಿಶ್ಲೇಷಣಾ ಸಾಮರ್ಥ್ಯ ಹೆಚ್ಚಿಸಿಕೊಳ್ಳುವುದು ಅತ್ಯಗತ್ಯ. ಅಂತರ್ ಶಿಸ್ತೀಯ ವಿಷಯಗಳನ್ನು ಕಲಿಯುವುದು ಪ್ರಸಕ್ತ ಕಾಲಕ್ಕೆ ಮಹತ್ವದ್ದು. ಈ ನಿಟ್ಟಿನಲ್ಲಿ ಎನ್‌ಇಪಿ ಸಕಾರಾತ್ಮಕ ಹೆಜ್ಜೆಯಾಗಿದೆ ಎಂದು ಹೇಳಿದರು.
    ಭಾರತದಂತಹ ರಾಷ್ಟ್ರ ಅಭಿವೃದ್ಧಿ ಹೊಂದುವ ನಿಟ್ಟಿನಲ್ಲಿ ಸಹಾನುಕಂಪದಿಂದ ಕೂಡಿದ ಬಂಡವಾಳಶಾಹಿ ವ್ಯವಸ್ಥೆಯೇ ಅತ್ಯಂತ ಸೂಕ್ತ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

    ನನ್ನ ವಿದ್ಯಾರ್ಥಿ ದೆಸೆ ಹಾಗೂ ಯೌವನದಲ್ಲಿ ನಾನು ಕೂಡಾ ಬೇರೆ ನಿಲುವುಗಳನ್ನು ಹೊಂದಿದ್ದೆ. ಆದರೆ ಕಾಲಾನಂತರದಲ್ಲಿ ಇತರ ದೇಶಗಳ ಅಭಿವೃದ್ಧಿ ಹಾದಿ ಗಮನಿಸಿದ ಮೇಲೆ ಸಹಾನುಕಂಪದಿಂದ ಕೂಡಿದ ಬಂಡವಾಳಶಾಹಿಯಾಗಿ ಬದಲಾದೆ. ಫ್ರಾನ್ಸ್‌ನಲ್ಲಿ ನಾನು ಕಳೆದ ದಿನಗಳು ನನ್ನ ಚಿಂತನೆಯನ್ನು ಬದಲಾಯಿಸಿತು ಎಂದು ನಾರಾಯಣ ಮೂರ್ತಿ ತಮ್ಮ ಅನುಭವ ಹಂಚಿಕೊಂಡರು.

    ಪ್ರತಿ ಉದ್ಯಮಿಯೂ ಕೆಲವು ನಿಯಮಗಳನ್ನು ಅನುಸರಿಸಬೇಕು. ಸಮಾಜದ ಹಿತಾಸಕ್ತಿಯಲ್ಲಿ ಯಾವುದೇ ರಾಜಿ ಇಲ್ಲ. ಆಡಳಿತದ ಎಲ್ಲ ನಿಯಮಗಳ ಪಾಲನೆ, ನಿಯಮಿತ ತೆರಿಗೆ ಪಾವತಿ, ಉತ್ತಮ ನಾಗರಿಕ ಆಗುವುದು. ಈ ನಾಲ್ಕು ಅಂಶಗಳು ಬಹುಮುಖ್ಯ ಎಂದು ತಿಳಿಸಿದರು.

    ಯಾವುದೇ ವಸ್ತು ಉಚಿತವಾಗಿ ಕೊಡಬಾರದು

    ನಾಗರಿಕರಿಗೆ ಉಚಿತ ಕೊಡುಗೆಗಳ ಬಗ್ಗೆ ಅಭಿಪ್ರಾಯ ಹಂಚಿಕೊಂಡ ಅವರು, ಯಾವುದೇ ಸರಕು ಉಚಿತವಾಗಿ ದೊರಕಬಾರದು. ಪ್ರತಿಯೊಂದಕ್ಕೂ ಒಂದು ಮೌಲ್ಯವಿದೆ. ಹಾಗಂತ ನಾನು ಬಡಜನರಿಗೆ ಉಚಿತ ಕೊಡುಗೆ ನೀಡುವುದಕ್ಕೆ ವಿರೋಧ ವ್ಯಕ್ತಪಡಿಸುತ್ತಿಲ್ಲ. ನಾನು ಕೂಡ ಬಡತನದ ಹಿನ್ನೆಲೆಯಿಂದಲೇ ಬಂದವನು. ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಸುಮಾರು 80 ಕೋಟಿ ಜನರಿಗೆ ಉಚಿತ ಆಹಾರಧಾನ್ಯ ಯೋಜನೆಯನ್ನು ಇನ್ನೂ 5 ವರ್ಷ ವಿಸ್ತರಿಸಿದ್ದಾರೆ. ಇಂತಹ ಕ್ರಮಗಳು ಬಡಜನರಿಗೆ ಆಹಾರ ಖಾತ್ರಿಪಡಿಸುತ್ತವೆ ಎಂದು ಹೇಳಿದರು.
    ಉಚಿತ ಕೊಡುಗೆಗಳನ್ನು ಪಡೆದ ಜನರು ಸಮಾಜಕ್ಕೆ ಮರುಕೊಡುಗೆ ನೀಡುವ ತಮ್ಮ ಜವಾಬ್ದಾರಿ ಅರಿಯಬೇಕು. ಭವಿಷ್ಯದ ತಲೆಮಾರಿಗಾಗಿ ಕೊಡುಗೆ ನೀಡಬೇಕು ಎಂದು ನುಡಿದರು.

    ರಾಜಕೀಯ ನೇತಾರರಿಗೆ ಅಧ್ಯಯನ ಅಗತ್ಯ

    ಆರ್ಥಿಕ ಮತ್ತು ಔದ್ಯಮಿಕ ಅಭಿವೃದ್ಧಿಯಲ್ಲಿ ಚೀನಾ ಉತ್ತಮ ಸಾಧನೆ ಮಾಡಿದ್ದು, ಭಾರತ ಅದರಿಂದ ಕಲಿಯುವುದು ಸಾಕಷ್ಟಿದೆ. ಈ ಬಗ್ಗೆ ನಮ್ಮ ರಾಜಕೀಯ ನೇತಾರರು ಅಧ್ಯಯನ ಮಾಡಬೇಕು. ಯಾವುದೇ ಪಕ್ಷ ಅಧಿಕಾರ ವಹಿಸಿಕೊಂಡರೂ ದೇಶದ ಅಭಿವೃದ್ಧಿ ಮೊದಲ ಆದ್ಯತೆಯಾಗಬೇಕು. ದೇಶ ಮೊದಲು, ನಂತರ ಪಕ್ಷ ಎಂಬ ಮನೋಭಾವ ಬೆಳೆಯಬೇಕು ಎಂದು ನಾರಾಯಣಮೂರ್ತಿ ಹೇಳಿದರು. ಉದ್ಯಮಿ ನಿಖಿಲ್ ಕಾಮತ್ ಸಂವಾದ ನಡೆಸಿಕೊಟ್ಟರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts