ನಾಯಕನಹಟ್ಟಿ: ಕರೊನಾ ಆತಂಕದ ನಡುವೆಯೂ ಸೋಮವಾರ ಶ್ರೀ ಗುರುತಿಪ್ಪೇರುದ್ರಸ್ವಾಮಿ ಮರಿ ಪರಿಷೆ ವಿಜೃಂಭಣೆಯಿಂದ ನೆರವೇರಿತು.
ಮಾ.12 ರಂದು ಅದ್ದೂರಿಯಾಗಿ ತಿಪ್ಪೇರುದ್ರಸ್ವಾಮಿ ರಥೋತ್ಸವ ಜರುಗಿತ್ತು. ಇದಕ್ಕೆ ಬರಲು ಸಾಧ್ಯವಾಗದವರು ಮರಿ ಪರಿಷೆಗೆ ಬಂದು ಹರಕೆ ಸಲ್ಲಿಸುತ್ತಾರೆ. ಕರೊನಾ ಭೀತಿ ಹಿನ್ನ್ನೆಲೆ ಜಿಲ್ಲಾಡಳಿತ ಮರಿ ಪರಿಷೆ ನಿಷೇಧಿಸಿತ್ತು. ಇದ್ಯಾವುದನ್ನೂ ಲೆಕ್ಕಿಸದ ಸಾವಿರಾರು ಭಕ್ತರು ಒಳ ಹಾಗೂ ಹೊರಮಠಗಳಿಗೆ ಭೇಟಿ ನೀಡಿ ದೇವರ ದರ್ಶನ ಪಡೆದರು. ರಥದ ಬಳಿ ಕೊಬ್ಬರಿ ಸುಟ್ಟು ಹರಕೆ ಸಲ್ಲಿಸಿದರು.
ಪಪಂ ಆಡಳಿತ ಕಳೆದ ಶುಕ್ರವಾರದಿಂದಲೇ ಮರಿ ಪರಿಷೆ ನಿಷೇಧಿಸಿರುವ ಬಗ್ಗೆ ಧ್ವನಿವರ್ಧಕದ ಮೂಲಕ ಪ್ರಚಾರ ಮಾಡಿತ್ತು. ಅಲ್ಲದೇ ಜಾತ್ರೆಗೆ ಬಂದಿದ್ದ ಅಂಗಡಿ ಮುಂಗಟ್ಟುಗಳನ್ನು ಸಹ ತೆರವುಗೊಳಿಸಿತ್ತು.
ಸರಳವಾಗಿ ಜರುಗಿದ ವಾರೋತ್ಸವ: ಜಿಲ್ಲಾಡಳಿತ ಮರಿ ಪರಿಷೆ ನಿಷೇಧಿಸಿ ಆದೇಶ ಹೊರಡಿಸಿದ್ದರೂ ಸ್ಥಳೀಯರು, ದೇವಸ್ಥಾನ ಸಮಿತಿಯವರು ಸರಳವಾಗಿ ಸಂಪ್ರದಾಯದಂತೆ ಮರಿಪರಿಷೆ ಬಳಿಕ ವಾರೋತ್ಸವ ನೆರವೇರಿಸಿ ಜಾತ್ರೆಗೆ ತೆರೆ ಎಳೆಯಲಾಯಿತು. ಅಲಂಕೃತ ಬೆಳ್ಳಿ ಪಲ್ಲಕ್ಕಿಯಲ್ಲಿ ಶ್ರೀಸ್ವಾಮಿಯ ಉತ್ಸವ ಮೂರ್ತಿ ಪ್ರತಿಷ್ಠಾಪಿಸಿ ಒಳಮಠದಿಂದ ಹೊರಮಠಕ್ಕೆ ಮೆರವಣಿಗೆ ಮೂಲಕ ಕರೆತರಲಾಯಿತು. ಈ ವೇಳೆ ನೆರೆದಿದ್ದ ಭಕ್ತರು ದೇವರಿಗೆ ಹಣ್ಣು ಕಾಯಿ ಕೊಟ್ಟು ಭಕ್ತಿ ಸಮರ್ಪಿಸಿದರು.