ಪಟಿಯಾಲ: 1988ರ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಕ್ರಿಕೆಟಿಗ, ರಾಜಕಾರಣಿ ನವಜೋತ್ ಸಿಂಗ್ ಸಿಧು 10 ತಿಂಗಳ ಸಜೆಯನ್ನು ಮುಗಿಸಿ ಶನಿವಾರ ಪಟಿಯಾಲ ಜೈಲಿನಿಂದ ಬಿಡುಗಡೆಯಾಗಿದ್ದಾರೆ.
ಜೈಲಿನಿಂದ ಬಿಡುಗಡೆಯಾದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಸಿಧು ದೇಶದ ಸಂವಿಧಾನ ಅಪಾಯದಲ್ಲಿದೆ. ದೇಶದಲ್ಲಿ ಸರ್ವಾಧಿಕಾರತ್ವ ತಲೆದೂರಿದಾಗ ರಾಹುಲ್ ಗಾಂಧಿ ನೇತೃತ್ವದಲ್ಲಿ ದೊಡ್ಡ ಕ್ರಾಂತಿ ಆಯಿತು.
ಪಂಜಾಬ್ನಲ್ಲಿ ತನ್ನ ಬದ್ಧ ವೈರಿ ಎಎಪಿ ಆಡಳಿತ ನಡೆಸುತ್ತಿರುವುದನ್ನು ಸಹಿಸಲಾರದೆ ಬಿಜೆಪಿ ರಾಷ್ಟ್ರಪತಿ ಆಳ್ವಿಕೆ ಹೇರಲು ಯತ್ನಿಸುತ್ತಿದೆ. ಈ ಮೂಲಕ ಪಂಜಾಬ್ ರಾಜ್ಯವನ್ನು ದುರ್ಬಲ ಮಾಡಲು ಯತ್ನಿಸುತ್ತಿದ್ದಾರೆ. ನಾನು ರಾಹುಲ್ ಗಾಂಧಿ, ಪ್ರಿಯಾಂಕ ಗಾಂಧಿ, ಕಾಂಗ್ರೆಸ್ ಕಾರ್ಯಕರ್ತರ ಜೊತೆ ನಿಂತು ಇದನ್ನು ದಿಟ್ಟವಾಗಿ ಎದುರಿಸುತ್ತೇನೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಕಾರ್ಗೋ ವಿಮಾನಕ್ಕೆ ಹಕ್ಕಿ ಡಿಕ್ಕಿ; ದೆಹಲಿ ವಿಮಾನ ನಿಲ್ದಾಣದಲ್ಲಿ ತುರ್ತು ಭೂ ಸ್ಪರ್ಶ
ನಾನು ನನ್ನ ಸಹೋದರ ಭಗವಂತ್ ಮಾನ್ ಅವರನ್ನು ಕೇಳಲು ಬಯಸುತ್ತೇನೆ, ನೀವು ಪಂಜಾಬಿನ ಜನರನ್ನು ಸುಳ್ಳು ಭರವಸೆಗಳನ್ನು ನೀಡುವ ಮೂಲಕ ಏಕೆ ಮೂರ್ಖರನ್ನಾಗಿಸಿದ್ದೀರಿ. ಚುನಾವಣೆಗೂ ಮುನ್ನ ನೀವು ಹಾರಿಸಿದ ಹಾಸ್ಯ ಚಟಾಕಿಗಳು ಹಾಗೂ ಭರವಸೆಗಳು ಕೇವಲ ಕಾಗದದ ಮೇಲೆ ಉಳಿದಿದೆ ಎಂದು ಪಂಜಾಬ್ ಸಿಎಂ ಭಗವಂತ್ ಮಾನ್ ವಿರುದ್ದ ಹರಿಹಾಯ್ದಿದ್ದಾರೆ.
ಇನ್ನು ಜೈಲಿನಿಂದ ಬಿಡುಗಡೆಯಲ್ಲಿ ವಿಳಂಬವಾಗಿದ್ದರ ಕುರಿತು ಪ್ರತಿಕ್ರಿಯಿಸಿ ನಾನು ಹೊರಗಡೆ ಬರುವ ವೇಳೆಗೆ ಮಾಧ್ಯಮದವರು ಇಲ್ಲಿಂದ ಹೊರಟು ಹೋಗಿರುತ್ತಾರೆ ಎಂದು ನನ್ನ ಬಿಡುಗಡೆಯಲ್ಲಿ ವಿಳಂಬ ಮಾಡಿದ್ದಾರೆ ಎಂದು ಸಿಧು ಬಿಜೆಪಿ ವಿರುದ್ದ ಆರೋಪಿಸಿದ್ದಾರೆ.