ಶಿವಮೊಗ್ಗ: ಕೇಂದ್ರ ಸರ್ಕಾರದ ಯುವ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯ, ಶಿವಮೊಗ್ಗದ ನೆಹರು ಯುವ ಕೇಂದ್ರದಿಂದ 75ನೇ ವರ್ಷದ ಸ್ವಾತಂತ್ರ್ಯೋತ್ಸವದ ಅಂಗವಾಗಿ ಆ.13ರಿಂದ 15ರವರೆಗೆ ಪ್ರತಿ ಮನೆಯಲ್ಲೂ ರಾಷ್ಟ್ರಧ್ವಜ ಹಾರಿಸೋಣ ಅಭಿಯಾನ ಹಮ್ಮಿಕೊಂಡಿದೆ ಎಂದು ನೆಹರು ಯುವ ಕೇಂದ್ರ ಅಧಿಕಾರಿ ಕೆ.ಟಿ.ಕೆ.ಉಲ್ಲಾಸ್ ತಿಳಿಸಿದರು.
ನಗರದ ನೆಹರು ಯುವ ಕೇಂದ್ರದ ಕಚೇರಿಯಲ್ಲಿ ಗುರುವಾರ ರಾಷ್ಟ್ರಧ್ವಜ ಪ್ರದರ್ಶನಗೊಳಿಸಿ ಮಾತನಾಡಿ, ಪ್ರತಿ ಮನೆಯಲ್ಲೂ ರಾಷ್ಟ್ರಧ್ವಜ ಹಾರಿಸುವ ಮೂಲಕ ದೇಶದ ಮೇಲಿರುವ ಅಭಿಮಾನ ತೋರಿಸಬೇಕಿದೆ ಎಂದರು.
ಈ ಅಭಿಯಾನದಲ್ಲಿ ಯುವಕ, ಯುವತಿಯರು ಈಗಾಗಲೇ ಹೊಂದಿರುವ ಸಂಘಗಳನ್ನು ನವೀಕರಣಗೊಳಿಸಬಹುದು. ಹಳ್ಳಿಗಳಲ್ಲಿರುವ ಸಾಂಸ್ಕೃತಿಕ, ಕ್ರೀಡೆ ಮತ್ತಿತರ ಚಟುವಟಿಕೆಗಳಿಗೆ ಸಂಬಂಧಪಟ್ಟ ಸಂಘಗಳನ್ನು ನೋಂದಾವಣೆ ಮಾಡಬಹುದು. ಈ ವರ್ಷದ ಕಾರ್ಯಕ್ರಮಗಳನ್ನು ತಮ್ಮ ಸಂಘದಿಂದ ನಡೆಸಿಕೊಡಲು ಬೇಕಾದ ವಿವರ ಪಡೆಯಬಹುದು. ಸಂಘಗಳನ್ನು ಅಭಿವೃದ್ಧಿಗೊಳಿಸುವುದು ಅಭಿಯಾನದ ಮುಖ್ಯ ಉದ್ದೇಶವಾಗಿದೆ ಎಂದರು. ನವೀನ್ ಮಂಡೇನಕೊಪ್ಪ ಇದ್ದರು.