ಆನಂದಪುರ: ಸಮೀಪದ ಗಿಳಾಲಗುಂಡಿಯಲ್ಲಿ ಸ್ಥಾಪಿಸಿರುವ ನರಸೀಪುರದ ನಾಟಿ ವೈದ್ಯ ನಾರಾಯಣ ಮೂರ್ತಿ ಔಷಧ ವಿತರಣಾ ಕೇಂದ್ರ ಬುಧವಾರ ಉದ್ಘಾಟನೆಗೊಂಡಿತು.
ಕೇಂದ್ರಕ್ಕೆ ಚಾಲನೆ ಅನ್ನಪೂರ್ಣ ನಾರಾಯಣಮೂರ್ತಿ ಮಾತನಾಡಿ, ತಮ್ಮ ಪತಿ ವೈದ್ಯ ನಾರಾಯಣ ಮೂರ್ತಿ ಅವರು ಕಂಡ ಕನಸು ನನಸಾಗಿದೆ. ರಾಜ್ಯ ಹಾಗೂ ಹೊರ ರಾಜ್ಯದಿಂದ ಬರುವ ರೋಗಿಗಳಿಗೆ ಅನುಕೂಲವಾಗಲಿ ಎಂದು ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲೇ ಕೇಂದ್ರವನ್ನು ಸ್ಥಾಪಿಸಲಾಗಿದೆ. ಮೂಲ ಸೌಕರ್ಯ ಕಲ್ಪಿಸಲಾಗಿದೆ. ವೈಜ್ಞಾನಿಕವಾಗಿ ಔಷಧ ಕ್ಷೇತ್ರದಲ್ಲಿ ಸಾಕಷ್ಟು ಸಂಶೋಧನೆ ನಡೆದರೂ ಗಿಡ ಮೂಲಿಕೆ ಔಷಧ ಕೆಲವು ಕಾಯಿಲೆಗೆ ರಾಮಬಾಣ ಎಂದರು.
ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಮಾತನಾಡಿ, ಗಿಡ ಮೂಲಿಕೆ ಔಷಧ ತಯಾರಿಕೆ ಜ್ಞಾನ ಮುಂದಿನ ಪೀಳಿಗೆಗೆ ತಲುಪಬೇಕು. ಇಂತಹ ಅಪರೂಪದ ಕಾರ್ಯ ನಡೆಸಿದ ನಾರಾಯಣ ಮೂರ್ತಿ ಮಲೆನಾಡಿನ ಹೆಮ್ಮೆಯ ನಾಟಿ ವೈದ್ಯ ಎಂದು ಬಣ್ಣಿಸಿದರು.
ಮಾಜಿ ಸಚಿವ ಹರತಾಳು ಹಾಲಪ್ಪ ಮಾತನಾಡಿ, ಗಿಡ ಮೂಲಿಕೆಗಳ ಔಷಧ ಸೇವನೆ ಅಡ್ಡ ಪರಿಣಾಮ ಬೀರದು. ಹಲವರು ಇಲ್ಲಿನ ಔಷಧ ಪಡೆದು ಮರುಜೀವ ಪಡೆದಿದ್ದಾರೆ ಎಂದರು. ನಾರಾಯಣ ಮೂರ್ತಿ ಸೆಂಟರ್ನ ಪ್ರಮುಖರಾದ ಶುಭಾ ನಾರಾಯಣ ಮೂರ್ತಿ, ರಾಘವೇಂದ್ರ ನಾರಾಯಣ ಮೂರ್ತಿ, ಸುಜನ್, ಗ್ರಾಪಂ ಸದಸ್ಯ ಪ್ರಕಾಶ್ ತಂಗಳವಾಡಿ, ಕೆ.ಆರ್.ರಾಜು ಇತರರಿದ್ದರು.